ಬೆಂಗಳೂರು: ತನ್ನ ಸ್ನೇಹಿತರ ಮನೆಗೆ ತೆರಳುತ್ತಿದ್ದ ಯುವತಿಯೊಂದಿಗೆ ಅನುಚಿತ ವರ್ತನೆ ತೋರಿ, ಗಾಯ ಮಾಡಿ ಪರಾರಿಯಾಗಿದ್ದ ರ್ಯಾಪಿಡೊ ಬೈಕ್ ಚಾಲಕನನ್ನು ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಂತ್ರಸ್ತೆ ನೀಡಿದ ದೂರು ಆಧರಿಸಿ ತಿಂಡ್ಲು ನಿವಾಸಿಯಾದ 27 ವರ್ಷದ ದೀಪಕ್ ರಾವ್ ಎಂಬಾತನನ್ನು ಸೆರೆಹಿಡಿಯಲಾಗಿದೆ. ಏಪ್ರಿಲ್ 21 ರಂದು ಯಲಹಂಕ ನ್ಯೂ ಟೌನ್ ಠಾಣಾ ವ್ಯಾಪ್ತಿಯ ಬಿಎಂಎಸ್ ಕಾಲೇಜು ಬಳಿ ಈ ಘಟನೆ ನಡೆದಿತ್ತು. ಏಪ್ರಿಲ್ 21 ರ ರಾತ್ರಿ 11 ಗಂಟೆ ಸುಮಾರಿಗೆ ಸ್ನೇಹಿತನ ಮನೆಗೆ ಹೋಗಲು ಯುವತಿ ರ್ಯಾಪಿಡೊ ಬೈಕ್ ಬುಕ್ ಮಾಡಿದ್ದಳು.
ಬೈಕ್ ಹತ್ತಿಸಿಕೊಂಡ ಆರೋಪಿ ನಂತರ ಒಟಿಪಿ ಪಡೆಯುವ ನೆಪದಲ್ಲಿ ಮೊಬೈಲ್ ಕಸಿದುಕೊಂಡು ಅನುಚಿತವಾಗಿ ವರ್ತಿಸತೊಡಗಿದ್ದ. ನಂತರ ಹೋಗಬೇಕಿದ್ದ ಮಾರ್ಗದಲ್ಲಿ ತೆರಳದೇ ದೊಡ್ಡಬಳ್ಳಾಪುರ ರಸ್ತೆ ಕಡೆ ಬೈಕ್ ತಿರುಗಿಸಿದ್ದ. ಇದರಿಂದ ಆತಂಕಗೊಂಡ ಯುವತಿ ಪ್ರಶ್ನಿಸುತ್ತಿದ್ದಂತೆ ರ್ಯಾಪಿಡೋ ಚಾಲಕ ವೇಗವಾಗಿ ಬೈಕ್ ಚಲಾಯಿಸಿದ್ದ. ಇದರಿಂದ ಮತ್ತಷ್ಟು ಗಾಬರಿಯಾದ ಯುವತಿ ನಾಗೇನಹಳ್ಳಿ ಸಮೀಪದ ಖಾಸಗಿ ಕಾಲೇಜು ಮುಂಭಾಗ ಬೈಕ್ನಿಂದ ರಸ್ತೆಗೆ ಜಿಗಿದಿದ್ದಾಳೆ. ಇದನ್ನು ಗಮನಿಸಿದ ಖಾಸಗಿ ಕಾಲೇಜು ಸೆಕ್ಯುರಿಟಿ ಸಿಬ್ಬಂದಿ ತಕ್ಷಣ ಆಕೆಯ ರಕ್ಷಣೆಗೆ ಧಾವಿಸಿದ್ದಾರೆ. ಇದನ್ನ ಗಮನಿಸಿದ ರ್ಯಾಪಿಡೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಬೈಕ್ನಿಂದ ರಸ್ತೆಗೆ ಬಿದ್ದಿದ್ದರಿಂದ ಯುವತಿಯ ಕೈ ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಸ್ಥಳೀಯರ ಮೊಬೈಲ್ ಪಡೆದ ಯುವತಿ ತನ್ನ ಸ್ನೇಹಿತರು ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನೂ, ಆಂಧ್ರ ಮೂಲದವನಾದ ಆರೋಪಿ ದೀಪಕ್ ತಿಂಡ್ಲುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಕುಡಿದ ಅಮಲಿನಲ್ಲಿ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಪ್ರೀತಿಗಾಗಿ ಸ್ನೇಹಿತನ ಕೊಲೆ: ಸ್ನೇಹಿತರಿಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಅವಳಿಗಾಗಿ ನಡೆದ ಕಾದಾಟದಲ್ಲಿ ಓರ್ವ ಬಲಿಯಾಗಿದ್ದಾನೆ. ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ. ಅಸ್ಸೋಂ ಮೂಲದ ಗೌತಮ್ ತಟಿ ಕೊಲೆ ಪಾತಕಿಯಾದರೆ, ಸನು ಉರಂಗ್ ಮೃತ ದುರ್ದೈವಿ. ಅವಳಿಗಾಗಿ ನಡೆದ ವಾಗ್ವಾದದಲ್ಲಿ ಸ್ನೇಹಿತನನ್ನು ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ಬಳಿಕ ಕೊಲೆಯಾಗಿದ್ದು ಗೊತ್ತಾಗಬಾರದು ಎಂದು ಕಟ್ಟಡದಿಂದ ತಳ್ಳಿ ಸಹಜ ಸಾವು ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ. ಆದರೆ, ಪೊಲೀಸ್ ತನಿಖೆಯಲ್ಲಿ ಇದು ಕೊಲೆ ಎಂದು ಸಾಬೀತಾಗಿದೆ. ಇದರಿಂದ ಮೃತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ಸೋಂ ಮೂಲದವರಾದ ಇಬ್ಬರು ಸ್ನೇಹಿತರು ಕಳೆದ ಒಂದೂವರೆ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಹುಳಿಮಾವಿನಲ್ಲಿ ಒಂದೇ ಬಾಡಿಗೆ ಮನೆಯಲ್ಲಿ ಇಬ್ಬರು ವಾಸವಾಗಿದ್ದರು. ಮೃತ ಸನು ಉರಂಗ್ ಅರಕೆರೆ ಬಳಿ ಇರುವ ಗುರು ಗಾರ್ಡನ್ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ. ಇನ್ನು, ಗೌತಮ್ ಅದೇ ಏರಿಯಾದಲ್ಲಿದ್ದ ಬೇರೊಂದು ಹೊಟೇಲ್ನಲ್ಲಿ ಕೆಲಸ ಮಾಡುತ್ತಿದ್ದ. ಈ ಗೆಳೆಯರಿಬ್ಬರು ಊರಿನಲ್ಲಿ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಆಗಾಗ ವಾಗ್ವಾದ ನಡೆಯುತ್ತಿತ್ತು. ಇದೀಗ ಅದು ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.