ಬೆಂಗಳೂರು : ದೆಹಲಿಯಿಂದ ಹೊರಟ್ಟಿದ್ದ ಮೊದಲ ವಿಶೇಷ ಶ್ರಮಿಕ್ ರೈಲು ಇಂದು ಬೆಳಗ್ಗೆ ನಗರದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದು ತಲುಪಿದೆ.
ವಿಶೇಷ ರೈಲಿನಲ್ಲಿ ವಿದ್ಯಾರ್ಥಿಗಳು ಸೇರಿ ಒಟ್ಟು 900 ಪ್ರಯಾಣಿಕರು ಆಗಮಿಸಿದ್ದಾರೆ. ಎಲ್ಲರಿಗೂ ಮೆಜೆಸ್ಟಿಕ್ ಸುತ್ತಮುತ್ತಲಿನ ಗಾಂಧಿನಗರ, ಚಿಕ್ಕಪೇಟೆ, ಕಾಟನ್ ಪೇಟೆಯ ಸುಮಾರು 90 ಹೋಟೆಲ್ಗಳಲ್ಲಿ 14 ದಿನಗಳ ಕ್ವಾರಂಟೈನ್ಗೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ರೈಲಿನಿಂದ ಇಳಿಯುತ್ತಿದ್ದಂತೆ 11 ಬಿಎಂಟಿಸಿ ಬಸ್ಗಳ ಮೂಲಕ ಅವರನ್ನು ಕ್ವಾರಂಟೈನ್ ಕೇಂದ್ರಗಳಿಗೆ ಕರೆದುಕೊಂಡು ಹೋಗಲಾಗಿದೆ. ರೈಲು ಆಗಮನಕ್ಕಿಂತ ಮುನ್ನವೇ ಪ್ರತಿ ಬೋಗಿಯ ಪ್ರಯಾಣಿಕರಿಗೂ ಸ್ಥಳೀಯ ಹೋಟೆಲ್ಗಳ ಮಾಹಿತಿ ನೀಡಲಾಗಿತ್ತು. ಜೊತೆಗೆ ಕ್ವಾರಂಟೈನ್ ಹೋಟೆಲ್ಗಳಲ್ಲಿ ಊಟ, ವಸತಿ ಸೇರಿ ಒಟ್ಟು ವೆಚ್ಚದ ಬಗ್ಗೆ ಮಾಹಿತಿ ನೀಡಲಾಗಿತ್ತು.
ಪ್ರಯಾಣಿಕರಿಗೆಲ್ಲರಿಗೂ ಆಯ್ಕೆಯ ಕ್ವಾರಂಟೈನ್ ಕೇಂದ್ರಗಳಿಗೆ ತೆರಳುವ ಅವಕಾಶ ನೀಡಲಾಗಿತ್ತು. ದುಬಾರಿ ವೆಚ್ಚ ಮಾಡಿ ಖಾಸಗಿ ಹೋಟೆಲ್ಗಳಲ್ಲಿ ಉಳಿಯಲು ಅಸಾಧ್ಯವಾದವರಿಗೆ ಸರ್ಕಾರಿ ಹಾಸ್ಟೆಲ್ಗಳು ಮತ್ತು ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ರೈಲು ಆಗಮಿಸುವ ಮುನ್ನವೇ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿಶೇಷ ರೈಲಿನಲ್ಲಿ ಬಂದ ಪ್ರಯಾಣಿಕರು, ಆರೋಗ್ಯಾಧಿಕಾರಿಗಳು, ಬಿಬಿಎಂಪಿ ಸಿಬ್ಬಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಜೊತೆಗೆ ಪೊಲೀಸರು ಸೂಚಿಸಿದ ಗೇಟ್ಗಳ ಹೊರತು ಇತರ ಗೇಟ್ಗಳ ಮೂಲಕ ಪ್ರವೇಶ ನಿರಾಕರಿಸಲಾಗಿತ್ತು. ಗೇಟ್ಗಳ ಬಳಿ ಬ್ಯಾರಿಕೇಡ್ ಹಾಕಿ ವಿಶೇಷ ಭದ್ರತೆ ಕಲ್ಪಿಸಲಾಗಿತ್ತು.