ಬೆಂಗಳೂರು: ತುರ್ತು ಕೇಬಲ್ ದುರಸ್ತಿ ಕಾಮಗಾರಿ ಸಂಬಂಧ ಒಂದು ವಾರ ರಾಷ್ಟ್ರೀಯ ಹೆದ್ದಾರಿ ಪೀಣ್ಯ ಮೇಲ್ಸೇತುವೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ನಗರ ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಪೀಣ್ಯ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ ರಾಷ್ಟ್ರೀಯ ಹೆದ್ದಾರಿ-4 ಪೀಣ್ಯ ಎಲಿವೇಟೆಡ್ ಹೆದ್ದಾರಿ( ಡಾ.ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ)ಯ ಪಿಲ್ಲರ್ ನಂ-102 ಮತ್ತು 103ರ ಮದ್ಯೆ 8ನೇ ಮೈಲಿಯ ಸ್ವಾತಿ ಪೆಟ್ರೋಲ್ ಬಂಕ್ ಬಳಿ ಪ್ಲೈಓವರ್ಗೆ ಅಳವಡಿಸಿರುವ ಕೇಬಲ್ ಅನ್ನು ತುರ್ತಾಗಿ ದುರಸ್ತಿ ಮಾಡುವ ಅವಶ್ಯಕತೆ ಇದೆ.
ದುರಸ್ತಿ ಕಾರ್ಯ ಕೈಗೊಳ್ಳಲು ಶನಿವಾರದಿಂದ ಒಂದು ವಾರದವರೆಗೆ ಪೀಣ್ಯ ಮೇಲ್ಸೇತುವೆಯಲ್ಲಿ ಸಂಪೂರ್ಣ ವಾಹನ ಸಂಚಾರ ನಿರ್ಬಂಧಿಸಿ ದುರಸ್ತಿಗೆ ಅವಕಾಶ ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಸಂಚಾರ ಮಾರ್ಗ ಬದಲಾವಣೆ:
ತುಮಕೂರು ಕಡೆಯಿಂದ ಬೆಂಗಳೂರು ನಗರದೊಳಗೆ ಪ್ರವೇಶಿಸುವ ವಾಹನಗಳು ಮಾದಾವರದ ಬಳಿ ಬಲ ತಿರುವು ಪಡೆದು ನೈಸ್ ರಸ್ತೆಯ ಮೂಲಕ ಬೆಂಗಳೂರು ನಗರದೊಳಗೆ ಪ್ರವೇಶಿಸಬಹುದು.
ಬೆಂಗಳೂರು ನಗರದಿಂದ ತುಮಕೂರು ರಸ್ತೆಯ ಮೂಲಕ ಹೊರ ಹೋಗುವ ವಾಹನಗಳು ಗೊರಗುಂಟೆಪಾಳ್ಯದ ಸಿಎಂಟಿಐ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ರಿಂಗ್ ರಸ್ತೆ ಮೂಲಕ ಸುಮನಹಳ್ಳಿ, ಮಾಗಡಿ ರಸ್ತೆ ಕಡೆ ಸಂಚರಿಸಿ ನೈಸ್ ರಸ್ತೆ ಪ್ರವೇಶಿಸಿ ಬೆಂಗಳೂರಿನಿಂದ ಹೊರಗೆ ಸಂಚರಿಸಬಹುದಾಗಿದೆ.
ಇದನ್ನೂ ಓದಿ: Karnataka Covid: ರಾಜ್ಯದಲ್ಲಿಂದು 270 ಮಂದಿಗೆ ಕೋವಿಡ್.. ನಾಲ್ವರು ಬಲಿ