ಬೆಂಗಳೂರು: ಕೊರೊನಾ ಪರಿಸ್ಥಿತಿಯಿಂದಾಗಿ ದೇಶದಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗಿತ್ತು. 2020ರಲ್ಲಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳೇನೂ ಕಡಿಮೆಯಾಗಿರಲಿಲ್ಲ. ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಕೆಲವೊಂದು ಘಟನೆಗಳು ದೇಶದಲ್ಲಿ ಮಾತ್ರವಲ್ಲದೆ, ವಿದೇಶದಲ್ಲೂ ಸುದ್ದಿಯಾದವು. ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ನಡೆದ ಕೆಲವೊಂದು ಪ್ರಮುಖ ಅಪರಾಧ ಪ್ರಕರಣಗಳು ಹೀಗಿವೆ.
ಡಿ.ಜೆ.ಹಳ್ಳಿ ಕೆ.ಜಿ.ಹಳ್ಳಿ ಗಲಭೆ ಪ್ರಕರಣ: ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿ ನವೀನ್ ವಿವಾದ್ಮಾತಕ ಪೋಸ್ಟ್ನಿಂದ ಹೊತ್ತಿಕೊಂಡ ಬೆಂಕಿ ಬೆಂಗಳೂರು ನಗರವನ್ನು ಅಕ್ಷರಶಃ ತಲ್ಲಣಗೊಳಿಸಿತ್ತು. ಆಗಸ್ಟ್ 11ರಂದು ಶಾಸಕರ ಮನೆ, ಡಿ.ಜೆ.ಹಳ್ಳಿ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗಳ ಮುಂದೆ ನೂರಾರು ಜನರು ಸೇರಿ ಕಲ್ಲು ತೂರಾಟ ನಡೆಸಿ ವಿಧ್ವಂಸಕ ಕೃತ್ಯವೆಸಗಿದ್ದರು. ಇದು ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಪ್ರಕರಣದ ಗಂಭೀರತೆ ಅರಿತ ಸರ್ಕಾರ ಸಿಸಿಬಿ ತನಿಖೆಗೆ ವಹಿಸಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ತಂಡವು ಮಾಜಿ ಮೇಯರ್ ಸಂಪತ್ ರಾಜ್, ಮಾಜಿ ಕಾರ್ಪೋರೇಟರ್ ಜಾಕೀರ್, ಎಸ್ಡಿಪಿಐ ಮುಖಂಡ ಮುಜಾಹಿದ್ ಪಾಷಾ ಸೇರಿದಂತೆ ಒಟ್ಟು 300ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದೆ. ಎನ್ಐಎ ಕೂಡ ಪ್ರಕರಣ ದಾಖಲಿಸಿಕೊಂಡು ಗಲಭೆ ನಡೆದ ಸ್ಥಳಗಳಲ್ಲಿ ಪರಿಶೀಲನೆ ಮಾಡಿ ಹಲವರನ್ನು ಬಂಧಿಸಿತ್ತು.
ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ನಂಟು ಪ್ರಕರಣ: ಕೇಂದ್ರದ ಮಾದಕ ವಸ್ತು ನಿಗ್ರಹ ದಳ (ಎನ್ಸಿಬಿ) ಡ್ರಗ್ಸ್ ಸರಬರಾಜು ಆರೋಪದಡಿ ಅನಿಕಾ, ಅನುಪ್, ರವೀಂದ್ರ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸುತ್ತಿದ್ದಂತೆ ಸ್ಯಾಂಡಲ್ವುಡ್ ಸ್ಟಾರ್ ನಟಿಯರು ಈ ದಂಧೆಯಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿತ್ತು. ಮಾಹಿತಿ ಆಧರಿಸಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ 20ಕ್ಕೂ ಹೆಚ್ಚು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಮಾಜಿ ಸಚಿವರ ಪುತ್ರ ಆದಿತ್ಯ ಆಳ್ವಾ, ಶಿವಪ್ರಕಾಶ್ ಚಿಪ್ಪಿ ಸೇರಿದಂತೆ ಪ್ರಮುಖರು ತಲೆಮರೆಸಿಕೊಂಡಿದ್ದಾರೆ.
