ಬೆಂಗಳೂರು: ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದ ಬದಲಾಗಿ ಭಗವಾಧ್ವಜ ಹಾರಿಸುತ್ತೇವೆ ಎಂದು ಸಚಿವ ಈಶ್ವರಪ್ಪ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದಕ್ಕಾಗಿ ಅವರ ರಾಜೀನಾಮೆ ಕೇಳುತ್ತಿದ್ದೇವೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಆಗುತ್ತದೆ, 500 ವರ್ಷಕ್ಕೆ ಬದಲಾವಣೆ ಆಗುತ್ತದೆ ಅದು ಮುಖ್ಯ ಅಲ್ಲ. ಪ್ರಸ್ತುತ ಅದು ಸಂವಿಧಾನ ವಿರೋಧಿ ಹೇಳಿಕೆ. ಕೆಲವು ದಿನಗಳಿಂದ ಸಚಿವ ಕೆ ಎಸ್ ಈಶ್ವರಪ್ಪ ಅವರ ರಾಜೀನಾಮೆಗೆ ನಾವು ಒತ್ತಾಯಿಸುತ್ತಿದ್ದೇವೆ. ಒಂದು ದಿನ ಕೇಸರಿ ಧ್ವಜ ಕೆಂಪು ಕೋಟೆ ಮೇಲೆ ಹಾರಿಸುತ್ತೇವೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ಅಸಂವಿಧಾನಿಕ ಹೇಳಿಕೆ ಅದು. ಅವರು ಮೂಲತಃ ಆರ್ಎಸ್ಎಸ್ನಿಂದ ತರಬೇತಿ ಪಡೆದ ರಾಜಕಾರಣಿ. ರಾಷ್ಟ್ರೀಯತೆಗೆ ತದ್ವಿರುದ್ಧವಾಗಿ ಆರ್ಎಸ್ಎಸ್ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಆರ್ಎಸ್ಎಸ್ ಸದಸ್ಯರಾಗಿದ್ದ ಗೋಡ್ಸೆ ಗಾಂಧೀಜಿಯನ್ನು ಕೊಲ್ಲುತ್ತಾರೆ. ಅಂದಿನ ಉಪಪ್ರಧಾನಿ ಪಟೇಲ್ ಅವರು ಆರ್ಎಸ್ಎಸ್ನವರು ದೇಶದ್ರೋಹದ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಸಂಘಟನೆಯನ್ನು ಬ್ಯಾನ್ ಮಾಡಿದ್ದರು. ಕೆಲವು ಸಮಯದ ನಂತರ ರಾಜಕಾರಣದಲ್ಲಿ ಭಾಗಿಯಾಗಬಾರದು ಮತ್ತು ಸಂವಿಧಾನಕ್ಕೆ ಬದ್ಧವಾಗಿರಬೇಕು ಎಂಬ ಷರತ್ತಿನೊಂದಿಗೆ ನಿಷೇಧ ತೆಗೆದು ಹಾಕಲಾಗಿತ್ತು. ಆದರೆ ಇವರು ಷರತ್ತು ಮರೆತಂತಿದೆ ಎಂದು ಬಿಜೆಪಿಗರ ವಿರುದ್ಧ ಖರ್ಗೆ ಹರಿಹಾಯ್ದರು.
