ಬೆಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (ಆರ್ಜಿಯುಹೆಚ್ಎಸ್) ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ತೀರ್ಪು ನೀಡಿದೆ.
2020ರ ಅಕ್ಟೋಬರ್ನಲ್ಲಿ ರಾಜ್ಯ ಸರ್ಕಾರ ವಿವಿಯ ಸೆನೆಟ್ಗೆ 6 ಮತ್ತು ಸಿಂಡಿಕೇಟ್ಗೆ 4 ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಹಿಂದಿನ ಸಿಂಡಿಕೇಟ್ ಸದಸ್ಯರಾದ ಡಿ.ಆರ್. ದೀಪ್ತಿ ಭಾವ ಮತ್ತು ಡಾ. ಕಿರಣ್ ಕಾಳಯ್ಯ ಮತ್ತಿತರರು ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಜಿ. ನರೇಂದರ್ ಅವರಿದ್ದ ಏಕಸದಸ್ಯ ಪೀಠ ಸರ್ಕಾರದ ಆದೇಶವನ್ನು ರದ್ದು ಮಾಡಿದ್ದು, ಹಿಂದಿನ ಸಿಂಡಿಕೇಟ್ ಮತ್ತು ಸದಸ್ಯರನ್ನು ಮರು ನೇಮಕ ಮಾಡುವಂತೆ ತೀರ್ಪು ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, 2018ರಲ್ಲಿ ಅಂದಿನ ಸರ್ಕಾರವು ಆರ್ಜಿಯುಹೆಚ್ಎಸ್ನ ಸೆನೆಟ್ ಮತ್ತು ಸಿಂಡಿಕೇಟ್ಗೆ ಅರ್ಜಿದಾರರನ್ನು ನೇಮಕ ಮಾಡಿ ಆದೇಶಿಸಿತ್ತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಹಿಂದಿನ ನೇಮಕಾತಿ ಆದೇಶ ರದ್ದುಪಡಿಸಿತಲ್ಲದೇ, 2020ರಲ್ಲಿ ಹೊಸದಾಗಿ ಸೆನೆಟ್ಗೆ 6 ಮತ್ತು ಸಿಂಡಿಕೇಟ್ಗೆ 4 ಸದಸ್ಯರನ್ನು ನೇಮಕ ಮಾಡಿ 2020ರ ಅಕ್ಟೋಬರ್ನಲ್ಲಿ ಆದೇಶ ಹೊರಡಿಸಿದೆ.
ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರ ಅವಧಿ ಮೂರು ವರ್ಷವಾಗಿದ್ದು, ಅವಧಿಪೂರ್ವ ಬದಲಾವಣೆ ಮಾಡಲು ಅವಕಾಶವಿಲ್ಲ. ಹಾಗಿದ್ದೂ, ರಾಜ್ಯ ಸರ್ಕಾರ ಸದಸ್ಯರ ಅವಧಿಗೆ ಮುನ್ನ ಅವರನ್ನು ಬದಿಗೆ ತಳ್ಳಿ ಹೊಸದಾಗಿ ನೇಮಕ ಮಾಡಿರುವುದು ನಿಯಮಬಾಹಿರ. ಹೀಗಾಗಿ, ಸರ್ಕಾರ ಹೊಸ ಸದಸ್ಯರನ್ನು ನೇಮಕ ಮಾಡಿ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಜೊತೆಗೆ, ಅರ್ಜಿದಾರರನ್ನು ಮರುನೇಮಕ ಮಾಡುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದ್ದರು. ವಾದವನ್ನು ಪುರಸ್ಕರಿಸಿದ ಪೀಠ ಈ ಹಿಂದಿನ ಸದಸ್ಯರನ್ನು ಮರು ನೇಮಕ ಮಾಡಲು ಆದೇಶಿಸಿದೆ.