ಬೆಂಗಳೂರು: ರಾಯಚೂರು ಜಿಲ್ಲೆ ನವೋದಯ ಮೆಡಿಕಲ್ ಕಾಲೇಜು ಪ್ರವೇಶ ಸಂಬಂಧ ಕಲ್ಯಾಣ ಕರ್ನಾಟಕ ಭಾಗದ 371(ಜೆ) ಅಡಿ ಮೀಸಲಾತಿ ಆದೇಶ ಪಾಲನೆಗೆ ಹೈಕೋರ್ಟ್ ತಡೆಯಾಜ್ಞೆ ಕೊಟ್ಟಿದ್ದು, ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ಹೇಳಿದರು.
ಶೂನ್ಯ ವೇಳೆ ಬಿಜೆಪಿ ಸದಸ್ಯ ಡಾ.ಶಿವರಾಜ್ ಪಾಟೀಲ್ ವಿಷಯ ಪ್ರಸ್ತಾಪಿಸಿ, 371(ಜೆ) ಅಡಿಯಲ್ಲಿ ನವೋದಯ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಸಿಗುತ್ತಿಲ್ಲ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಲೋಪದೋಷವಿದ್ದರೆ ಸರಿಪಡಿಸಬೇಕು. ಅಥವಾ ಸುಗ್ರೀವಾಜ್ಞೆಗೆ ಜಾರಿಗೆ ತಂದಾದರು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ಇದನ್ನೂ ಓದಿ: ಕಲಬುರಗಿ : ಹೋಳಿ ಹಬ್ಬಕ್ಕೆ ಊರಿಗೆ ಬಂದವನನ್ನು ಕೊಂದು ಸುಟ್ಟು ಹಾಕಿದ ಕಿರಾತಕರು
ಇದಕ್ಕೆ ಉತ್ತರಿಸಿದ ಸಚಿವರು, ಹೈಕೋರ್ಟ್ ಮುಂದೆ ಅಡ್ಟೋಕೇಟ್ ಜನರಲ್ ಅವರೇ ಸಮರ್ಥವಾಗಿ ವಾದ ಮಂಡಿಸಿದ್ದರು. ಆದರೂ, ನ್ಯಾಯಾಲಯವು ತಡೆಯಾಜ್ಞೆ ಕೊಟ್ಟಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದು, ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಮೀಸಲಾತಿ ವಂಚಿತರಾಗಲು ಬಿಡುವುದಿಲ್ಲ ಎಂದರು. ಇದೇ ವೇಳೆ, ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು.