ಬೆಂಗಳೂರು: ಕರ್ನಾಟಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಭೂಪಟದಲ್ಲಿ ಗುರುತಿಸಿಕೊಂಡಿದ್ದು, ಪ್ರಗತಿಪರ ರಾಜ್ಯವೆಂದು ಹೆಸರಾಗಿದೆ. ಆದರೆ 25 ಜಿಲ್ಲೆಗಳ 1,454 ಗ್ರಾಮಗಳಲ್ಲಿ ಇಂದಿಗೂ ಶವ ಸಂಸ್ಕಾರಕ್ಕೆ ಸ್ಮಶಾನವೇ ಇಲ್ಲ. ಈ ಗ್ರಾಮಗಳಲ್ಲಿ ಸರ್ಕಾರದ ಜಮೀನು ಲಭ್ಯವಿಲ್ಲದ್ದರಿಂದ ಹಾಗೂ ಕಂದಾಯ ಇಲಾಖೆಯ ಯಾವ ಭೂಮಿಯೂ ಇಲ್ಲದ್ದರಿಂದ ಸ್ಮಶಾನಕ್ಕಾಗಿ ರಾಜ್ಯ ಸರ್ಕಾರ ಪ್ರತ್ಯೇಕ ಜಾಗ ಒದಗಿಸಲು ಸಾಧ್ಯವಾಗದೇ ನಿಸ್ಸಹಾಯಕವಾಗಿದೆ.
ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಒದಗಿಸಲು ವಿಫಲವಾದ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ಹೈಕೋರ್ಟ್ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿತ್ತು. ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿ ಜೈಲಿಗಟ್ಟಬೇೆಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಹೈಕೋರ್ಟ್ ಚಾಟಿಯಿಂದ ಎಚ್ಚೆತ್ತ ಕಂದಾಯ ಇಲಾಖೆ ಈಗ ಸರ್ಕಾರದ ಜಮೀನು ಇಲ್ಲದ ಗ್ರಾಮಗಳಲ್ಲಿ ಖಾಸಗಿ ಭೂ ಮಾಲೀಕರಿಂದ ಅಗತ್ಯ ಭೂಮಿ ಖರೀದಿಸಿ ಸ್ಮಶಾನಕ್ಕೆ ಜಾಗದ ಸೌಲಭ್ಯ ಒದಗಿಸಲು ಮುಂದಾಗಿದೆ.
ಖಾಸಗಿ ಜಮೀನು ಖರೀದಿಗೆ ಆದೇಶ: ಸ್ಮಶಾನ ಸೌಕರ್ಯಗಳಿಲ್ಲದ ಗ್ರಾಮಗಳಲ್ಲಿ ಖಾಸಗಿ ಭೂಮಿ ಖರೀದಿಸಲು ಕಂದಾಯ ಇಲಾಖೆ 6 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸ್ಮಶಾನಕ್ಕೆ ಖಾಸಗಿ ಜಮೀನು ಕೊಂಡುಕೊಳ್ಳಲು ನಿರ್ದೇಶನ ನೀಡಿದೆ.
