ನವದೆಹಲಿ: 2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದಲ್ಲಿ ವಶಪಡಿಸಿಕೊಂಡ ಸಾಕ್ಷಿಗಳಾದ ಡಿಜಿಟಲ್ ಸಾಧನಗಳನ್ನು ಮರುಪರಿಶೀಲಿಸಲು ಕೋರಿದ್ದ ಕರ್ನಾಟಕ ಸರ್ಕಾರದ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಜೊತೆಗೆ ನ್ಯಾಯಯುತ ವಿಚಾರಣೆಯ ಉದ್ದೇಶವು ಯಾವುದೇ ನಿರಪರಾಧಿಗಳಿಗೆ ಮತ್ತು ಮುಗ್ಧರಿಗೆ ಶಿಕ್ಷೆಯಾಗಬಾರದು ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠವು, ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಯುತ ವಿಚಾರಣೆ ಒಬ್ಬರಿಗೆ ನ್ಯಾಯ ಸಿಗಬೇಕು ಎಂಬುದಲ್ಲ. ಬದಲಿಗೆ, ತಪ್ಪಿತಸ್ಥರು ಶಿಕ್ಷೆಯಿಂದ ಮುಕ್ತರಾಗಬಾರದು ಮತ್ತು ನಿರಪರಾಧಿ ಶಿಕ್ಷೆಗೆ ಒಳಗಾಗಬಾರದು ಎಂದಿತು.
2008ರ ಜುಲೈ 25 ರಂದು ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದಿದ್ದವು. ಆರೋಪಿಯ ಬಳಿ ಲ್ಯಾಪ್ಟಾಪ್, ಹಾರ್ಡ್ ಡಿಸ್ಕ್, 3 ಪೆನ್ ಡ್ರೈವ್, 5 ಫ್ಲಾಪಿಗಳು, 13 ಸಿಡಿಗಳು, 6 ಸಿಮ್ ಕಾರ್ಡ್ಗಳು, 3 ಮೊಬೈಲ್ ಫೋನ್ಗಳು, ಎಲೆಕ್ಟ್ರಾನಿಕ್ ಸಾಧನಗಳು, ಒಂದು ಮೆಮೊರಿ ಕಾರ್ಡ್ ಮತ್ತು 2 ಡಿಜಿಟಲ್ ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವುಗಳನ್ನು ಹೈದರಾಬಾದ್ನ ಸಿಎಫ್ಎಸ್ಎಲ್ಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ನವೆಂಬರ್ 29, 2010 ರಂದು ಇದರ ವರದಿಯನ್ನು ಸ್ವೀಕರಿಸಲಾಯಿತು. ಅದನ್ನು ಅಕ್ಟೋಬರ್ 16, 2012 ರಂದು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.
ತಮ್ಮ ವಿರುದ್ಧ ಸಲ್ಲಿಕೆಯಾಗಿದ್ದ ಸಾಕ್ಷ್ಯಾಧಾರಗಳನ್ನು ಪ್ರಶ್ನಿಸಿ ಆರೋಪಿಗಳು ಮಾರ್ಚ್ 6, 2017 ರಂದು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 65 - ಬಿ ಅಡಿ ಪ್ರಮಾಣಪತ್ರವಿಲ್ಲದೇ, ಡಿಜಿಟಲ್ ಸಾಕ್ಷ್ಯಗಳ ಕುರಿತ ವರದಿಯನ್ನು ಸಾಕ್ಷ್ಯವಾಗಿ ತೆಗೆದುಕೊಳ್ಳುವುದನ್ನು ಆಕ್ಷೇಪಿಸಲಾಗಿತ್ತು. ಈ ಕುರಿತ ವಿಚಾರಣೆ ಬಾಕಿಯಿರುವಾಗಲೇ, ವಿಚಾರಣಾ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತ್ತು. ಬಳಿಕ ಇದನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ವರದಿಯ ಪ್ರಮಾಣಪತ್ರವನ್ನು ಸಾಕ್ಷ್ಯ ಕಾಯಿದೆಯ ಸೆಕ್ಷನ್ 65-ಬಿ ಅಡಿ ಪ್ರಸ್ತುತಪಡಿಸಲು ಕೋರಿರುವುದು ಪ್ರಮುಖ ಸಾಕ್ಷ್ಯವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು.
ಸಾಕ್ಷ್ಯಾಧಾರಗಳ ಪುನರ್ಪರಿಶೀಲನೆಯನ್ನು ವಜಾಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯದ ಆದೇಶವನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಸಾಧನಗಳಿಗೆ ಸಂಬಂಧಿಸಿದ ಪ್ರಮಾಣಪತ್ರವನ್ನು ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 65 ಬಿ ಅಡಿಯಲ್ಲಿ ಹಾಜರುಪಡಿಸಲು ಸೂಚಿಸಿತು.
ಪ್ರಮಾಣಪತ್ರವನ್ನು ಸಲ್ಲಿಸಲು ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ಮೂಲಕ ಆರೋಪಿಗೆ ತನ್ನ ಹೇಳಿಕೆಗಳನ್ನು ಬದಲಾಯಿಸುವಂತೆ ಮಾಡುವುದಿಲ್ಲ. ಪ್ರಾಸಿಕ್ಯೂಷನ್ ನೇತೃತ್ವದ ಸಾಕ್ಷ್ಯವನ್ನು ನಿರಾಕರಿಸಲು ಆರೋಪಿಗೆ ಸಂಪೂರ್ಣ ಅವಕಾಶವಿದೆ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ಇದಕ್ಕಾಗಿಯೇ ಸಿಆರ್ಪಿಸಿ ಸೆಕ್ಷನ್ 311 ಇದೆ. ಇದರ ಉದ್ದೇಶವು ಸತ್ಯವನ್ನು ಬಯಲು ಮಾಡುವುದಾಗಿದೆ. ಸತ್ಯವನ್ನು ಹೊರತರಲು ಇದರ ನಿಷ್ಕರ್ಷೆ ಅಗತ್ಯವಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಚರಂಡಿಗೆ ಬಿದ್ದು ಮಗ ಸಾವು: ಪರಿಹಾರಕ್ಕೆ ಅಲೆದಾಡಿಸಿದ ಸರ್ಕಾರಕ್ಕೆ ದಂಡ ವಿಧಿಸಿದ ಹೈಕೋರ್ಟ್