ಬೆಂಗಳೂರು : ಜನಪ್ರತಿನಿಧಿಗಳು ಪ್ರತಿ ವರ್ಷ ಜೂನ್ನಲ್ಲಿ ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತರಿಗೆ ಸಲ್ಲಿಸಬೇಕು. ಆದರೆ, ಈ ವರ್ಷ ಇದುವರೆಗೆ ಆಸ್ತಿ ವಿವರ ಸಲ್ಲಿಸದವರ ಪಟ್ಟಿ ದೊಡ್ಡದಿದೆ. ಈ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಈ ವರ್ಷ ಕೊರೊನಾ ಕಾರಣ ಆಡಿಟಿಂಗ್ ಸಮಸ್ಯೆಯಾಗಿದೆ ಎಂದು ಹಲವರು ಪತ್ರ ಬರೆದಿದ್ದಾರೆ. ಅಲ್ಲದೇ, ಆದಾಯ ಇಲಾಖೆಗೆ ಆಸ್ತಿ ವಿವರ ಸಲ್ಲಿಕೆ ಮಾಡಲು ನವೆಂಬರ್ವರೆಗೆ ಸಮಯವಕಾಶ ಇದೆ. ಹೀಗಾಗಿ ಈ ಬಾರಿ ಬಹಳಷ್ಟು ಮಂದಿ ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ. ಲೋಕಾಯುಕ್ತ ನ್ಯಾಯಮೂರ್ತಿಯಾದ ನಾನು ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳು ಆಸ್ತಿ ವಿವರ ಸಲ್ಲಿಕೆ ಮಾಡಬೇಕು ಎಂಬ ನಿಯಮ ಇಲ್ಲ. ನಾವು ಅಧಿಕಾರ ಸ್ವೀಕಾರ ಮಾಡುವಾಗ ನಮ್ಮ ಆಸ್ತಿ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ತೆರಿಗೆ ಕಟ್ಟಿಯೇ ಅಧಿಕಾರ ಸ್ವೀಕಾರ ಮಾಡಿರುವುದು. ಹೀಗಾಗಿ, ನಮ್ಮ ಆಸ್ತಿ ವಿವರ ಬಹಿರಂಗ ಮಾಡಬೇಕಾದ ನಿಯಮ ಇಲ್ಲ. ಹಾಗೆ ಹೊಸ ಕಾನೂನು ತರಲು ನನಗೂ ಇಷ್ಟ ಇಲ್ಲ ಎಂದು ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.
ಸದ್ಯ 225 ಶಾಸಕರ ಪೈಕಿ, ಇಲ್ಲಿಯವರೆಗೆ 148 ಮಂದಿ ಆಸ್ತಿ ವಿವರ ಸಲ್ಲಿಸಿಲ್ಲ. ಅವರ ಹೆಸರುಗಳು ಹೀಗಿವೆ :
ಸಚಿವರು : ಮಾಧು ಸ್ವಾಮಿ, ಜಗದೀಶ್ ಶೆಟ್ಟರ್, ಶ್ರೀರಾಮಲು, ಕೆ.ಎಸ್ ಈಶ್ವರಪ್ಪ, ಹೆಚ್.ನಾಗೇಶ್ , ಕೆ.ಗೋಪಾಲಯ್ಯ , ಬಿ.ಸಿ ಪಾಟೀಲ್ ಕೃಷಿ ಸಚಿವ, ಕೋಟಾ ಶ್ರೀನಿವಾಸ್ ಪೂಜಾರಿ
ಶಾಸಕರು : ಸಿದ್ದರಾಮಯ್ಯ, ಎಂ.ಪಿ ರೇಣುಕಾಚಾರ್ಯ, ಎಸ್. ಆರ್ ವಿಶ್ವನಾಥ್ , ಡಿ.ಕೆ ಶಿವಕುಮಾರ್ , ದಿನೇಶ್ ಗುಂಡೂರಾವ್ , ಡಾ.ಜಿ ಪರಮೇಶ್ವರ್, ರಾಮಲಿಂಗರೆಡ್ಡಿ, ಎ.ಸ್.ಆರ್ ಪಾಟೀಲ್, ಹೆಚ್.ಡಿ ರೇವಣ್ಣ, ಯು.ಟಿ ಖಾದರ್, ಜಮೀರ್ ಅಹ್ಮದ್, ಸಿಎಂ ಇಬ್ರಾಹಿಂ, ಸತೀಶ್ ಜಾರಕಿಹೊಳ್ಳಿ , ಅಂಜಲಿ ನಿಂಬಾಳ್ಕರ್.
ಜನ ಪ್ರತಿನಿಧಿಗಳು ಆಸ್ತಿ ವಿವರ ಸಲ್ಲಿಕೆ ಮಾಡದಿದ್ದರೆ, ಅಂತವರ ಹೆಸರು ಬಹಿರಂಗಪಡಿಸಿ ರಾಜ್ಯಪಾಲರಿಗೆ ದೂರು ನೀಡಬಹುದು. ಆದರೆ, ಈ ಬಗ್ಗೆ ರಾಜ್ಯಪಾಲರು ಯಾವ ರೀತಿ ಕ್ರಮಕೈಗೊಳ್ಳುತ್ತಾರೆ ಎಂಬ ಬಗ್ಗೆ ಕಾನೂನಿನಲ್ಲಿ ಸ್ಪಷ್ಟ ಮಾಹಿತಿ ಇಲ್ಲ. ಪ್ರಸ್ತುತ ಕೊರೊನಾ ಇರುವ ಕಾರಣ, ಲೋಕಾಯುಕ್ತ ಕೂಡ ಇದರ ಬಗ್ಗೆ ಗಮನ ಹರಿಸಿಲ್ಲ. ಲೋಕಾಯುಕ್ತದಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ, ಸಿಬ್ಬಂದಿ ಸಮಸ್ಯೆ ಇದೆ. ಹೀಗಾಗಿ, ಈ ಬಗ್ಗೆ ಮುಂದಿನ ದಿನದಲ್ಲಿ ತೀರ್ಮಾನ ಮಾಡಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ತಿಳಿಸಿದ್ದಾರೆ.