ಬೆಂಗಳೂರು : ಖಾದಿ ಹಾಗೂ ಕೈಮಗ್ಗ ಇತ್ತೀಚಿನ ದಿನಗಳಲ್ಲಿ ಜನರ ಫ್ಯಾಷನ್ ಉಡುಪು ಆಗ್ತಿದೆ. ಎಲ್ಲರಿಗೂ ತಿಳಿದಂತೆ ಭಾರತ ದೇಶ ಮಾತ್ರ ಇದನ್ನು ಉತ್ಪಾದಿಸಬಲ್ಲದು ಎಂದು ಫ್ಯಾಷನ್ ಗುರು ಎಂದೇ ಖ್ಯಾತರಾಗಿರುವ ಪ್ರಸಾದ್ ಬಿದ್ದಪ್ಪ ತಿಳಿಸಿದರು.
ಚಿತ್ರಕಲಾ ಪರಿಷತ್ನಲ್ಲಿ ನಡೆಯುತ್ತಿರುವ 'ಪವಿತ್ರ ವಸ್ತ್ರ ಅಭಿಯಾನ'ಕ್ಕೆ ಭೇಟಿ ನೀಡಿದ ಅವರು ಈಟಿವಿ ಭಾರತದ ಜೊತೆ ಕೈಮಗ್ಗದ ವಸ್ತ್ರಗಳ ಕುರಿತ ಕನಸುಗಳನ್ನು ಹಂಚಿಕೊಂಡರು.
ಈಗಾಗಲೇ ಖಾದಿ, ದೇಸಿ, ಕೈಮಗ್ಗದ ಹತ್ತಿ ಬಟ್ಟೆಗಳ ಹಲವಾರು ಫ್ಯಾಷನ್ ಶೋಗಳನ್ನು ಪ್ರಸಾದ್ ಬಿದ್ದಪ್ಪ ನಡೆಸಿದ್ದಾರೆ. ಸಿಲ್ಕ್ ಖಾದಿ, ಉಲ್ಲನ್ ಖಾದಿ, ಕಾಟನ್ ಖಾದಿ ಹೀಗೆ ವಿವಿಧ ಬಗೆಯ ದೇಸಿ ಉಡುಪುಗಳನ್ನು ಗ್ರಾಮೀಣ ಭಾಗಗಳಲ್ಲಿ ಸಿದ್ಧಪಡಿಸಲಾಗ್ತಿದೆ.
ಪ್ರಸನ್ನ ಅವರು ಇಡೀ ಒಂದು ಹೆಗ್ಗೋಡು ಹಳ್ಳಿಯನ್ನು ಖಾದಿ ಉಡುಪು ಸಿದ್ಧಪಡಿಸಲು ಬದಲಾಯಿಸಿದ್ದಾರೆ. ಇದು ಭವಿಷ್ಯಕ್ಕೆ ಪ್ರಮುಖವಾಗಿದೆ. ಮತ್ತೆ ಖಾದಿ ಬಟ್ಟೆಗಳನ್ನು ಜನರ ನಡುವೆ ಬಳಕೆಗೆ ತರಲು, ಸಿಲ್ಕ್ ಇಂಡಸ್ಟ್ರಿಯನ್ನು ಬೆಳೆಸಲು ರಾಜ್ಯ ಸರ್ಕಾರದ ಬೆಂಬಲವೂ ಅಗತ್ಯ ಎಂದು ಹೇಳಿದ್ರು.
ಶೇ.21ರಷ್ಟು ಗ್ರಾಮೀಣ ಭಾಗದ ಜನರಿಗೆ ಖಾದಿ, ಸಿಲ್ಕ್ ಉದ್ಯೋಗ ಕೊಡುತ್ತದೆ. ಒಂದೊಂದು ಮನೆಯಲ್ಲಿ ಒಂದು ಚರಕ ಇದ್ದರೆ, ಅದು ಮನೆಯನ್ನು ಸಂಪದ್ಭರಿತ ಮಾಡಲಿದೆ. ವರ್ಷಕ್ಕೆ ಜನರು ಐದು ಮೀಟರ್ ಖಾದಿಯನ್ನು ಖರೀದಿಸಿದರೂ ಈ ಕೈಮಗ್ಗ ಉಳಿಯಲಿದೆ. ಹೀಗಾಗಿ, ಎಲ್ಲರೂ ಚಿತ್ರಕಲಾ ಪರಿಷತ್ಗೆ ಬಂದು ಕೈಮಗ್ಗದ ವಸ್ತುಗಳನ್ನು ಖರೀದಿಸಿ ಎಂದು ಕರೆ ನೀಡಿದರು.