ಪಾದರಾಯನಪುರ ದೊಂಬಿ ಪ್ರಕರಣ: ಕೊರೊನಾ ಮುಂಜಾಗ್ರತಾ ಕ್ರಮವಾಗಿ ಚಾಮರಾಜಪೇಟೆಯ ಪಾದರಾಯನಪುರ ವಾರ್ಡ್ನಲ್ಲಿ ಕಳೆದ ಏಪ್ರಿಲ್ 19ರಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಸೋಂಕಿತರನ್ನು ಕ್ವಾರಂಟೈನ್ಗೆ ಕರೆದೊಯ್ಯುವಾಗ ಗಲಭೆ ಎಬ್ಬಿಸಿದ 300ಕ್ಕೂ ಹೆಚ್ಚು ಸ್ಥಳೀಯರು, ಶಾಮಿಯಾನ, ಕುರ್ಚಿ, ಮೇಜುಗಳನ್ನು ಧ್ವಂಸಗೊಳಿಸಿದ್ದರು. ಈ ಸಂಬಂಧ 130ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಸರ್ಕಾರದ ಸೂಚನೆಯಂತೆ ಆರೋಪಿಗಳನ್ನು ರಾಮನಗರ ಕಾರಾಗೃಹಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಗುಂಪಿನಲ್ಲಿದ್ದ ಐವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಇದಾದ ಕೆಲವೇ ದಿನಗಳ ಅಂತರದಲ್ಲಿ ಪಾದರಾಯಪುರ ವಾರ್ಡ್ ಕಾರ್ಪೋರೇಟರ್ ಆಗಿದ್ದ ಇಮ್ರಾನ್ ಪಾಷಾ ಕೋವಿಡ್ ನಿಯಮಾವಳಿ ಪಾಲಿಸದೆ ಗುಂಪುಗೂಡಿ ಅಭಿಮಾನಿಗಳ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದ. ಘಟನೆ ಸಂಬಂಧ ಜೆ.ಜೆ ನಗರ ಪೊಲೀಸರು ಇಮ್ರಾನ್ ಪಾಷಾನನ್ನು ಬಂಧಿಸಿದ್ದರು.
ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ್: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಯುವತಿ ಅಮೂಲ್ಯ ಲಿಯೋನ್ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಳು. ಇದು ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅಮೂಲ್ಯಳನ್ನು ದೇಶದ್ರೋಹ ಪ್ರಕರಣದಡಿ ಬಂಧಿಸಲಾಗಿತ್ತು. ಇದಾದ ಕೆಲವೇ ದಿನಗಳ ಅಂತರದಲ್ಲಿ ಟೌನ್ ಹಾಲ್ ಮುಂದೆ ಹಮ್ಮಿಕೊಂಡಿದ್ದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಯುವತಿ ಆದ್ರಾ ಪ್ರತ್ಯೇಕ ಕಾಶ್ಮೀರ ಮಾಡುವಂತೆ ಒತ್ತಾಯಿಸಿ ಭಿತ್ತಿಪತ್ರ ಪ್ರದರ್ಶಿಸಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿತ್ತು.
ಮೋಸ್ಟ್ ವಾಂಟೆಡ್ ಡಾನ್ ರವಿ ಪೂಜಾರಿ ಬಂಧನ: ಎರಡು ದಶಕಗಳಿಂದ ದೇಶ ಬಿಟ್ಟು ಅಫ್ರಿಕಾದ ಸೆನೆಗಲ್ ದೇಶದಲ್ಲಿ ಅಡಗಿಕೊಂಡಿದ್ದ ಪಾತಕ ಲೋಕದ ಮೋಸ್ಟ್ ವಾಂಟೆಡ್ ಡಾನ್ ರವಿ ಪೂಜಾರಿಯನ್ನು ಕರ್ನಾಟಕ ಪೊಲೀಸರು ಬಂಧಿಸಿ ನಗರಕ್ಕೆ ಕಳೆದ ಫೆಬ್ರವರಿಯಲ್ಲಿ ಕರೆ ತಂದಿದ್ದರು. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರ ಪ್ರದೇಶ ಸೇರಿ ದೇಶದ ವಿವಿಧ ರಾಜ್ಯಗಳ ಪೊಲೀಸರಿಗೆ ಈತ ಬೇಕಾಗಿದ್ದ. ಹಲವು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಈತನನ್ನು ಇತ್ತೀಚೆಗೆ ಮಹಾರಾಷ್ಟ್ರ ಪೊಲೀಸರು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದುಕೊಂಡಿದ್ದರು.
ಐಸಿಸ್ ನಂಟು ಶಂಕಿತ ಉಗ್ರನ ಬಂಧಿಸಿದ ಪೊಲೀಸರು: ಶಂಕಿತ ಉಗ್ರ ಗುಂಪಿನ ನಾಯಕ ಎನಿಸಿಕೊಂಡಿದ್ದ ಮೆಹಬೂಬ್ ಪಾಷ ನಗರದ ಗುರಪ್ಪನಪಾಳ್ಯದ ಮನೆಯೊಂದರಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ರಾಜ್ಯ ಗುಪ್ತಚರ ವಿಭಾಗ (ಐಬಿ) ಮತ್ತು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.
