ಬೆಂಗಳೂರು: ಕೇಂದ್ರ ಸರ್ಕಾರ ಹಠಾತ್ತನೆ ಪಿಎಫ್ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಮತ್ತು 7 ಇತರ ಸಹ ಸಂಘಟನೆ ನಿಷೇಧಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ ನೆಟ್ಟಾರು, ಶಿವಮೊಗ್ಗದ ಹರ್ಷ ಸೇರಿದಂತೆ ಹಿಂದೂ ಕಾರ್ಯಕರ್ತರ ಹತ್ಯೆಯೇ ಪ್ರಮುಖ ಪ್ರೇರಣೆಯಾಗಿದೆ.
ಕರ್ನಾಟಕದಲ್ಲಿ ಹತ್ತು ಹಲವಾರು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದಾಗ ಪಿಎಫ್ಐ ನಿಷೇಧಿಸುವಂತೆ ಬಲವಾದ ಆಗ್ರಹ ಕೇಳಿ ಬಂದಾಗಲೂ ಗಮನಹರಿಸದ ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಯಾವಾಗ ದಕ್ಷಿಣ ಕನ್ನಡದಲ್ಲಿ ಪ್ರವೀಣ್ ನೆಟ್ಟಾರು ಮತ್ತು ಶಿವಮೊಗ್ಗದಲ್ಲಿ ಕಟ್ಟಾ ಹಿಂದೂ ಸಂಘಟನೆಗಳವರ ಕೊಲೆಯಾಯಿತೊ ಅದಕ್ಕೆ ಪ್ರತೀಕಾರ ಎಂಬಂತೆ ಪಿಎಫ್ಐ ನಂತಹ ಸಂಘಟನೆಗಳನ್ನು ನಿಷೇಧಿಸಿ ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದೆ.
ರಾಜ್ಯದಲ್ಲಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ಕೈವಾಡವಿರುವ ಶಂಕೆ ವ್ಯಕ್ತಪಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಿಷೇಧಕ್ಕೆ ಹತ್ತಾರು ಬಾರಿ ಆಗ್ರಹಿಸಿದರೂ ಕೇಂದ್ರ ಸರ್ಕಾರ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಪಿಎಫ್ಐ ನಿಷೇಧ ಮಾಡುವಂತೆ ಪತ್ರ ಬರೆದಾಗಲೂ ಕೇಂದ್ರದ ಗೃಹ ಇಲಾಖೆ ಗಮನಿಸಿಯೂ ಮೌನವಾಗಿತ್ತು. ರಾಜ್ಯದಲ್ಲಿನ ಬಿಜೆಪಿ ಸಂಸದರಾದ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಪಿಎಫ್ಐ ನಿಷೇಧಕ್ಕೆ ಮನವಿ ಮಾಡಿದಾಗಲು ಸಕಾರಾತ್ಮಕವಾಗಿ ಸ್ಪಂದನೆ ಬರಲಿಲ್ಲ.
ಬಿಜೆಪಿಯ ಭದ್ರ ಕೋಟೆಗಳಾದ ದಕ್ಷಿಣ ಕನ್ನಡದಲ್ಲಿ ಪ್ರವೀಣ್ ನೆಟ್ಟಾರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಹರ್ಷ ಹತ್ಯೆಯಾದ ಬಳಿಕ ಮತ್ತು ಇವರ ಕೊಲೆಗೆ ದೇಶವ್ಯಾಪಿ ವ್ಯಕ್ತವಾದ ಆಕ್ರೋಶಕ್ಕೆ ಮಣಿದ ಕೇಂದ್ರ ಸರ್ಕಾರ ಹತ್ಯೆಯ ಬೆನ್ನ ಹಿಂದೆಯೇ ಪಿಎಫ್ಐ ಬಗ್ಗುಬಡಿಯಲು ಸಿದ್ಧತೆ ನಡೆಸುತ್ತಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಯುಎಪಿಎ ಕಾಯ್ದೆಯಡಿ ಬ್ಯಾನ್.. ಇಲ್ಲಿದೆ ಸಂಪೂರ್ಣ ವಿವರ
ಅಮಿತ್ ಶಾ ಬೆಂಗಳೂರು ಭೇಟಿಯಲ್ಲಿಯೇ ಸ್ಕೆಚ್: ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲಿಯೇ ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ಹಿಂದೂ ಕಾರ್ಯಕರ್ತರ ಕೊಲೆಗಳ ಗಂಭೀರತೆ ಬಗ್ಗೆ ಮಾಹಿತಿ ಸಂಗ್ರಹಿಸಿ ಪಿಎಫ್ಐ ನಿಷೇಧಕ್ಕೆ ಸ್ಕೆಚ್ ರೆಡಿ ಆಯಿತು ಎಂದು ಹೇಳಲಾಗಿದೆ. ಪ್ರವೀಣ್ ನೆಟ್ಟಾರು ಮತ್ತು ಹರ್ಷ ಹತ್ಯೆ ಪ್ರಕರಣಗಳನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದಾಗ ಗಂಭೀರತೆ ಅರಿತ ಅಮಿತ್ ಶಾ ಬೆಂಗಳೂರು ಭೇಟಿಯ ಸಂದರ್ಭದಲ್ಲಿ ಪಡೆದ ವಿವರಗಳ ಪರಿಣಾಮ ಇಂದು ಪಿಎಫ್ಐ ನಿಷೇಧಕ್ಕೊಳಗಾಗಿದೆ.
