ಬೆಂಗಳೂರು: ರಾಜ್ಯ ಸರ್ಕಾರ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳನ್ನು ಕಡೆಗಣಿಸಿ ಬಿಜೆಪಿ ಕ್ಷೇತ್ರಗಳಿಗೆ ಹೆಚ್ಚು ಆಹಾರ ಸಾಮಗ್ರಿ ಕಿಟ್ ಗಳನ್ನು ನೀಡುವ ಮೂಲಕ ತಾರತಮ್ಯ ನೀತಿ ಅನುಸರಿಸುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಇದು ಸರಿಯಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ನಾರಾಯಣಸ್ವಾಮಿ ಆರೋಪ ಮಾಡಿದರು.
ಕೆ. ಆರ್. ಪುರ ಸಮೀಪದ ಹೆಚ್ಎಎಲ್ ವಾರ್ಡಿನ ಬಡ ಜನರಿಗೆ ಪಡಿತರ ಹಾಗೂ ತರಕಾರಿ ವಿತರಿಸಿ ಮಾತನಾಡಿದ ಅವರು ಆಹಾರ ಸಾಮಗ್ರಿಗಳು ಪ್ರಾಮಾಣಿಕವಾಗಿ ಬಡವರಿಗೆ ತಲುಪುತ್ತಿಲ್ಲ. ಸಂಕಷ್ಟದ ಸಮಯದಲ್ಲಿ ಕ್ಷುಲ್ಲಕ ರಾಜಕಾರಣ ಸರಿಯಲ್ಲ. ಜನ ಒಪ್ಪತ್ತಿನ ಊಟಕ್ಕೂ ಪರದಾಡುವಂತಾಗಿದೆ. ರಾಜಕಾರಣ ಬದಿಗಿಟ್ಟು ಪ್ರಾಮಾಣಿಕವಾಗಿ ಬಡವರಿಗೆ ಸಾಮಗ್ರಿಗಳನ್ನು ವಿತರಿಸಬೇಕು ಎಂದರು.
ಮಹದೇವಪುರ ಕ್ಷೇತ್ರಕ್ಕೆ ಹದಿನಾರು ಸಾವಿರ, ಕೆ. ಆರ್. ಪುರ ಕ್ಷೇತ್ರಕ್ಕೆ ಇಪ್ಪತ್ತು ಸಾವಿರ ಕಿಟ್ ಗಳನ್ನು ಕೊಟ್ಟಿದ್ದಾರೆ. ಕೆಲ ಭಾಗಗಳಲ್ಲಿ ತಮ್ಮ ಭಾವಚಿತ್ರಗಳನ್ನು ಅಂಟಿಸುತ್ತಿದ್ದಾರೆ. ಕೆಲವು ಕಡೆ ಕೆಲವರಿಗೆ ಮಾತ್ರ ಕಿಟ್ ಗಳನ್ನು ವಿತರಿಸಿ ಉಳಿದವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದಾರೆ ಎಂದು ದೂರಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಮಂಜುನಾಥ್, ಮಾಜಿ ಬ್ಲಾಕ್ ಅಧ್ಯಕ್ಷ ಎಸ್. ನಾರಾಯಣಸ್ವಾಮಿ, ಮುಖಂಡ ಪ್ರಸಾದ್ ರೆಡ್ಡಿ ಇದ್ದರು.