ಬೆಂಗಳೂರು : ಮೆಟ್ರೊ ರೈಲು ಯೋಜನೆಯ ಮೊದಲನೇ ಹಂತ ಹಾಗೂ ಎರಡನೇ ಹಂತಗಳಲ್ಲಿ ಕೇಂದ್ರದ ನಿಯಮ ಪಾಲಿಸಿರುವ ಕುರಿತು ಪರಿಶೀಲಿಸಲು ನೇಮಕಗೊಂಡಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು (ಐಐಎಂಬಿ) ಸಂಸ್ಥೆಗೆ ವರದಿ ಸಲ್ಲಿಸಲು ಹೈಕೋರ್ಟ್ ಜೂ.30ವರೆಗೆ ಕಾಲಾವಕಾಶ ನೀಡಿದೆ.
ಮೆಟ್ರೋ ಯೋಜನೆ ಜಾರಿಗೆ ಮುನ್ನ ಕೇಂದ್ರ ಸರ್ಕಾರ ವಿಧಿಸಿದ್ದ ನಿಯಮಗಳನ್ನು ಯೋಜನೆ ಅನುಷ್ಠಾನದ ವೇಳೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಪರಿಸರವಾದಿ ಡಿ.ಟಿ ದೇವರೆ ಹಾಗೂ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿವೆ.
ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ಐಐಎಂಬಿ ಕಾಲಾವಕಾಶ ಕೋರಿ ಸಲ್ಲಿಸಿದ್ದ ಮನವಿಗಳನ್ನು ಪರಿಶೀಲಿಸಿ, ಜೂನ್ 30 ರೊಳಗೆ ಅಧ್ಯಯನ ವರದಿಯನ್ನು ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಿದೆ.
ಹಿಂದಿನ ವಿಚಾರಣೆ ವೇಳೆ ನಮ್ಮ ಮೆಟ್ರೊ ಮೊದಲನೇ ಮತ್ತು ಎರಡನೇ ಹಂತಗಳ ಕಾಮಗಾರಿಗಳನ್ನು ಒಪ್ಪಂದದ ನಿಯಮಗಳ ಪ್ರಕಾರ ಯೋಜನೆ ಅನುಷ್ಠಾನಗೊಳಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ ಐಐಎಂಬಿ ವರದಿ ನೀಡುವಂತೆ ಪೀಠ ನಿರ್ದೇಶನ ನೀಡಿತ್ತು.
ಅರ್ಜಿದಾರರ ಕೋರಿಕೆ : ಅರ್ಜಿದಾರರು ನಮ್ಮ ಮೆಟ್ರೊ ಮೊದಲನೇ ಹಂತಕ್ಕೆ 2006ರ ಮೇ 11ರಂದು ಮಂಜೂರಾತಿ ನೀಡಿ 2010ರ ಡಿ.24ರಂದು ಒಪ್ಪಂದಕ್ಕೆ ಬಿಎಂಆರ್ಸಿಎಲ್ ಸಹಿ ಹಾಕಿತ್ತು. ಎರಡನೇ ಹಂತದ ಯೋಜನೆಗೆ 20114ರ ಫೆ.21ರಂದು ಮಂಜೂರಾತಿ ನೀಡಿ 2017ರ ಫೆ.24ರಂದು ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದಗಳಲ್ಲಿ ಹೇಳಲಾಗಿದ್ದ ಸಮಗ್ರ ಸಾರಿಗೆ ಯೋಜನೆ ಹಾಗೂ ಸಂಚಾರ ವ್ಯವಸ್ಥೆಯ ಸುಧಾರಣೆ ಕುರಿತ ಯೋಜನೆಗಳನ್ನು ಉಲ್ಲಂಘಿಸಲಾಗಿದೆ. ಹೀಗಾಗಿ ಒಪ್ಪಂದದಂತೆ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರ ಹಾಗೂ ಬಿಎಂಆರ್ಸಿಎಲ್ ಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.