ಬೆಂಗಳೂರು: ನಗರದಲ್ಲಿ 107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನ ನಡೆಯುತ್ತಿರುವುದು ಹೊಸ ಅವಕಾಶಗಳು ತೆರೆದುಕೊಳ್ಳಲು ಅನುವು ಮಾಡಿಕೊಟ್ಟಿದೆ ಎಂದು ಕೌನ್ಸಿಲ್ ಆಫ್ ಸೈಂಟಿಫಿಕ್ ಇಂಡಸ್ಟ್ರಿಯಲ್ ರಿಸರ್ಚ್ನ ನಿರ್ದೇಶಕ ಪ್ರೊ. ಅವಿನಾಶ್ ಕುಮಾರ್ ಶ್ರೀವಾತ್ಸವ್ ತಿಳಿಸಿದ್ದಾರೆ.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅಧೀನದಲ್ಲಿ ನಾವು ಬರುತ್ತಿದ್ದು, ಅತ್ಯಂತ ಪ್ರಮುಖವಾಗಿ ಆರ್ ಎಂಡ್ ಡಿ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ದೇಶದಲ್ಲಿ ಈ ಕ್ಷೇತ್ರ ಅತ್ಯಂತ ತ್ವರಿತಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಸಮ್ಮೇಳನ ಇನ್ನಷ್ಟು ಅನುಕೂಲಕರವಾಗಿದೆ. ನಮಗೂ ಹಾಗೂ ಆರ್ ಎಂಡ್ ಡಿ ಬಯಸುವ ಕಂಪನಿಗಳಿಗೆ ಇದು ಮಧ್ಯವರ್ತಿಯಾಗಿ ಸಹಕಾರಿಯಾಗಿದೆ. ಅಲ್ಲದೆ ಇನ್ನೂ ಹಲವು ನಿಟ್ಟಿನಲ್ಲಿ ಇದು ಉಪಯುಕ್ತವಾಗಿ ಲಭಿಸಿದೆ.
ಯುವ ವಿದ್ಯಾರ್ಥಿಗಳು ಈ ವೇದಿಕೆಯ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಮಾಹಿತಿ ಪಡೆಯಬಹುದು. ದೇಶದ ಆರ್ ಎಂಡ್ ಡಿ ಕ್ಷೇತ್ರದಲ್ಲಿ ಯಾವ ರೀತಿಯ ಪ್ರಗತಿ ಆಗುತ್ತಿದೆ ಎಂಬುದನ್ನು ಕೂಡ ತಿಳಿಯಬಹುದಾಗಿದೆ. ವಿಜ್ಞಾನ-ತಂತ್ರಜ್ಞಾನದ ಪ್ರಗತಿಯೊಂದಿಗೆ ಉತ್ಪಾದನಾ ಕ್ಷೇತ್ರದತ್ತ ಬರಲು ಬಯಸುವ ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯಕ್ಕೆ ಸಮ್ಮೇಳನ ಅತ್ಯಂತ ಮಹತ್ವದ ಮಾಹಿತಿಯನ್ನು ಒದಗಿಸುತ್ತಿದೆ ಎಂದರು.
ನಾವು ಈ ಸಮ್ಮೇಳನದ ಮೂಲಕ ಸಾಕಷ್ಟು ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ಕುರಿತು ಆಗಮಿಸಿದ ಪ್ರತಿನಿಧಿಗಳಿಗೆ ವಿವರಿಸುವ ಕಾರ್ಯ ಮಾಡಿದ್ದೇವೆ. ಪ್ರಾತ್ಯಕ್ಷಿಕೆ ಮೂಲಕ ಆಸಕ್ತರಿಗೆ ಮನಮುಟ್ಟುವಂತೆ ವಿವರಿಸಿದ್ದೇವೆ. ಇಲ್ಲೇ ಉಳಿದವರಿಗೆ ಕಲಿಸುವುದರ ಜೊತೆಗೆ ನಾವು ಕೂಡ ಒಂದಿಷ್ಟು ಕಲಿತುಕೊಳ್ಳಲು ಅವಕಾಶ ಒದಗಿ ಬಂದಿದೆ ಎಂದರು.