ಜಿಲ್ಲಾವಾರು ವಿವರ: ರಾಜ್ಯದ ಅತಿ ದೊಡ್ಡ ಜಿಲ್ಲೆ ಬೆಳಗಾವಿಯ-307 ಗ್ರಾಮಗಳಲ್ಲಿ, ಶಿವಮೊಗ್ಗ ಜಿಲ್ಲೆಯ-187 ಗ್ರಾಮಗಳಲ್ಲಿ, ಹಾಸನದ-157 ಗ್ರಾಮಗಳಲ್ಲಿ, ಧಾರವಾಡದ-76 ಗ್ರಾಮಗಳಲ್ಲಿ, ಹಾವೇರಿ-40, ಗದಗ-67, ವಿಜಯಪುರ-71, ಬಾಗಲಕೋಟೆ-72, ಬೀದರ್-55, ಕಲಬುರಗಿ-47, ಕೊಪ್ಪಳ-08, ರಾಯಚೂರು-83, , ಯಾದಗಿರಿ-39, ವಿಜಯನಗರ-05, ಚಾಮರಾಜನಗರ-24, ಚಿಕ್ಕಮಗಳೂರು-29, ಕೊಡಗು-57, ಮಂಡ್ಯ-38, ಮೈಸೂರು-51, ಉಡುಪಿ-02, ಚಿತ್ರದುರ್ಗ-03, ದಾವಣಗೆರೆ-12, ಕೋಲಾರ-12, ರಾಮನಗರ-12 ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯ ಇಲ್ಲವೆಂದು ಕಂದಾಯ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ಕಂದಾಯ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 29,616 ಗ್ರಾಮಗಳಿವೆ. ಇವುಗಳಲ್ಲಿ 27,099 ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯ ಕಲ್ಪಿಸಲಾಗಿದೆ. ಉಳಿದ 1,454 ಗ್ರಾಮಗಳಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನ ಸೌಲಭ್ಯ ವ್ಯವಸ್ಥೆ ಮಾಡಬೇಕಾಗಿದೆ. ಬೆಂಗಳೂರು ಜಿಲ್ಲೆಯ 28 ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ನೀಡಲು ಸರ್ಕಾರಿ ಜಮೀನು ಲಭ್ಯವಿಲ್ಲ.
ಅಕ್ಕ-ಪಕ್ಕ ಗ್ರಾಮದ ಸ್ಮಶಾನ ಬಳಕೆ: ಬೆಂಗಳೂರು ನಗರ ಜಿಲ್ಲೆಯ 813 ಗ್ರಾಮಗಳಲ್ಲಿ 760 ಗ್ರಾಮಗಳು ಸ್ಮಶಾನ ಸೌಲಭ್ಯ ಹೊಂದಿವೆ. ಉಳಿದ 53 ಗ್ರಾಮಗಳ ಪೈಕಿ 28 ಗ್ರಾಮಗಳಲ್ಲಿ ಸರ್ಕಾರಿ ಜಮೀನು ಇಲ್ಲದೇ ಇರುವುದರಿಂದ ಅಕ್ಕ- ಪಕ್ಕದ ಗ್ರಾಮದ ಸ್ಮಶಾನಗಳನ್ನು ನಿಗದಿಪಡಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. 23 ಗ್ರಾಮಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವುದರಿಂದ ಚಿತಾಗಾರಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. ಉಳಿದಂತೆ 2 ಗ್ರಾಮಗಳು ಹಿಂದಿನಿಂದಲೂ ಪಕ್ಕದ ಗ್ರಾಮದ ಸ್ಮಶಾನ ಬಳಕೆ ಮಾಡುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ 593 ಗ್ರಾಮಗಳಲ್ಲಿ 521 ಗ್ರಾಮಗಳು ಸ್ಮಶಾನ ಸೌಲಭ್ಯ ಹೊಂದಿವೆ. ಇನ್ನೂ 72 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒದಗಿಸಬೇಕಾಗಿದೆ. 4 ತಾಂಡಾಗಳು ಮತ್ತು 30 ಗ್ರಾಮಗಳಿಗೆ ಸ್ಮಶಾನಕ್ಕಾಗಿ ಹಳ್ಳದ ದಂಡೆ, ಖಾಸಗಿ ಜಮೀನು ಮತ್ತು ಅರಣ್ಯ ಇಲಾಖೆ ಜಮೀನು ಉಪಯೋಗಿಸುತ್ತಿದ್ದು, 38 ಗ್ರಾಮಗಳಿಗೆ ಸ್ಮಶಾನದ ಅವಶ್ಯಕತೆ ಇರುತ್ತದೆ ಎಂದು ಕಂದಾಯ ಇಲಾಖೆ ವರದಿಯಲ್ಲಿ ವಿವರಿಸಿದೆ.
ಇದನ್ನೂ ಓದಿ: ರಾಜ್ಯದ 974 ಗ್ರಾಮಗಳಲ್ಲಿಲ್ಲ ಸ್ಮಶಾನ.. ಜಮೀನು ಖರೀದಿಗೆ ಪ್ರಸ್ತಾವನೆ ಸಲ್ಲಿಸಲು ಡಿಸಿಗಳಿಗೆ ಸೂಚನೆ