ಬೆಂಗಳೂರು : ಬ್ಯಾಂಕ್ ಗ್ರಾಹಕರ ಗಮನ ಬೇರೆಡೆಗೆ ಸೆಳೆದು ಕಳ್ಳತನ ಮಾಡುತಿದ್ದ ಕುಖ್ಯಾತ ದರೋಡೆಕೋರರನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.
ಓಜಿ ಕುಪಂ ಗ್ಯಾಂಗ್ನ ಸದಸ್ಯರಾದ ಗಿರಿಕುಮಾರ್, ಷಣ್ಮುಗಂ ಎಂಬುವರು ಬಂಧಿತರು. ಆರೋಪಿಗಳು ನಗರದ ಕೊತ್ತನೂರು, ಅಮೃತಹಳ್ಳಿ, ಯಲಹಂಕ, ಮಾರತ್ತಹಳ್ಳಿ ಸೇರಿದಂತೆ ಹಲವೆಡೆ ದರೋಡೆ ಮಾಡಿದ್ದರು.
ಇವರ ವಿರುದ್ಧ ಬೆಂಗಳೂರು, ಕೋಲಾರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 7 ಪ್ರಕರಣ ದಾಖಲಾಗಿವೆ. ಮುಖ್ಯವಾಗಿ ಈ ಗ್ಯಾಂಗ್, ಬ್ಯಾಂಕ್ ಬಳಿ ಹೊಂಚು ಹಾಕಿ, ಹಣ ಡ್ರಾ ಮಡಿಕೊಂಡು ಬರುವವರನ್ನು ಹಿಂಬಾಲಿಸಿ ಕ್ಷಣಾರ್ಧದಲ್ಲಿ ದರೋಡೆ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ಪ್ರಕರಣಗಳು ದಾಖಲು : ಇತ್ತೀಚೆಗೆ ಮನೆ ಕೆಲಸ ಮಾಡಿಸಲು ಬ್ಯಾಂಕ್ನಿಂದ ನಾಲ್ಕು ಲಕ್ಷ ಡ್ರಾ ಮಾಡಿಕೊಂಡು ಬರುತ್ತಿದ್ದವನನ್ನು ಹಿಂಬಾಲಿಸಿ ದರೋಡೆ ಮಾಡಿದ್ದರು. ಆರೋಪಿಗಳ ವಿರುದ್ಧ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲೇ ಒಂದರ ಹಿಂದೆ ಒಂದರಂತೆ ಮೂರು ಪ್ರಕರಣ ದಾಖಲಾಗಿತ್ತು.
ಪೊಲೀಸರಿಗೆ ಸಿಕ್ಕಿಬಿದ್ದ ಖದೀಮರು : ಹಲವು ತಂಡಗಳ ಮೂಲಕ ಆರೋಪಿಗಳ ಪತ್ತೆಗೆ ಬಲೆ ಬೀಸಿ ಕಾಯುತ್ತಿದ್ದ ಪೊಲೀಸರಿಗೆ ಕುಖ್ಯಾತ ಗ್ಯಾಂಗ್ನ ಸದಸ್ಯರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಇಂದಿರಾನಗರದಲ್ಲಿ ದರೋಡೆಗೆ ಹೊಂಚು ಹಾಕಿ ಬ್ಯಾಂಕ್ ಮುಂದೆ ಕಾಯುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಗ್ಯಾಂಗ್ನಲ್ಲಿ ಇನ್ನೂ ಹಲವರಿರುವ ಶಂಕೆಯಿದ್ದು, ಹೆಚ್ಚಿನ ವಿಚಾರಣೆ ಮುಂದುವರೆಸಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