ಬೆಂಗಳೂರು: ನಾಗಪುರದಲ್ಲಿ ಸ್ವಾಮೀಜಿ ಹತ್ಯೆಗೆ ಕಾರಣವನ್ನು ಬಹಿರಂಗ ಪಡಿಸಬೇಕು. ಈ ಸಂಬಂಧ ನಮ್ಮ ಗೃಹ ಸಚಿವರು ಅಲ್ಲಿನ ಗೃಹ ಸಚಿವರ ಜೊತೆ ಚರ್ಚಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
ಬೆಂಗಳೂರಿನ ವೀರಶೈವ ಮಹಾಸಭಾ ಕಚೇರಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಗ್ರಾಮ ಮಠವೊಂದರಲ್ಲಿ ಕರ್ನಾಟಕ ಮೂಲದ ಸ್ವಾಮೀಜಿಗಳಾದ ಶ್ರೀ ನಿರ್ಣಯ ರುದ್ರಪಶುಪತಿ ಶಿವಾಚಾರ್ಯರು ಮತ್ತು ಅವರ ಸಹಾಯಕರನ್ನು ಹತ್ಯೆ ಮಾಡಿರುವ ಘಟನೆ ಅತ್ಯಂತ ಖಂಡನೀಯ. ಈ ವಿಷಯ ಕುರಿತು ಇಂದು ಮಹಾರಾಷ್ಟ್ರದ ಗೃಹ ಮಂತ್ರಿ ಅನಿಲ್ ದೇಶಮುಖ್ ಹಾಗೂ ಸಚಿವರಾದ ಅಮಿತ್ ದೇಶಮುಖ್ ಜತೆಗೆ ಮಾತನಾಡಿ ಆದಷ್ಟು ಬೇಗ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆಯನ್ನು ನೀಡಬೇಕು. ಮಹಾರಾಷ್ಟ್ರದಲ್ಲಿರುವ ಎಲ್ಲ ಮಠಗಳಿಗೆ ಭದ್ರತೆಯನ್ನು ನೀಡಬೇಕು ಎಂದು ವಿನಂತಿಸಿಕೊಂಡಿದ್ದೇನೆ. ಇದಕ್ಕೆ ಪೂರಕವಾಗಿ ಸಚಿವರು ರಕ್ಷಣೆ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದರು.
ಕಾಂಗ್ರೆಸ್ ನಿಂದ ಹೋರಾಟ ಅನಿವಾರ್ಯ:
ಕೇಂದ್ರದ ವಿದ್ಯುತ್ ತಿದ್ದುಪಡಿ ಕಾಯ್ದೆ ವಿಚಾರವಾಗಿ ಕೇಂದ್ರ ಸರ್ಕಾರ ಪದೇ ಪದೆ ಇಂತಹ ಕೆಲಸ ಮಾಡುತ್ತಿದೆ. ಕೃಷಿ ರಾಜ್ಯದ ವ್ಯಾಪ್ತಿಗೆ ಬರಲಿದೆ. ಕೃಷಿಕರು ರಾಷ್ಟ್ರದ ಬೆನ್ನೆಲುಬು ಕೂಡ ಹೌದು. ಇವತ್ತು ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗ್ತಿಲ್ಲ. ಸಂಕಷ್ಟದಲ್ಲಿ ನಮ್ಮ ರೈತರು ಜೀವನ ನಡೆಸ್ತಿದ್ದಾರೆ. ನಮ್ಮಲ್ಲಿ ರೈತರ ಪಂಪ್ ಸೆಂಟ್ ಗೆ ಉಚಿತ ವಿದ್ಯುತ್ ನೀಡ್ತಿದ್ದೇವೆ. ನಮ್ಮ ಕಾಂಗ್ರೆಸ್ ಸರ್ಕಾರವೇ ಈ ಯೋಜನೆ ತಂದಿತ್ತು. ಆದರೆ, ಕೇಂದ್ರ ರೈತರಿಗೆ ಕಷ್ಟ ಕೊಡುವುದಕ್ಕೆ ಹೊರಟಿದೆ ಎಂದು ಕಿಡಿ ಕಾರಿದರು.