ಐಎಎಂ ವಂಚನೆ ಕೇಸ್: ರೋಷನ್ ಬೇಗ್ ಬಂಧನ: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಸೇರಿದಂತೆ ಅಂದು ಕರ್ತವ್ಯ ನಿರ್ವಹಿಸಿದ್ದ ಪೊಲೀಸರು ಹಾಗೂ ಇತರೆ ಅಧಿಕಾರಿಗಳನ್ನೊಳಗೊಂಡಂತೆ 28 ಜನರ ವಿರುದ್ಧ ಸಿಬಿಐ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿತ್ತು. ವಂಚನೆ ಪ್ರಕರಣ ಸಂಬಂಧ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆರ್.ರೋಷನ್ ಬೇಗ್ರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು
ಬಹುಕೋಟಿ ವಂಚನೆ ಪ್ರಕರಣ ಕಣ್ವ ಗ್ರೂಪ್ ಎಂಡಿ ಬಂಧನ: ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಕಣ್ವ ಗ್ರೂಪ್ ವ್ಯವಸ್ಥಾಪಕ ನಂಜುಂಡಯ್ಯ, ನಿರ್ದೇಶಕನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ಆಗಸ್ಟ್ 27ರಂದು ಬಂಧಿಸಿದ್ದರು. ಗ್ರಾಹಕರಿಂದ ಪಡೆದಿದ್ದ ಅಸಲು ಹಾಗೂ ಬಡ್ಡಿ ಹಣವನ್ನು ಹಿಂದಿರುಗಿಸದೆ ವಂಚನೆ ಎಸಗಿದ ಆರೋಪದಡಿ ಬಂಧಿಸಿದ ವಿಚಾರಣೆ ನಡೆಸಿ, 180 ಕೋಟಿ ರೂಪಾಯಿ ಅಕ್ರಮ ಆಸ್ತಿ ಇರುವುದನ್ನು ಇಡಿ ಬಯಲಿಗೆಳೆದಿತ್ತು. ಕಳೆದ 16 ವರ್ಷಗಳ ಹಿಂದೆ ಕಣ್ವ ಸಮೂಹ ಕಂಪನಿಯನ್ನು ಹುಟ್ಟುಹಾಕಿದ್ದ ನಂಜುಂಡಯ್ಯ, ಕೋ ಆಪರೇಟಿವ್ ಸೊಸೈಟಿ, ರಿಯಲ್ ಎಸ್ಟೇಟ್, ಆಸ್ಪತ್ರೆ ಹಾಗೂ ಗಾರ್ಮೆಂಟ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ಹಣ ಹೂಡಿಕೆ ಮಾಡಿದ್ದ.
ಎರಡಂಕಿ ಲಾಟರಿ ಹಗರಣ: ಅಲೋಕ್ ಕುಮಾರ್ಗೆ ಕ್ಲೀನ್ ಚಿಟ್ : ಎರಡಂಕಿ ಲಾಟರಿ ಹಗರಣ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ಗೆ ಸಿಬಿಐ ಕ್ಲೀನ್ ಚಿಟ್ ನೀಡಿದ್ದ ಹಿನ್ನೆಲೆ ರಾಜ್ಯ ಸರ್ಕಾರವು ಸೆ. 25ರಂದು ಅಮಾನತು ಆದೇಶ ಹಿಂಪಡೆದಿತ್ತು. ಆರೋಪ ಕೇಳಿ ಬರುತ್ತಿದ್ದಂತೆ ಅಲೋಕ್ ಕುಮಾರ್ ಅವರನ್ನು ಐದು ತಿಂಗಳು ಅಂದಿನ ರಾಜ್ಯ ಸರ್ಕಾರ ಅಮಾನತು ಮಾಡಿತ್ತು. ಪ್ರಕರಣದಲ್ಲಿ ಅಲೋಕ್ ಕುಮಾರ್ ಪಾತ್ರವಿಲ್ಲ ಎಂದು ಸಿಬಿಐ ವರದಿ ನೀಡಿದ ಹಿನ್ನೆಲೆ ಅಮಾನತು ರದ್ದು ಮಾಡಿ ಕರ್ತವ್ಯಕ್ಕೆ ನಿಯೋಜಿಸಲಾಯಿತು.
ಸಿಐಡಿಯ ಮಹಿಳಾ ಡಿಎಸ್ಪಿ ಲಕ್ಷ್ಮೀ ಅನುಮಾನಾಸ್ಪದ ಸಾವು: ಸಿಐಡಿ ಡಿಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿ.ಲಕ್ಷ್ಮೀ ಅನುಮಾನಸ್ಪಾದ ಸಾವು ಹಿನ್ನೆಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಲಕ್ಷ್ಮೀ ಸ್ನೇಹಿತರಾದ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದರು. ಇದು ಕೊಲೆಯೋ, ಆತ್ಮಹತ್ಯೆಯೋ ಎಂಬುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್ ) ಅಧಿಕಾರಿಗಳು ನೀಡುವ ವರದಿ ಮೇಲೆ ಲಕ್ಷ್ಮೀಯ ಸಾವು ಕೊಲೆಯೋ, ಆತ್ಮಹತ್ಯೆಯೋ ಎಂಬುದು ತಿಳಿಯಲಿದೆ.