ಬೆಂಗಳೂರು : ಕೊರೊನಾ ಹರಡುವ ಭೀತಿ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಸುರಕ್ಷತೆಯ ನಿಟ್ಟಿನಲ್ಲಿ ಆರೋಪಿಗಳನ್ನು ಬಂಧಿಸುವಾಗ ಪಾಲಿಸಬೇಕಾದ ಕ್ರಮಗಳ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ನಿಯಮ ರೂಪಿಸಿದ್ದು, ಹೊಸ ರೂಲ್ಸ್ ಕೇಳಿ ಕೆಲ ಸಿಬ್ಬಂದಿ ತಬ್ಬಿಬ್ಬಾಗಿದ್ದಾರೆ.
ಹೊಸ ನಿಯಮಗಳೇನು..?: ಹೊಸ ನಿಯಮದ ಪ್ರಕಾರ ಆರೋಪಿಗಳನ್ನು ಬಂಧಿಸಿದ ತಕ್ಷಣ ಪೊಲೀಸರು ಅವರನ್ನು ಎರಡು ಬಾರಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಬೇಕು. ಬಳಿಕ ಅವರ ಕೈ ಕಾಲುಗಳ ಉಗುರು ಕತ್ತರಿಸಬೇಕು. ಇದಾದ ಬಳಿಕ ಮುಂದಿನ ಕಾರ್ಯವನ್ನು ಮಾಡಬೇಕು. ಈ ನಿಯಮಗಳನ್ನು ಪಾಲಿಸುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಠಾಣೆಗಳೇ ಇಲ್ಲದೆ ನಿಯಮ ಪಾಲಿಸುವುದು ಹೇಗೆ..?
ಸದ್ಯ ಸಿಲಿಕಾನ್ ಸಿಟಿಯ ಸುಮಾರು 31 ಪೊಲೀಸ್ ಠಾಣೆಗಳು ಸೀಲ್ಡೌನ್ ಆಗಿದೆ. ಕೊರೊನಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಕೆಲ ಠಾಣೆಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ. ಹೀಗಾಗಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದ ಬಳಿಕ ಆಯುಕ್ತರು ಸೂಚಿಸಿದ ಈ ನಿಯಮಗಳನ್ನು ಪಾಲಿಸುವುದು ಅಸಾಧ್ಯ. ಇದರ ಜೊತೆಗೆ ಆರೋಪಿಗಳು ಸ್ಲಂ ಸೇರಿದಂತೆ ಇತರ ಕಡೆ ಸುತ್ತಾಡಿರುವುದರಿಂದ ಅವರ ಮೂಲಕ ಸಿಬ್ಬಂದಿಗೆ ಸೋಂಕು ತಗುಲುವ ಸಾಧ್ಯತೆಯಿದೆ. ಆದ್ದರಿಂದ ಸಿಬ್ಬಂದಿ ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ನಿರ್ಧರಿಸಿದ್ದಾರೆ. ಡಿಸಿಪಿಗಳು ಕೂಡ ಆಯುಕ್ತರೊಂದಿಗೆ ಈ ಕುರಿತು ಚರ್ಚಿಸುವ ನಿರ್ಧಾರ ಮಾಡಿದ್ದಾರೆ.
ಪೊಲೀಸ್ ಸಿಬ್ಬಂದಿಗೆ ಕೊರೊನಾ ಭೀತಿ:
ಇನ್ನು, ಈ ಹೊಸ ನಿಯಮ ಪಾಲಿಸುವುದು ಅಸಾಧ್ಯ ಎಂಬುವುದು ಪೊಲೀಸ್ ಸಿಬ್ಬಂದಿ ಮಾತು. ಕಾರಣ, ಇತ್ತೀಚೆಗೆ ನಗರದಲ್ಲಿ ಹೆಚ್ಚಿನ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಹಲವು ಠಾಣೆಗಳು ಸೀಲ್ಡೌನ್ ಆಗಿದೆ. ಆರೋಪಿಗಳ ಮೂಲಕ ಪೊಲೀಸರಿಗೆ ಸೋಂಕು ತಗುಲಿದ ಪ್ರಕರಣಗಳು ಇವೆ. ಹೀಗಾಗಿ ಆರೋಪಿಗಳನ್ನು ಬಂಧಿಸುವುದೇ ಸಿಬ್ಬಂದಿಗೆ ಸವಾಲಾಗಿದೆ. ಈ ನಡುವೆ ಅವರನ್ನು ಸ್ನಾನ ಮಾಡಿಸಬೇಕೆಂದರೆ ಕಷ್ಟದ ಕೆಲಸ. ಆಯುಕ್ತರು ಒಳ್ಳೆಯದಕ್ಕೆ ಹೇಳಿದ್ದಾರೆ, ಆದರೂ ಇದು ಅಪಾಯಕಾರಿ ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.