ನವದೆಹಲಿ/ಬೆಂಗಳೂರು: ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ರಾಜ್ಯದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಲು ಹಾಗೂ ಕೋಮು ಗಲಭೆ ಸೃಷ್ಟಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುವಂತೆ ಜನತೆಗೆ ರಾಷ್ಟ್ರದ ಎಲ್ಲ ಪ್ರತಿಪಕ್ಷಗಳು ಒಕ್ಕೋರಲ ಮನವಿ ಮಾಡಿವೆ. ಕೋಮು ಸೌಹಾರ್ದ ವಿಚಾರದಲ್ಲಿ ನಾವು ಎಲ್ಲ ರಾಜಕೀಯ ಪಕ್ಷಗಳ ನಾಯಕರು ಸೇರಿ ಜನರಲ್ಲಿ ಮನವಿ ಮಾಡುತ್ತಿದ್ದೇವೆ. ಆಡಳಿತ ಪಕ್ಷದ ಒಂದು ವರ್ಗವು ಉದ್ದೇಶಪೂರ್ವಕವಾಗಿ ಆಹಾರ, ವಸ್ತ್ರ, ನಂಬಿಕೆ, ಹಬ್ಬಗಳು ಹಾಗೂ ಭಾಷೆ ವಿಚಾರವಾಗಿ ನಮ್ಮ ಸಮಾಜ ಒಡೆಯಲು ಪ್ರಯತ್ನಿಸುತ್ತಿರುವುದು ಬಹಳ ನೋವಿನ ಸಂಗತಿ ಎಂದು ಉಲ್ಲೇಖಿಸಲಾಗಿದೆ.
ದೇಶದ ಜನರಲ್ಲಿ ದ್ವೇಷದ ಭಾಷಣ ಹೆಚ್ಚುತ್ತಿರುವ ಸಂದರ್ಭದಲ್ಲಿ, ಇಂತಹವರನ್ನು ಶಿಕ್ಷಿಸಬೇಕಾದವರೆ ಇದಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಪ್ರತಿಪಕ್ಷಗಳು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿವೆ. ಇತ್ತೀಚೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಉದ್ಭವಿಸಿರುವ ಕೋಮು ಗಲಭೆಗಳನ್ನು ನಾವು ಖಂಡಿಸುತ್ತೇವೆ. ಇಂತಹ ಘಟನೆಗಳು ನಡೆದಿರುವ ಪ್ರದೇಶಗಳಲ್ಲಿ ಭೀಕರವಾಗಿ ಷಡ್ಯಂತ್ರ ರೂಪಿಸಿರುವ ಬಗ್ಗೆ ವರದಿಗಳು ತಿಳಿಸಿರುವುದು ಆತಂಕಕಾರಿಯಾಗಿದೆ. ಸಮಾಜದಲ್ಲಿ ಕಿಚ್ಚು ಹಚ್ಚುವ ದ್ವೇಷ ಭಾಷಣ, ಮಾರಕಾಸ್ತ್ರಗಳಿಂದ ಕೂಡಿರುವ ಧಾರ್ಮಿಕ ಯಾತ್ರೆಗಳು ಕೋಮು ಗಲಭೆಯನ್ನು ಹುಟ್ಟು ಹಾಕುವಂತಿವೆ.

ಕೋಮು ದ್ವೇಷವನ್ನು ಬಿತ್ತಲು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಧ್ವನಿ ಹಾಗೂ ದೃಶ್ಯ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನೋವಿನ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಮಂತ್ರಿಗಳ ಮೌನ ಆಘಾತ ತಂದಿದೆ. ದ್ವೇಷ ಭಾಷಣ ಹಾಗೂ ಕೃತ್ಯಗಳ ಮೂಲಕ ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸುವವರನ್ನು ಖಂಡಿಸುವ ಹಾಗೂ ಕ್ರಮಕೈಗೊಳ್ಳಲು ಅವರು ವಿಫಲರಾಗಿದ್ದಾರೆ. ಅವರ ಈ ಮೌನ ದುಷ್ಕರ್ಮಿಗಳು, ಗಲಭೆಕೋರರ ಕೃತ್ಯದಷ್ಟೇ ಪ್ರಮಾದವಾಗಲಿದೆ. ಹೀಗಾಗಿ ಶತ ಶತಮಾನಗಳಿಂದ ದೇಶಕ್ಕೆ ಕೀರ್ತಿ ತಂದಿರುವ ಸೌಹಾರ್ದತೆಯನ್ನು ಮತ್ತೆ ಸ್ಥಾಪಿಸಲು ಹಾಗೂ ಜನರನ್ನು ಒಗ್ಗೂಡಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದ್ದಾರೆ.