ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ಗಳ ಮೂಲಕ ಕಿಡಿಕಾರಿದ್ದಾರೆ.
ಅಮಿತ್ ಶಾ ರಾಜ್ಯ ಭೇಟಿ ಸಂದರ್ಭದಲ್ಲಿ ಟ್ವೀಟ್ ಮೂಲಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದು, ಹಲವು ಪ್ರಶ್ನೆಗಳನ್ನು ಶಾ ಮುಂದಿಟ್ಟಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರೇ, ಕಳಸಾ-ಬಂಡೂರಿ ಯೋಜನೆ ಬಗ್ಗೆ ನಿಮ್ಮ ಪಕ್ಷ ಎರಡು ನಾಲಿಗೆಯಲ್ಲಿ ಯಾಕೆ ಮಾತನಾಡುತ್ತಿದೆ? ಚುನಾವಣೆಯ ಮೊದಲು ನಮ್ಮ ಪರ, ಈಗ ಗೋವಾ ಪರ. ಹುಬ್ಬಳ್ಳಿ ಸಭೆಯಲ್ಲಿ ಒಂದೇ ನಾಲಗೆಯಲ್ಲಿ ಸ್ಪಷ್ಟೀಕರಣ ಕೊಟ್ಟು ಬಿಡಿ ಎಂದಿದ್ದಾರೆ.
ಮೊದಲು ಬಾಕಿ ನೆರೆ ಪರಿಹಾರ ಪಾವತಿ ನಂತರ ಸಿಎಎ, ಎನ್ಆರ್ಸಿ ಬಗ್ಗೆ ಯೋಚಿಸಿ. ಸಿಎಎ,ಎನ್ಆರ್ಸಿ ಮೂಲಕ ದೇಶ ಒಡೆಯುವ ಕೆಲಸಕ್ಕೆ ಸ್ವಲ್ಪ ವಿರಾಮ ನೀಡಿ, ನೆರೆಹಾವಳಿಯಿಂದ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ಸಂತ್ರಸ್ತರ ಕಡೆ ಗಮನ ಕೊಡಿ ಎಂದು ಖಾರವಾಗಿ ನುಡಿದಿದ್ದಾರೆ.
ಮಿಸ್ಟರ್ ಅಮಿತ್ ಶಾ, ಸಿಎಂ ಯಡಿಯೂರಪ್ಪ ಪ್ರವಾಹದ ನಷ್ಟಕ್ಕೆ 35 ಸಾವಿರ ಕೋಟಿ ಹಣವನ್ನು ಕೇಳಿದರೆ 1,870 ಕೋಟಿ ಹಣ ಕೊಟ್ಟಿದ್ದೀರಿ. ಉಳಿದ ಬಾಕಿ ಹಣ ಯಾವಾಗ ಕೊಡುತ್ತೀರಿ? ನೀವು ಜನರ ನಡುವೆ ವಿಭಜನೆ ಆಗುವಂತ ಯೋಜನೆ ಜಾರಿಗೆ ತಂದಿದ್ದೀರಿ, ಇದರಲ್ಲಿ ಜನರ ಬ್ರೇನ್ ವಾಷ್ ಮಾಡೋ ಮೊದಲು ಪ್ರವಾಹ ಪೀಡಿತ ಸ್ಥಳಗಳಿಗೆ ಯಾಕೆ ಭೇಟಿ ಕೊಟ್ಟು ಕೇಂದ್ರ ನೀಡಿದ ಪರಿಹಾರದ ಬಗ್ಗೆ ಮರು ಪರಿಶೀಲನೆ ಮಾಡಬಾರದು? ಸಿಎಎ, ಎನ್ಆರ್ಸಿ ಜಾರಿಗೆ ತಂದ ಬಳಿಕ ಸರ್ಕಾರದಲ್ಲಿ ಹಣ ಉಳಿದಿರುತ್ತದಾ? ಮಿಸ್ಟರ್ ಅಮಿತ್ ಶಾ, ಮಹದಾಯಿ ವಿಚಾರದಲ್ಲಿ ನಿಮ್ಮ ಸಹೋದ್ಯೋಗಿಗಳು ವ್ಯತಿರಿಕ್ತವಾದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ನಿಮ್ಮ ನಿಲುವು ಯಾಕೆ ಬದಲಾಯ್ತು..? ಈ ವಿಚಾರದಲ್ಲಿ ನಿಮ್ಮ ನಿಲುವೇನು? ಎಂದು ಅಮಿತ್ ಶಾಗೆ ಪ್ರಶ್ನೆಹಾಕಿದ್ದಾರೆ.
ಮಂಗಳೂರು ನಕಲಿ ಎನ್ಕೌಂಟರ್:
ಮಂಗಳೂರಲ್ಲಿ ಇಬ್ಬರು ಅಮಾಯಕರ ಸಾವು ನಕಲಿ ಎನ್ಕೌಂಟರ್ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ. ದೇಶದ ಗೃಹ ಸಚಿವರಾಗಿ ಇದರ ನಿಷ್ಪಕ್ಷಪಾತ ತನಿಖೆ ಆಗಬೇಕು ಅಂತ ನಿಮಗೆ ಅನಿಸೋದಿಲ್ಲವೇ..? ಇದು ಜನರ ಕೂಗಾಗಿದೆ ಎಂದಿದ್ದಾರೆ.