ಬೆಂಗಳೂರು: ಪ್ರಯಾಣಿಕರಿಗೆ ಡ್ರಾಪ್ ಕೊಡುವ ನೆಪದಲ್ಲಿ ದರೋಡೆ ಮಾಡಿದ್ದ 6 ಜನ ಕುಖ್ಯಾತ ದರೋಡೆಕೋರರನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಸುನಿಲ್ ಕುಮಾರ್, ಅಭಿಲಾಶ್, ರಂಜನ್, ಸುದೀಪ್, ರೋಹಿತ್, ಹರೀಶ್ ಬಂಧಿತ ಆರೋಪಿಳು. ಸುಮನಹಳ್ಳಿ ಬಸ್ ನಿಲ್ದಾಣ ಬಳಿ ಪ್ರಯಾಣಿಕರನ್ನು ಕಾರಿಗೆ ಹತ್ತಿಸಿಕೊಂಡು ಲಗ್ಗೆರೆ ಬ್ರಿಡ್ಜ್ ಬಳಿ ಬರುವಾಗ ಪ್ರಯಾಣಿಕರನ್ನು ಬೆದರಿಸಿ 19 ಸಾವಿರ ರೂ. ಹಣ ಸುಲಿಗೆ ಮಾಡಿದ ಬಳಿಕ ಕಾರಿನಿಂದ ಆಚೆ ತಳ್ಳಿ ಪರಾರಿಯಾಗಿದ್ದರು.
ಈ ಸಂಬಂಧ ನಂದಿನಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಂದು ಕಾರು, 3 ದ್ವಿಚಕ್ರ ವಾಹನ, ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ 2 ದರೋಡೆ, 2 ದ್ವಿಚಕ್ರ ವಾಹನ ಕಳವು ಪ್ರಕರಣ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.