ಬೆಂಗಳೂರು: ದೇಶದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಕೆಲ ಆಯುಷ್ ಚಿಕಿತ್ಸಾ ಸಂಸ್ಥೆಗಳು ಹಾಗೂ ಔಷಧ ತಯಾರಕರು ಮತ್ತು ಮಾರಾಟಗಾರರು ಅನಗತ್ಯ ಲಾಭ ಪಡೆಯಲು ಜಾಹೀರಾತು ನೀಡುತ್ತಿದ್ದಾರೆ.
ಜಾಹೀರಾತುಗಳನ್ನು ನೋಡಿದ ಜನರು, ಯಾವುದೇ ಅರಿವಿಲ್ಲದೆ ಸ್ವತಃ ಔಷಧ ಪ್ರಯೋಗಗಳನ್ನು ಮಾಡಿಕೊಳ್ಳುವ ಸಂಭವವಿದೆ. ಇದು ರೋಗವನ್ನು ಗಂಭೀರತೆ ಕಡೆಗೆ ಕರೆದೊಯ್ಯುವ ಆತಂಕವಿರುವ ಕಾರಣಕ್ಕೆ ಹಾಗೂ ರೋಗಿಗಳಲ್ಲಿ ಹುಸಿ ಭದ್ರತೆ ( pseudo security) ಕಲ್ಪನೆಯಿಂದ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರಲಿದೆ. ಇಂತಹವುಗಳನ್ನು ನಿಯಂತ್ರಿಸಲು ಭಾರತ ಸರ್ಕಾರದ ಆಯುಷ್ ಮಂತ್ರಾಲಯ ಈಗಾಗಲೇ ಆದೇಶ ಹೊರಡಿಸಿದೆ. ಆ ಪ್ರಕಾರ ಇದೀಗ ರಾಜ್ಯ ಆಯುಷ್ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ಈ ರೀತಿ ಪ್ರಸಾರ ಮತ್ತು ಪ್ರಕಟವಾಗುವ ಆಕ್ಷೇಪಾರ್ಹ ಜಾಹೀರಾತುಗಳು ಔಷಧ ಮತ್ತು ಮ್ಯಾಜಿಕ್ ರಮಿಡಿಸ್ ಆಕ್ಷೇಪಾರ್ಹ ಜಾಹೀರಾತು ನಿಯಮಗಳು 1954 ಮತ್ತು ಅದರಡಿಯ ನಿಯಮಗಳ ಹಾಗೂ NCMA (National Disaster Management Authority) 2005 ರ ಉಲ್ಲಂಘನೆಯಾಗಲಿದೆ.

ಹೀಗಾಗಿ, ಎಲ್ಲಾ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಿಗೆ ಕೋವಿಡ್-19 ರೋಗದ ಕುರಿತು ಯಾವುದೇ ಆಯುಷ್ ಚಿಕಿತ್ಸೆ ಮತ್ತು ಆಯುಷ್ ಔಷಧಗಳ ಕುರಿತು ಆಕ್ಷೇಪಾರ್ಹ ಜಾಹೀರಾತುಗಳನ್ನು ಪ್ರಕಟ ಮತ್ತು ಪ್ರಸಾರ ಮಾಡದಂತೆ ಆದೇಶಿಸಿದೆ.