ಸಾಕ್ಷಾಧಾರ ಸಂಗ್ರಹಿಸಿದ ಎನ್ಐಎ: ಪಿಎಫ್ಐನ ಕಾರ್ಯ ಚುಟುವಟಿಕೆಗಳು, ದೇಶವಿದ್ರೋಹಿ ಸಂಘಟನೆಗಳ ಜೊತೆ ಪಿಎಫ್ಐ ಹೊಂದಿರುವ ನಂಟು,ದೇಶವನ್ನು ಇಸ್ಲಾಮೀಕರಣ ಮಾಡುವ ಗುರಿ ಹೊಂದಿದ ಪಿಎಫ್ಐ ಕಾರ್ಯಕರ್ತರ ಉದ್ದೇಶದ ಬಗ್ಗೆ ಸಮಗ್ರ ಮಾಹಿತಿ, ಸಾಕ್ಷಾಧಾರಗಳನ್ನು ಕೇಂದ್ರದ ಗೃಹ ಇಲಾಖೆ ಸಂಗ್ರಹಿಸಿ ಈಗ ನಿಷೇಧಕ್ಕೆ ಮುನ್ನುಡಿ ಬರೆದಿದೆ.
ಕೇಂದ್ರ ಸರ್ಕಾರದ ಗೃಹ ಇಲಾಖೆಯು ಎನ್ಐಎ ಮೂಲಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧಕ್ಕೂ ಮುನ್ನ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಪಿಎಫ್ಐ ಕಚೇರಿ ಮತ್ತು ಮುಖಂಡರ ಮನೆ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿ ಮತ್ತಷ್ಟು ಸಾಕ್ಷಾಧಾರಗಳನ್ನು ಸಂಗ್ರಹಿಸಿದೆ. ಪಿಎಫ್ಐ ಮುಖಂಡರು ವಿಚಾರಣೆ ವೇಳೆ ಮತ್ತು ಅವರಲ್ಲಿ ದೊರೆತ ಅಪಾಯಕಾರಿ ಸಾಕ್ಷಾಧಾರಗಳಿಂದ ಭವಿಷ್ಯದಲ್ಲಿ ದೇಶಕ್ಕೆ ಗಂಡಾಂತರ ಇರುವುದನ್ನು ಮನಗಂಡ ಕೇಂದ್ರ ಸರ್ಕಾರ ತಡಮಾಡದೇ ಸಂಘಟನೆ ಬ್ಯಾನ್ ಮಾಡಿದೆ.
ಸಾಕ್ಷಾಧಾರ ಬಹಿರಂಗ ಗೊಳಿಸುವಂತೆ ಆಗ್ರಹ: ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಬಿಜೆಪಿ ಪಕ್ಷ ಸ್ವಾಗತಿಸಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರರನ್ನು ಅಭಿನಂದಿಸಿದರೆ, ಕಾಂಗ್ರೆಸ್ , ಜೆಡಿಎಸ್ ಮುಖಂಡರು ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ. ನಿಷೇಧಕ್ಕೆ ಕಾರಣವಾದ ಪಿಎಫ್ಐ ವಿರುದ್ಧದ ಸಾಕ್ಷಾಧಾರಗಳನ್ನು ಬಹಿರಂಗ ಗೊಳಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Big News: ಪಿಎಫ್ಐಗೆ ಕೇಂದ್ರದ ಅಂಕುಶ.. ಸಂಘಟನೆ ನಿಷೇಧಿಸಿ ಮಹತ್ವದ ಆದೇಶ