ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸುಧಾರಿತ ತಂತ್ರಜ್ಞಾನಗಳು ಹೆಚ್ಚುತ್ತಲೇ ಇವೆ. ಅದರಲ್ಲೂ ಮಾನವನ ಸಹಾಯವಿಲ್ಲದೇ ಕಾರ್ಯನಿರ್ವಹಿಸಬಲ್ಲ ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿವೆ. ಕೃಷಿ ಕ್ಷೇತ್ರದಲ್ಲೂ ಇಂತಹ ಆವಿಷ್ಕಾರಗಳು ನಡೆಯುತ್ತಿವೆ. ಹನಿ ನೀರಾವರಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿದ್ದು, ಕ್ರಾಂತಿಯೊಂದು ಮೂಡಿದೆ.

ಡ್ರಿಪ್ ಸ್ಮಾರ್ಟ್ ಹೆಸರಿನಲ್ಲಿ ಬೆಂಗಳೂರು ಮೂಲದ ಮೇಘಾ ಆಗ್ರೊಟೆಕ್ ಪ್ರೈ.ಲಿ. ಹೆಸರಿನ ಕಂಪನಿ ವಿಶೇಷ ತಂತ್ರಜ್ಞಾನವನ್ನು ಹನಿ ನೀರಾವರಿ ವ್ಯವಸ್ಥೆಗೆ ಅಳವಡಿಸಿದ್ದು, ಅತ್ಯಂತ ಕಡಿಮೆ ಪ್ರಮಾಣದ ಜನರಿಂದಲೇ ಇದನ್ನು ನಿರ್ವಹಿಸಬಹುದು. ಕೇವಲ ಮೊಬೈಲ್ ಅಪ್ಲಿಕೇಷನ್ ಮೂಲಕವೇ ಯಾರು ಬೇಕಾದರೂ, ಎಲ್ಲಿ ಬೇಕಾದರೂ ಕುಳಿತು ಇದರ ಕಾರ್ಯ ನಿರ್ವಹಣೆ ಮಾಡಬಹುದು. ಅಲ್ಲದೇ ವಾತಾವರಣ, ಪರಿಸ್ಥಿತಿ, ಪರಿಸರ ಆಧರಿಸಿ ಭೂಮಿಗೆ ಅಗತ್ಯವಿರುವ ನೀರು ಹಾಗೂ ಗೊಬ್ಬರವನ್ನು ಪೂರೈಸುವ, ಕಾಲಮಾನಕ್ಕೆ ತಕ್ಕಂತೆ ಭೂಮಿಗೆ ಅಗತ್ಯವಿರುವ ಪೋಷಕಾಂಶವನ್ನು ಒದಗಿಸುವ ವಿಶಿಷ್ಟ ಕಾರ್ಯವನ್ನು ಇದು ಮಾಡುತ್ತದೆ.
ಮೇಘಾ ಆಗ್ರೊಟೆಕ್ ಕಂಪನಿ ಕೃಷಿ ಮೇಳದಲ್ಲಿ ಈ ಸೌಲಭ್ಯದ ಪರಿಚಯ ಮಾಡಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಜನರನ್ನು ಸೆಳೆಯುತ್ತಿದೆ. ವಿಶೇಷ ಅಂದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದ ವಲಯದಲ್ಲಿ ಕೆಲಸ ನಿರ್ವಹಿಸಿ, ಕೋವಿಡ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡು ತಮ್ಮ ಸ್ವಂತ ಊರುಗಳಿಗೆ ತೆರಳಿ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಆದಾಯ ಗಳಿಸುತ್ತಿರುವ ಯುವ ಸಮುದಾಯವನ್ನು ಸೆಳೆಯುತ್ತಿದೆ.

