ಬೆಂಗಳೂರು: ತಮ್ಮ ಕಾರ್ಯಗಳ ಮೂಲಕ ಮರಣ ನಂತರವೂ ಜೀವಂತವಾಗಿರುವವರು ಮಹಾನ್ ನಾಯಕ ಶ್ರೀ ಸಿರಸಂಗಿ ಲಿಂಗರಾಜರು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಭಂಟರ ಸಂಘದ ಭವನದಲ್ಲಿ ನಡೆದ ಸಿರಸಂಗಿ ಲಿಂಗರಾಜರ 160ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ದೇಶದ 600 ಸಂಸ್ಥಾನಗಳ ಪೈಕಿ ಸಮಸ್ತ ತನ್ನ ಸಂಸ್ಥಾನದ ಆಸ್ತಿಯನ್ನು ಸಮಾಜದ ಮಕ್ಕಳ ಶಿಕ್ಷಣಕ್ಕೆ ನೀಡಿದ ಏಕೈಕ ಸಂಸ್ಥಾನ ಸಿರಸಂಗಿ ಸಂಸ್ಥಾನದ ದೊರೆ ಲಿಂಗರಾಜ ದೇಸಾಯಿಯವರು. ಅವರ ದೂರದೃಷ್ಟಿಯ ಫಲ ಬಿ.ಡಿ.ಜತ್ತಿ, ವಿ.ಜಿ.ಮಳಿಮಠ, ಡಿ.ಸಿ.ಪಾವಟೆ ಅವರಂತಹ ಮಹನೀಯರು ಹೊರಹೊಮ್ಮಲು ಲಿಂಗಾಯತ ಫಂಡ್ ಕಾರಣವಾಗಿದೆ ಎಂದರು.
ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ಉತ್ತರ ಕರ್ನಾಟಕದ ಐತಿಹಾಸಿಕ ವ್ಯಕ್ತಿಗಳನ್ನು ಕೇವಲ ಜಿಲ್ಲೆಗೆ ಸೀಮಿತಗೊಳಿಸಿದ್ದೇವೆ. ಕರ್ನಾಟಕದಲ್ಲಿ ಅಲ್ಲದೇ ದೇಶದ ಇತಿಹಾಸದಲ್ಲಿಯೇ ಅತೀ ದೊಡ್ಡ ದಾನ ಮಾಡಿದ ಸಿರಸಂಗಿ ಲಿಂಗರಾಜ ದೇಸಾಯಿಯವರ ಜಯಂತಿಯನ್ನು ಮುಂದಿನ ವರ್ಷಗಳಲ್ಲಿ ಮುಂಬೈ - ದೆಹಲಿ ಸೇರಿದಂತೆ ವಿವಿಧ ಭಾಗಗಳಲ್ಲಿ ಆಚರಿಸೋಣ ಎಂದರು.
ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪನೆಗೆ ಕಾರಣರಾದವರು ಸಿರಸಂಗಿ ಲಿಂಗರಾಜರು. ಮಹಾಸಭೆಯ ಪ್ರಥಮ ಹಾಗೂ ದ್ವಿತೀಯ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದವರು ಲಿಂಗರಾಜರು. ಮುಂದಿನ ಜಯಂತಿಯನ್ನು ನಾನೇ ನೇತೃತ್ವ ವಹಿಸಿ, ಧಾರವಾಡದಲ್ಲಿ ಸಂಘಟನೆ ಮಾಡುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಂ.ಬಿ.ಪಾಟೀಲ್ ರಾಜ್ಯದಲ್ಲಿ ಶೇ.18ಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಲಿಂಗಾಯತರು ಉಪಪಂಗಡಗಳಲ್ಲಿ ಹಂಚಿಹೋಗದೆ, ಒಂದಾಗಿ, ಒಗ್ಗಟ್ಟಾಗಿ ನಮ್ಮ ಸಮುದಾಯದ ಹಕ್ಕನ್ನು ಪ್ರತಿಪಾದಿಸಬೇಕಾಗಿದೆ. ಝಾನ್ಸಿ ರಾಣಿಗಿಂತಲೂ ಮುಂಚೆಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ, ಕಿತ್ತೂರು ರಾಣಿ ಚೆನ್ನಮ್ಮನವರನ್ನು, ಸಮಸ್ತ ವೀರಶೈವ - ಲಿಂಗಾಯತ ಸಮುದಾಯಕ್ಕೆ ಭದ್ರ ಅಡಿಪಾಯ ಹಾಕಿದ ಸಿರಸಂಗಿ ಲಿಂಗರಾಜರನ್ನು ನಾವು ಹೊರಗಡೆ ಪರಿಚಯಿಸುವ ಕಾರ್ಯ ಮಾಡಿಲ್ಲ. ಅವರನ್ನು ಸೀಮಿತಗೊಳಿಸುತ್ತಿದ್ದೇವೆ ಎಂದರು.
ಗದಗ ತೋಂಟದಾರ್ಯ ಜಗದ್ಗುರು ಡಾ.ಸಿದ್ಧರಾಮ ಮಹಾಸ್ವಾಮಿಗಳು, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಮಹಾಸ್ವಾಮಿಗಳು, ಅಥಣಿ ಗಚ್ಚಿನಮಠದ ಶಿವಬಸವ ಮಹಾಸ್ವಾಮಿಗಳು, ಇಂಡಿಯ ಸ್ವರೂಪಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿ, ಲಿಂಗರಾಜರ ಸಾಧನೆಯನ್ನು, ನಾಡಿಗೆ ಲಿಂಗಾಯತ ಸಮುದಾಯದ ಕೊಡುಗೆಯನ್ನು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್, ಮಾಜಿ ಶಾಸಕ ಎನ್.ಎಸ್.ಖೇಡ, ಗಂಗಮ್ಮ ಈಶಣ್ಣ ಗುಳಗಣ್ಣವರ, ಸ್ವಾಗತ ಸಮಿತಿ ಅಧ್ಯಕ್ಷ ಶಂಕರ ಪಾಟೀಲ ಉಪಸ್ಥಿತರಿದ್ದರು.