ಬೆಂಗಳೂರು: ಭ್ರಷ್ಟಾಚಾರ, ಗಲಭೆ, ಭಯೋತ್ಪಾದನೆಗೆ ಮತ್ತೊಂದು ಹೆಸರು ಕಾಂಗ್ರೆಸ್ ಪಕ್ಷ. ದೇಶಕ್ಕೆ ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ಎನ್ನುವ ಎರಡು ದೊಡ್ಡ ಕೊಡುಗೆ ಕೊಟ್ಟಿರುವುದು ಕಾಂಗ್ರೆಸ್. ಹಾಗಾಗಿಯೇ ಇಂದು ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗಿದೆ. ಈಗ ಕಾಂಗ್ರೆಸ್ ಮುಕ್ತ ಕರ್ನಾಟಕವನ್ನು ಮಾಡಬೇಕಿದೆ. ಮುಂದಿನ ಚುನಾವಣೆಯಲ್ಲಿ ಅದನ್ನೂ ಮಾಡಿ ತೋರಿಸೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ಜಿಲ್ಲೆ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ಯೋಚನೆ ಮಾಡಬೇಕು. ಸ್ವಾತಂತ್ರದ ನಂತರ ಕಾಂಗ್ರೆಸ್ ನಿಂದ ಯಾರೆಲ್ಲಾ ಪ್ರಧಾನಮಂತ್ರಿಯಾಗಿದ್ದಾರೋ ಅವರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಒಬ್ಬರು ಮಾತ್ರ ಕಳಂಕರಹಿತರಾಗಿದ್ದಾರೆ. ನೆಹರುಯಿಂದ ಹಿಡಿದು ಮನಮೋಹನ್ ಸಿಂಗ್ವರೆಗೆ ಎಲ್ಲರೂ ಕಳಂಕಿತ ಪ್ರಧಾನಮಂತ್ರಿಗಳಾಗಿದ್ದರು. ಅತಿ ಹೆಚ್ಚು ಭ್ರಷ್ಟಾಚಾರ ಮಾಡಿರುವ ಪಕ್ಷ ಕಾಂಗ್ರೆಸ್ ಎಂದು ಟೀಕಿಸಿದರು.
ಈ ದೇಶಕ್ಕೆ ಕಾಂಗ್ರೆಸ್ ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ಎನ್ನುವ ಎರಡು ದೊಡ್ಡ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಈ ದೇಶಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆ ಈ ದೇಶದಲ್ಲಿ ಭಯೋತ್ಪಾದನೆಯನ್ನು ಬೆಳೆಸಿದ್ದು. ಭಾರತದಲ್ಲಿ ಸರಣಿ ಬಾಂಬ್ ಸ್ಫೋಟಿಸಿದ್ದ ದಾವೂದ್ ಇಬ್ರಾಹಿಂ ವಿದೇಶಕ್ಕೆ ಪಲಾಯನ ಮಾಡಲು ಕಾಂಗ್ರೆಸ್ ಕಾರಣ. ಅಂದು ದಾವೂದ್ ಬಂಧಿಸಲು ಅವರಿಗೆ ಆಗಲಿಲ್ಲ ಎಂದರು.
ಭಯೋತ್ಪಾದನೆ ನಿಗ್ರಹ ಮಾಡಲು ಆಗಲಿಲ್ಲ. ದೆಹಲಿ ಸೇರಿದಂತೆ ದೇಶದ ಹಲವೆಡೆ ಬಾಂಬ್ ಸ್ಫೋಟ ಕಾಂಗ್ರೆಸ್ ಆಳ್ವಿಕೆಯಲ್ಲಿ ನಡೆದಿದೆ. ನಿರಂತರವಾದ ಬಾಂಬ್ ಸ್ಫೋಟಗಳು ನಡೆದಿವೆ. ಬೆಂಗಳೂರಿನ ಬಿಜೆಪಿ ಕಚೇರಿ ಬಳಿಯೂ ಬಾಂಬ್ ಸ್ಫೋಟವಾಯಿತು. ಆದರೆ ನರೇಂದ್ರ ಮೋದಿ ಆಳ್ವಿಕೆಯಲ್ಲಿ ಒಂದೇ ಒಂದು ಬಾಂಬ್ ಸ್ಫೋಟ ಆಗಲಿಲ್ಲ. ಆ ರೀತಿಯಲ್ಲಿ ಭಯೋತ್ಪಾದಕ ಚಟುವಟಿಕೆ ನಿಗ್ರಹ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಪಿಎಸ್ಐ ಅಕ್ರಮ: ರುದ್ರಗೌಡ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್ಗೆ 13 ದಿನ ಸಿಐಡಿ ಕಸ್ಟಡಿ