ಬೆಂಗಳೂರು : ವಿಧಿಯಾಟ ಏನಿರುತ್ತೆ ಎಂಬುದನ್ನು ಯಾರು ಊಹಿಸಲು ಸಾಧ್ಯವಿಲ್ಲ. ಈಗ ಇದ್ದವರು ಹತ್ತು ನಿಮಿಷದಲ್ಲಿ ಇರಲ್ಲ. ಅಂತಹದ್ದೇ ಒಂದು ಘಟನೆ ಬೆಂಗಳೂರಿನ ವಿಜಯನಗರ ಸಮೀಪದ ಮಾರೇನಹಳ್ಳಿಯಲ್ಲಿ ಸಂಭವಿಸಿದ್ದು, ತಾಯಿ-ಮಗ ದುರಂತ ಅಂತ್ಯ ಕಂಡಿರುವ ಘಟನೆ ನಡೆದಿದೆ.
ತಾಯಿ ಲೀಲಾವತಿ, ಮಗ ಮೋಹನ್ ಎಂಬುವರು ಸಾವಿಗೀಡದವರು. ಲೀಲಾವತಿ ಮಾರೇನಹಳ್ಳಿ ನಿವಾಸಿಯಾಗಿದ್ದು, ಇವರ ಗಂಡ ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ದಂಪತಿ ಇಬ್ಬರು ಗಂಡು ಮಕ್ಕಳೊಂದಿಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು.

ಈ ನಡುವೆ ಕಾಲೇಜಿಗೆ ಹೋಗಿದ್ದ ಮಗ ಮೋಹನ್ ಗೌಡ ಸ್ನೇಹಿತರೊಂದಿಗೆ ಬೈಕ್ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದ. ಆ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪೊಲೀಸರು ಬುದ್ಧಿ ಮಾತು ಹೇಳಿ ಕಳಿಸಿದ್ದರು. ಅಷ್ಟಕ್ಕೆ ಮನನೊಂದ ಯುವಕ ನೇಣಿಗೆ ಶರಣಾಗಿದ್ದಾನೆ. ಇದನ್ನು ಗಮನಿಸಿದ ಮನೆಯವರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದರಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಇದರಿಂದ ಕಂಗಾಲಾದ ಮೋಹನ್ ತಾಯಿ ಲೀಲಾವತಿ ಪ್ರೀತಿಯಿಂದ ಸಾಕಿದ ಮಗನೆ ಹೋದ ಮೇಲೆ ನಾನು ಯಾರಿಗಾಗಿ ಬದುಕಿರಲಿ ಎಂದು ಕಣ್ಣೀರಿಡುತ್ತಾ ಆಸ್ಪತ್ರೆಯಿಂದ ಹೊರ ಬಂದಿದ್ದಾಳೆ. ಈ ವೇಳೆ ವೇಗವಾಗಿ ಬಂದ ಕಾರೊಂದು ಲೀಲಾವತಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಗಂಭೀರವಾದ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ವಿಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಅಪಘಾತ ಎನ್ನುವುದಾದರೂ ಸ್ಥಳದಲ್ಲಿ ಸಿಕ್ಕ ಸಿಸಿಟಿವಿ ದೃಶ್ಯದಲ್ಲಿ ಲೀಲಾವತಿಯೇ ಕಾರಿಗೆ ಅಡ್ಡ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ.
ಓದಿ: ದೆಹಲಿ ಪ್ರವಾಸ? "ಎಲ್ಲಿಯೂ ಹೋಗಿಲ್ಲ ಇಲ್ಲೆ ಇರುವೆ": ಈಟಿವಿ ಭಾರತದ ಜತೆ ಮಾತನಾಡಿದ ಆನಂದ್ ಸಿಂಗ್