ಬೆಂಗಳೂರು: ಮಹಿಳಾ ವಕೀಲರು, ಪೊಲೀಸ್ ಅಧಿಕಾರಿಗಳು ಸೇರಿ 100ಕ್ಕೂ ಹೆಚ್ಚು ಮಹಿಳೆಯರಿಗೆ ಕದ್ದ ಮೊಬೈಲ್ಗಳಿಂದ ಅಶ್ಲೀಲ ಸಂದೇಶ ಕಳುಹಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುವ ಜೊತೆಗೆ ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ ಎಂದು ಪೊಲೀಸರಿಗೆ ಸವಾಲು ಹಾಕಿದ್ದ ಖತರ್ನಾಕ್ ಆರೋಪಿ ಸಿಕ್ಕಿಬಿದ್ದಿದ್ದಾನೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮೈದುನಹಳ್ಳಿ ಗ್ರಾಮದ ಕೃಷ್ಣ ಅಲಿಯಾಸ್ ರಾಮಕೃಷ್ಣ (37) ಎಂಬಾತನನ್ನು ಬೆಂಗಳೂರಿನ ಪಶ್ಚಿಮ ವಿಭಾಗದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ 6, ಸಿಟಿ ಮಾರುಕಟ್ಟೆ, ಸಿಟಿ ರೈಲ್ವೆ, ವಿದ್ಯಾರಣ್ಯಪುರ, ಹಲಸೂರುಗೇಟ್ ಪೊಲೀಸ್ ಠಾಣೆಗಳಲ್ಲಿ ತಲಾ 1, ಜಾಲಹಳ್ಳಿ ಹಾಗೂ ತುಮಕೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ತಲಾ 2 ಪ್ರಕರಣ ಸೇರಿ ಒಟ್ಟು 14 ಪ್ರಕರಣಗಳು ದಾಖಲಾಗಿವೆ.
ಆರೋಪಿಯು ವಿಕೃತ ಮನಸ್ಥಿತಿ ಹೊಂದಿದ್ದು, ವಕೀಲರಿಗೆ ಕರೆ ಮಾಡಿ ತಮ್ಮ ಕಡೆಯವರಿಗೆ ಹತ್ಯೆ ಮಾಡಿಯಾದರೂ ತುರ್ತಾಗಿ ಜಾಮೀನು ಕೊಡಿಸಬೇಕೆಂದು ಮಹಿಳಾ ವಕೀಲರ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದ. ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ದಾಖಲಿಸಬೇಕೆಂದು ಅಧಿಕಾರಿಗಳಿಗೆ ಹೇಳುತ್ತಿದ್ದ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
6 ತಿಂಗಳಿನಿಂದ ಆರೋಪಿಗೆ ಶೋಧ: ಬಳಿಕ ಅವರಿಗೆಲ್ಲ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿ ಹಿಂಸೆ ನೀಡುವ ಜೊತೆಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದ. ಸುಮಾರು 6 ತಿಂಗಳಿನಿಂದ ಈತನನ್ನು ಬಂಧಿಸಲು ತುಮಕೂರು ಹಾಗೂ ಹಲಸೂರು ಗೇಟ್ ಠಾಣೆಗಳ ಪೊಲೀಸರು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದರು. ತಂಡದ ಅಧಿಕಾರಿಗಳಿಗೆ ಕರೆ ಮಾಡಿ ತಾಕತ್ತಿದ್ದರೆ ಬಂಧಿಸಿ ಎಂದು ಅವಾಜ್ ಹಾಕಿ ಸವಾಲು ಎಸೆದಿದ್ದ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಪ್ರಾಣ ಬೆದರಿಕೆ ಹಾಕಿ ಬ್ಲಾಕ್ಮೇಲ್: ಪೊಲೀಸ್ ತಂಡವು ಕಠಿಣ ಶ್ರಮದಿಂದ ಆರೋಪಿಯನ್ನು ಬಂಧಿಸಿದೆ. ವಿಚಾರಣೆ ವೇಳೆ ಮತ್ತಷ್ಟು ವಿಷಯಗಳನ್ನು ಬಾಯ್ಬಿಟ್ಟಿದ್ದಾನೆ. ತಮಗೆ ಸ್ಪಂದಿಸದೆ ಇದ್ದ ಮಹಿಳೆಯರಿಗೆ ಪದೇ ಪದೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುವ ಜೊತೆಗೆ ಪ್ರಾಣ ಬೆದರಿಕೆ ಹಾಕಿ ಬ್ಲಾಕ್ಮೇಲ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಭೇಟಿಗೆ ಕರೆದು ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಪುತ್ತೂರಲ್ಲಿ ಯುವಕ ಅರೆಸ್ಟ್
ಚಿಕ್ಕಮಕ್ಕಳ ಅಶ್ಲೀಲ ವಿಡಿಯೋ: ಆರೋಪಿಯ ಮೊಬೈಲ್ ವಶಪಡಿಸಿಕೊಂಡು ಪರಿಶೀಲಿಸಿದಾಗ ನೂರಕ್ಕೂ ಹೆಚ್ಚು ಮಹಿಳೆಯರಿಗೆ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ವಾಟ್ಸ್ಆ್ಯಪ್ ಮೂಲಕ ಕಳುಹಿಸಿರುವುದು ಕಂಡುಬಂದಿದೆ. ಈತನ ಮೊಬೈಲ್ನಲ್ಲಿ ಚಿಕ್ಕಮಕ್ಕಳ ಅಶ್ಲೀಲ ವಿಡಿಯೋಗಳಿರುವುದು ಬೆಳಕಿಗೆ ಬಂದಿದೆ.
ತುಮಕೂರಿನ ವಕೀಲೆಗೆ ಕಿರುಕುಳ: ತುಮಕೂರಿನ ವಕೀಲರಿಗೆ ಹಾಗೂ ಮತ್ತೊಬ್ಬ ಮಹಿಳೆಗೆ ವಾಟ್ಸ್ಆ್ಯಪ್ನಲ್ಲಿ ಕರೆ ಮಾಡಿ ಅಶ್ಲೀಲ ವಿಡಿಯೋ ಕಳುಹಿಸಿದ್ದಾನೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ನ ಮಹಿಳಾ ವಕೀಲರಿಗೂ ಇದೇ ರೀತಿಯ ಕಿರುಕುಳ ನೀಡಿರುವುದು ತಿಳಿದುಬಂದಿದೆ.
ವಿಜಯನಗರ ಉಪವಿಭಾಗದ ಎಸಿಪಿ ನಂಜುಂಡೇಗೌಡ ನೇತೃತ್ವದಲ್ಲಿ ಕಾಮಾಕ್ಷಿಪಾಳ್ಯ ಠಾಣೆಯ ಇನ್ಸ್ಪೆಕ್ಟರ್ ಪ್ರಶಾಂತ್ ಮತ್ತು ಸಿಬ್ಬಂದಿಯ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.