ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯದ ಬೆಳತೂರು ವ್ಯಾಪ್ತಿಯಲ್ಲಿ ಇಂದು 2 ಒತ್ತುವರಿಗಳನ್ನು ತೆರವುಗೊಳಿಸಿದೆ. ಹಲವು ದಿನಗಳಿಂದ ಸ್ಥಗಿತವಾಗಿದ್ದ ಜೆಸಿಬಿ ಘರ್ಜನೆ ಮತ್ತೆ ಪ್ರಾರಂಭವಾಗಿದೆ.

ಪ್ರೈಮ್ ಮ್ಯಾನ್ಷನ್ ಅಪಾರ್ಟ್ಮೆಂಟ್ ಸುಮಾರು 50 ಮೀಟರ್ ಉದ್ದದ ಮಳೆ ನೀರುಗಾಲುವೆಯ ಮೇಲೆ ಕಾಂಪೌಂಡ್ ಗೋಡೆಯನ್ನು ನಿರ್ಮಿಸಿಕೊಂಡಿದ್ದು, ಭೂಮಾಪಕರು ಮಾರ್ಕಿಂಗ್ ಮಾಡಿರುವ ಪ್ರಕಾರ ಇಂದು ಸುಮಾರು 50 ಮೀಟರ್ ಕಾಂಪೌಂಡ್ ಗೋಡೆಯನ್ನು ಕೆಡವಲಾಯಿತು. ಜತೆಗೆ ಎಲ್ಬಿಐ ಬ್ಲಿಸ್ ಅಪಾರ್ಟ್ಮೆಂಟ್ನಿಂದ ಒತ್ತುವರಿ ಮಾಡಿಕೊಂಡಿದ್ದ 10 ಮೀಟರ್ ಉದ್ದದ ಮಳೆ ನೀರುಗಾಲುವೆ ಜಾಗವನ್ನು ತೆರವು ಮಾಡಲಾಗಿದೆ.

ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತೆರವು: ವಲಯ ಮುಖ್ಯ ಅಭಿಯಂತರರಾದ ಬಸವರಾಜು ಕಬಾಡೆ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಪಾಲಿಕೆ ಇಂಜಿನಿಯರ್ಗಳು, 20 ಪೊಲೀಸ್ ಅಧಿಕಾರಿಗಳು, 5 ಮಾರ್ಷಲ್ಗಳ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 ಜೆಸಿಬಿ ಬಳಕೆ: ತೆರವು ಕಾರ್ಯಾಚರಣೆಗೆ 2 ಜೆಸಿಬಿ ಯಂತ್ರಗಳನ್ನು ಬಳಸಿಕೊಳ್ಳಲಾಗಿದೆ. ಟ್ರ್ಯಾಕ್ಟರ್ ಮೂಲಕ ಕಟ್ಟಡದ ಭಗ್ನಾವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: 2,052 ಕಡೆ ರಾಜಕಾಲುವೆ ಒತ್ತುವರಿ ತೆರವು: ಹೈಕೋರ್ಟ್ಗೆ ಬಿಬಿಎಂಪಿ ಮಾಹಿತಿ