ಅತ್ಯಂತ ಮಿತ ಪ್ರಮಾಣದ ನೀರಿನ ಲಭ್ಯತೆ ಇರುವ ಪ್ರದೇಶದಲ್ಲಿಯೂ ಉತ್ತಮ ಫಸಲು ತೆಗೆಯುವುದು ಹೇಗೆ ಎಂಬುದನ್ನು ತಿಳಿಯಬಹುದಾಗಿದೆ. ಅನಿರೀಕ್ಷಿತವಾಗಿ ಉದ್ಯೋಗ ಕಳೆದುಕೊಂಡ ಯುವಕ-ಯುವತಿಯರು ಇಂದು ತಮ್ಮ ಸ್ವಂತ ಊರು ಸೇರಿದ್ದು, ಹೊಸ ತಂತ್ರಜ್ಞಾನ ಕೃಷಿ ಆರಂಭಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೆ ಹೊಸದೊಂದು ತಿರುವು ತಂದುಕೊಡಲಿದೆ. ಹೊಸ ಪದ್ಧತಿಯನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಲಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿ ದಿನದಿಂದ ದಿನಕ್ಕೆ ಉನ್ನತೀಕರಣಗೊಳ್ಳುತ್ತಿದ್ದು, ಮಿತ ನೀರಿನ ಬಳಕೆಯಲ್ಲಿ ಉತ್ತಮ ಬೆಳೆ ತೆಗೆಯುವ ತಂತ್ರಜ್ಞಾನವನ್ನು ಜನ ಮೆಚ್ಚಿ ತಮ್ಮದಾಗಿಸಿಕೊಳ್ಳುತ್ತಿದ್ದಾರೆ.
ಡ್ರಿಪ್ ಸ್ಮಾರ್ಟ್ ಇಂದಿನ ತಲೆಮಾರಿನ ಕೃಷಿಕರನ್ನು ಸೆಳೆಯುತ್ತಿರುವ, ವಿಶೇಷ ಸಂಶೋಧನೆಯೊಂದಿಗೆ ಅಭಿವೃದ್ಧಿಗೊಂಡ ಸುಧಾರಿತ ಹನಿ ನೀರಾವರಿ ವ್ಯವಸ್ಥೆಯಾಗಿದೆ. ನೀರಾವರಿ, ಗೊಬ್ಬರ, ಹವಾಮಾನ, ಬೆಳಕು, ಕಾರ್ಬನ್ ಡೈಆಕ್ಸೈಡ್, ಕೀಟ ನಿರ್ವಹಣೆ (ಸಂಶೋಧನೆ ಹಂತದಲ್ಲಿದೆ), ವಿದ್ಯುತ್ ಶಕ್ತಿ ನಿರ್ವಹಣೆಯನ್ನು ಇದು ಮಾಡುತ್ತದೆ. ಗಿಡಗಳ ಬುಡದಲ್ಲಿ ದಿನದ 24 ಗಂಟೆಯೂ ತೇವಾಂಶ ಉಳಿದುಕೊಳ್ಳುವಂತೆ ನೋಡಿಕೊಳ್ಳುವ ಜತೆಗೆ ಗಾಳಿ, ನೀರಿನ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ.
ಮಣ್ಣಿನ ತೇವಾಂಶ, ಮಣ್ಣಿನ ತಾಪಮಾನ, ಮಣ್ಣು-ನೀರಿನ ಒತ್ತಡದ ಗುಣಲಕ್ಷಣಗಳ ಮಾಹಿತಿಯನ್ನು ಸಂಗ್ರಹಿಸಿ ಎಲ್ಲಾ ಮಾಹಿತಿಯನ್ನೂ ಕ್ಲೌಡ್ ತಂತ್ರಜ್ಞಾನದಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಪ್ರತಿಯೊಂದು ಮಾಹಿತಿಯನ್ನೂ ಮೊಬೈಲ್ ಅಪ್ಲಿಕೇಷನ್ ಮೂಲಕ ದಾಖಲೀಕರಿಸಿ ರೈತರಿಗೆ ನೀಡಲಾಗುತ್ತದೆ. ಬೆಳೆಗೆ ಬೇಕಾದ ನೀರಿನ ಹಾಗೂ ಪೋಷಕಾಂಶದ ಮಾಹಿತಿಯನ್ನು ಮಾಹಿತಿ ರವಾನೆ ಮಾಡುವ ಕಾರ್ಯವನ್ನು ಇದು ಮಾಡಲಿದೆ. ಒಟ್ಟಾರೆ ತಂತ್ರಜ್ಞಾನದ ಸದ್ಬಳಕೆ ಇಲ್ಲಾಗಿದ್ದು, ಹನಿ ನೀರಾವರಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮೂಡಿಸಿದೆ. ಸಂಸ್ಥೆಯ ವೆಬ್ಸೈಟ್ನಲ್ಲಿ ಎಲ್ಲಾ ಮಾಹಿತಿ ಲಭ್ಯವಿದೆ.