ಅನೇಕ ಯುದ್ಧಗಳನ್ನು ಇದೇ ಧ್ವಜದಡಿ ಮಾಡಿದ್ದೇವೆ ಎನ್ನುತ್ತ ಪದೇ ಪದೇ ಬಿಜೆಪಿಗರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದ್ದಾರೆ. ಒಬ್ಬ ಆರ್ಎಸ್ಎಸ್ನವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಿರೋದನ್ನು ತೋರಿಸಲಿ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಕೂಡ ಅಖಂಡ ಭಾರತದ ಕನಸು ಕಾಣುತ್ತಿದ್ದಾರೆ. ನಿಮ್ಮ ಪ್ರಧಾನಿ ಪುಕ್ಸಟ್ಟೆ ಬಿರಿಯಾನಿ ತಿನ್ನೋಕೆ ಹೋಗಿದ್ರಲ್ಲ ಆಗ ಹೇಳಬೇಕಿತ್ತು. ದಂಡಿ ಮಾರ್ಚ್, ಸ್ವಾತಂತ್ರ್ಯ ಹೋರಾಟದಲ್ಲಿ, ಸಂವಿಧಾನ ರಚನೆಯಲ್ಲಿ ಆರ್ಎಸ್ಎಸ್ನವರು ಎಲ್ಲಿದ್ದರು?. ಮನುಸ್ಮೃತಿ ಬೇಕು ಎಂದು ಹೋರಾಟ ಮಾಡಿದರು. ರಾಷ್ಟ್ರಧ್ವಜ ಸರಿ ಇಲ್ಲ ಅಂದ್ರೆ ಅಂಬೇಡ್ಕರ್ಗೆ ಕೂಡ ಅವಮಾನ ಮಾಡಿದ ಹಾಗೆ ಅಲ್ವಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ನಮ್ಮ ಕಾಂಗ್ರೆಸ್ ಪೂರ್ವಜರು ಸ್ವತಂತ್ರ ತಂದಿದ್ದು. ಸಂವಿಧಾನ, ಧ್ವಜ, ದೇಶ ನಿರ್ಮಾಣ ಮಾಡಿದ್ದು. ಆರ್ಎಸ್ಎಸ್ನವರು ದೇಶಕ್ಕೆ ಯಾವುದೇ ಕೊಡುಗೆ ಕೊಡದೆ, ದೇಶದ ಸಂವಿಧಾನಕ್ಕೂ ಗೌರವ ಕೊಡದೇ ಈ ರೀತಿಯ ಹೇಳಿಕೆಗಳನ್ನು ನೀಡುತ್ತಾರೆ. ಈಶ್ವರಪ್ಪ ಸಚಿವ ಸ್ಥಾನದಿಂದ ಇಳಿಯಬೇಕು ಎಂದು ಒತ್ತಾಯಿಸಿದರು.
ನೀವು ನಿಜವಾಗಿಯೂ ರಾಷ್ಟ್ರಪ್ರೇಮಿಗಳಾಗಿದ್ರೆ ವಿವಾದಾತ್ಮ ಹೇಳಿಕೆ ನೀಡಿರುವ ಸಚಿವರನ್ನು ವಜಾ ಮಾಡಿ ಎಂದರು. ಬಿಜೆಪಿ ದೇಶಭಕ್ತಿ ಚುನಾವಣೆಗೆ ಮಾತ್ರ ಸೀಮಿತ. ಶಾಸಕ ಯತ್ನಾಳ್ ಬಾಯಿಗೆ ಬಂದಂತೆ ಮಾತನಾಡ್ತಾರೆ. ಕಟೀಲ್ ಪರಿಸ್ಥಿತಿ ನೋಡಿದ್ರೆ ಅಯ್ಯೋ ಅನಿಸುತ್ತೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಇನ್ನೂ ಒಂದು ನೋಟೀಸ್ ಕೊಟ್ಟಿಲ್ಲ. ಈಶ್ವರಪ್ಪ, ಯತ್ನಾಳಗೆ ಮೊದಲು ನೋಟಿಸ್ ನೀಡಿ. ಈಶ್ವರಪ್ಪರನ್ನು ಸಚಿವ ಸ್ಥಾನದಿಂದ ವಜಾ ಮಾಡಿ ಎಂದು ಆಗ್ರಹಿಸಿದರು.
ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಸ್ಟ್ಯಾಂಡ್ ಬಹಳ ಸ್ಪಷ್ಟವಾಗಿದೆ. ಸದನದಲ್ಲೂ ಸಹ ಯು ಟಿ ಖಾದರ್ ಇದರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕುಂದಾಪುರದಿಂದ ಕಲಬುರಗಿವರೆಗೆ ಇದರ ಬಗ್ಗೆ ವಿವಾದ ಹಬ್ಬಿದೆ ಅಂದರೆ ಅದು ಸರ್ಕಾರದ ವೈಫಲ್ಯ. ಧಾರ್ಮಿಕ ಸಂಕೇತಗಳನ್ನ ಧರಿಸಲು ಸಂವಿಧಾನದಲ್ಲಿ ಅವಕಾಶವಿದೆ. ಕೊರೊನಾ ಲಾಕ್ ಡೌನ್ ಬಳಿಕ ನಾವು ಗಮನ ಕೊಡಬೇಕಾಗಿದ್ದು ಶಿಕ್ಷಣದ ಕಡೆಗೆ. ಆದರೆ ಸರ್ಕಾರವೇ ಇಂತಹ ಚಟುವಟಿಕೆಗಳಿಗೆ ಆಸ್ಪದ ಕೊಡುತ್ತಿದೆ ಎಂದು ಖರ್ಗೆ ದೂರಿದರು.
ಇದನ್ನೂ ಓದಿ: ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ನಲಪಾಡ್ ವಿರುದ್ಧ ಎಫ್ಐಆರ್ ದಾಖಲು