ಬೆಂಗಳೂರು : ರಾಜ್ಯದಲ್ಲಿನ ಕೋವಿಡ್ ಸೋಂಕಿತರ ಮರಣದ ಪ್ರಮಾಣದ ವಿಚಾರದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಹೆಚ್.ಕೆ. ಪಾಟೀಲ್ ಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿರುಗೇಟು ನೀಡಿದ್ದಾರೆ.
ಹೆಚ್.ಕೆ. ಪಾಟೀಲ್ ಅವರೆ, ತಾವು ಹಿರಿಯರಿದ್ದೀರಿ. ವಾಸ್ತವಾಂಶ ಅರಿಯದೆ ಜನರ ದಿಕ್ಕು ತಪ್ಪಿಸುವ ಹೇಳಿಕೆ ಕೊಡುವುದು ನಿಮಗೆ ಶೋಭೆ ತರುವುದಿಲ್ಲ. ಕರ್ನಾಟಕದ ಕೋವಿಡ್ ಮರಣ ಪ್ರಮಾಣ ಶೇ.1.64 ಮತ್ತು ಬೆಂಗಳೂರಿನ ಕೋವಿಡ್ ಮರಣ ಪ್ರಮಾಣ ಶೇ.1.50 ರಷ್ಟಿದ್ದು ರಾಷ್ಟ್ರೀಯ ಮರಣ ಪ್ರಮಾಣಕ್ಕಿಂತ (ಶೇ.1.76) ಕಡಿಮೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.
![Minister Sudhakar tweet about Ex minister HK Patil statement](https://etvbharatimages.akamaized.net/etvbharat/prod-images/kn-bng-05-sudhakar-tweet-about-hk-patil-allegations-script-7208080_03092020194942_0309f_1599142782_301.jpg)
ಬೆಂಗಳೂರಿನ ಕೋವಿಡ್ ಪರಿಸ್ಥಿತಿ ಗಣನೀಯ ಸುಧಾರಣೆ ಕಂಡಿದೆ. ಜುಲೈ ತಿಂಗಳಿನಲ್ಲಿ ಶೇ.1.85 ರಷ್ಟಿದ್ದ ಮರಣ ಪ್ರಮಾಣ ಶೇ.1.50 ಕ್ಕೆ ಇಳಿಕೆಯಾಗಿದೆ. ಜುಲೈ ತಿಂಗಳಲ್ಲಿ ಶೇ.24 ಇದ್ದ ಪಾಸಿಟಿವಿಟಿ ದರ ಶೇ.14.74 ಕ್ಕೆ ಇಳಿಕೆಯಾಗಿದೆ. ಜುಲೈ ಆರಂಭದಲ್ಲಿ ಪ್ರತೀ ದಿನ ನಡೆಸುತ್ತಿದ್ದ 4,000 ಟೆಸ್ಟಿಂಗ್ ಸಂಖ್ಯೆ ಈಗ 25,000ಕ್ಕೆ ಏರಿಕೆಯಾಗಿದೆ ಎಂದು ಕೋವಿಡ್ ನಿರ್ವಹಣೆ ಮಾಹಿತಿಯನ್ನು ನೀಡಿದ್ದಾರೆ.