ದಾವೋಸ್/ಬೆಂಗಳೂರು: ಕೈಗಾರಿಕೆಗಳಿಗೆ ಉತ್ತೇಜನಕಾರಿ ವಾತಾವರಣ ಹಾಗೂ ರಾಜ್ಯಕ್ಕೆ ಬಂಡವಾಳ ತರಲು ಕರ್ನಾಟಕ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಾವೋಸ್ನಲ್ಲಿ ನಡೆಯುತ್ತಿರುವ ಆರ್ಥಿಕ ಶೃಂಗದ ಎರಡನೇ ದಿನದ ಸಮಾವೇಶದಲ್ಲಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಉಭಯ ರಾಜ್ಯಗಳ ಆರ್ಥಿಕ ಸ್ಥಿತಿ ಗತಿಗಳ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಕಮಲ್ ನಾಥ್, ಪ್ರತಿಯೊಬ್ಬ ಹೂಡಿಕೆದಾರನೂ ಬೆಂಗಳೂರು ಕುರಿತು ಹಾಗೂ ಪೂರ್ವರಾಷ್ಟ್ರಗಳಲ್ಲಿ ಬೆಂಗಳೂರು ಜ್ಞಾನಾಧಾರಿತ ಕೇಂದ್ರವಾಗಿ ಬೆಳೆದಿರುವ ಕುರಿತು ಉಲ್ಲೇಖಿಸುತ್ತಾರೆ. ಈ ವಿಷಯದಲ್ಲಿ ನಿಮ್ಮನ್ನು ಮೀರಿಸಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಅವರನ್ನು ಅಭಿನಂದಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಮಲ್ನಾಥ್ ಅವರಿಗೆ ರಾಜ್ಯ ಸರ್ಕಾರವು ಕೃಷಿ ವಲಯದಲ್ಲಿ ಕೈಗೊಂಡಿರುವ ನೂತನ ಉಪಕ್ರಮಗಳ ಕುರಿತು ಮಾಹಿತಿ ನೀಡಿದ್ರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಭಾರತ ಸರ್ಕಾರ ನೀಡುವ 6,000 ರೂ. ಗಳ ಜೊತೆಗೆ ಹೆಚ್ಚುವರಿಯಾಗಿ 4,000 ರೂ. ಗಳನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಇದರಿಂದ 40 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಿದೆ ಎಂದು ವಿವರಿಸಿದರು.
ನಂತರ ಕರ್ನಾಟಕ ಪೆವಿಲಿಯನ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಭೇಟಿ ನೀಡಿದರು. ಕರ್ನಾಟಕ ಪೆವಿಲಿಯನ್ ಕುರಿತು ಹಾಗೂ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಹೂಡಿಕೆ ಆಕರ್ಷಿಸುವ ಕುರಿತು ಅಧಿಕಾರಿಗಳ ನಡೆಯನ್ನು ಶ್ಲಾಘಿಸಿದರು. ಬೆಂಗಳೂರನ್ನು ಕೃತಕ ಬುದ್ಧಿ ಮತ್ತು ಆತಿಥ್ಯ ವಲಯಗಳ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿ ಪಡಿಸುವ ಕುರಿತು ಅರಿತುಕೊಳ್ಳಲು ಆಸಕ್ತಿ ವಹಿಸಿದರು.