ನೂತನ ತಂತ್ರಜ್ಞಾನ ಕುರಿತು ಮಾತನಾಡಿರುವ ಮೇಘಾ ಆಗ್ರೊಟೆಕ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಆರ್. ಪ್ರಸಾದ್, ಹನಿ ಮತ್ತು ತುಂತುರು ನೀರಾವರಿ ದೇಶಕ್ಕೆ ಬಂದು 40 ವರ್ಷವಾಗಿದೆ. ನಾವು ಈ ಕ್ಷೇತ್ರದಲ್ಲಿ 25 ವರ್ಷದಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ನಾವು ಯುವಕರಿಗೆ ಕೃಷಿ ಕ್ಷೇತ್ರದಲ್ಲಿ ಹನಿ ನೀರಾವರಿ ಮೂಲಕ ಸಹಕಾರ ನೀಡಲು ಸಿದ್ಧ. ಆದಾಯ ದ್ವಿಗುಣಗೊಳಿಸಲು ಸಹಾಯ ಮಾಡುತ್ತೇವೆ. ವಿದ್ಯುತ್, ಕೂಲಿಗಳ ಬಳಕೆಯೂ ಕಡಿಮೆ ಆಗಲಿದೆ. ತರಕಾರಿ, ಅಡಿಕೆ, ಬಾಳೆ, ತೆಂಗು, ಕಬ್ಬು, ಭತ್ತಕ್ಕೂ ಇದರ ಬಳಕೆ ಆಗುತ್ತಿದೆ. ರಾಜ್ಯ ಸರ್ಕಾರದಿಂದ ಮೊದಲ ಬಾರಿ ಡ್ರಿಪ್ ಅಳವಡಿಸುವವರಿಗೆ ಸಬ್ಸಿಡಿ ನೀಡಲಾಗುತ್ತಿದೆ. ಸಾಮಾನ್ಯ ಜನರಿಗೆ ಶೇ.75 ರಷ್ಟು ಹಾಗೂ ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ.90ರಷ್ಟು ಸಬ್ಸಿಡಿ ಸಿಗುತ್ತದೆ ಎಂದಿದ್ದಾರೆ.
ಮೇಘಾ ಆಗ್ರೋಟೆಕ್ ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ವಿನು ಎಲ್ ಅರಸ್, ಈ ಡ್ರಿಪ್ ವ್ಯವಸ್ಥೆಯೇ ಪ್ರತಿಯೊಂದನ್ನೂ ನಿರ್ಧರಿಸುತ್ತದೆ. ಪರಿಸರದ ಆಧಾರದ ಮೇಲೆ ಗಿಡಕ್ಕೆ ನೀರು, ಗೊಬ್ಬರ, ಪ್ರಮಾಣ ಎಷ್ಟು ಎನ್ನುವುದನ್ನು ಅತ್ಯಂತ ಸುಧಾರಿತ ವ್ಯವಸ್ಥೆಯಲ್ಲಿ ನಿರ್ಧರಿಸುತ್ತದೆ. ಕ್ಲೌಡ್ ತಂಥ್ರಜ್ಞಾನ ಬಳಸಿ ಕಾರ್ಯನಿರ್ವಹಿಸುತ್ತದೆ. ಮಳೆಗಾಲದ ಸಂದರ್ಭದಲ್ಲಿ ನೀರನ್ನು ನಿಲ್ಲಿಸುತ್ತದೆ. ಅಗತ್ಯ ಎನಿಸಿದರೆ ನಾವೇ ನೀರನ್ನು ಮ್ಯಾನ್ಯುವಲಿ ಹಾಯಿಸಬೇಕಾಗುತ್ತದೆ. ಭೂಮಿ ವಿಪರೀತವಾಗಿ ಒಣಗಿದ ಸಂದರ್ಭ ಬಳಕೆದಾರರ ಮೊಬೈಲ್ಗೆ ನೋಟಿಫಿಕೇಷನ್ ಬರುತ್ತದೆ. ಯಂತ್ರದಲ್ಲಿ ಸಣ್ಣ ಸಮಸ್ಯೆ ಇದ್ದರೂ ಮಾಹಿತಿ ಒದಗಿಸುತ್ತದೆ. ಸಮತಟ್ಟಾದ ನೆಲಕ್ಕೆ ಇದು ಹೆಚ್ಚು ಸೂಕ್ತ ಎನ್ನುತ್ತಾರೆ.
ಇದನ್ನೂ ಓದಿ: ಫ್ಯಾನ್ಗೆ ನೇಣು ಬಿಗಿದುಕೊಂಡರೂ ಹೋಗಲ್ಲ ಜೀವ: ಮಾರ್ಕೆಟ್ಗೆ ಬಂದಿದೆ ಸೇಫ್ ಫ್ಯಾನ್ ಡಿವೈಸ್..!