ಬೆಂಗಳೂರು: ಕೊರೊನಾ ಭೀತಿಯಿಂದ ಲಾಕ್ಡೌನ್ ಮಾಡಿದ ಪರಿಣಾಮ ಬಹುತೇಕ ಸರ್ಕಾರಿ ಕಚೇರಿಗಳ ಕಾರ್ಯ ಸ್ಥಗಿತಗೊಂಡಿದೆ. ಸಿಬ್ಬಂದಿಗೆ ರಜೆ ಘೋಷಿಸಿರುವ ಹಿನ್ನೆಲೆ ಬಹುತೇಕ ಇಲಾಖೆಯ ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿವೆ.
ಕೊರೊನಾ ಲಾಕ್ಡೌನ್ ಇಡೀ ರಾಜ್ಯವನ್ನು ಸ್ತಬ್ಧಗೊಳಿಸಿದೆ. ಲಾಕ್ಡೌನ್ನಿಂದ ಕೇವಲ ಖಾಸಗಿ ಸಂಸ್ಥೆ, ಕಾರ್ಖಾನೆ ಮಾತ್ರವಲ್ಲದೇ ಸರ್ಕಾರಿ ಕಚೇರಿಗಳಿಗೂ ಬೀಗ ಜಡಿಯಲಾಗಿದೆ. ಅಗತ್ಯ ಸೇವೆ ಪೂರೈಸುವ 11 ಇಲಾಖೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಇಲಾಖೆಗಳ ಸಿಬ್ಬಂದಿ, ಅಧಿಕಾರಿಗಳಿಗೆ ರಜೆ ಘೋಷಿಸಲಾಗಿದೆ. ಜೊತೆಗೆ ಕಾರ್ಯನಿರ್ವಹಿಸುತ್ತಿರುವ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ಸಮಯವನ್ನು ಕೊರೊನಾ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ರಾಜ್ಯದ ಬಹುತೇಕ ಆಡಳಿತ ಯಂತ್ರಕ್ಕೆ ಬ್ರೇಕ್ ಬಿದ್ದಿದೆ. ಇಲಾಖೆಗಳು ಲಾಕ್ಡೌನ್ ವೇಳೆ ಮುಚ್ಚಿರುವ ಹಿನ್ನೆಲೆ ಕಡತ ವಿಲೇವಾರಿಗೂ ಬ್ರೇಕ್ ಬಿದ್ದಿದೆ. ಸಕಾಲ ಅಡಿ ಏಪ್ರಿಲ್ ತಿಂಗಳಲ್ಲಿ ಆನ್ಲೈನ್, ಕಾಲ್ ಸೆಂಟರ್, ಜನಸ್ಪಂದನ ಮೂಲಕ ಸ್ವೀಕೃತವಾಗಿರುವ ಅರ್ಜಿಗಳಲ್ಲಿ ಹಲವು ಕಡತಗಳು ವಿಲೇವಾರಿಯಾಗದೇ ಉಳಿದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲಾಖೆಗಳಲ್ಲಿನ ಕಡತ ವಿಲೇವಾರಿ ಬಾಕಿ:
ಲಾಕ್ಡೌನ್ ಸರ್ಕಾರದ ಕಡತ ವಿಲೇವಾರಿ ವೇಗಕ್ಕೆ ಬ್ರೇಕ್ ಹಾಕಿದೆ. ಸಿಬ್ಬಂದಿ, ಅಧಿಕಾರಿಗಳು ರಜೆ ಇರುವ ಹಿನ್ನೆಲೆ ಹಲವು ಕಡತಗಳು ವಿಲೇವಾರಿಯಾಗದೇ ಹಾಗೆ ಬಾಕಿ ಉಳಿದುಕೊಂಡಿವೆ.
ಕಂದಾಯ ಇಲಾಖೆ- 27,668 ,
ನಗರಾಭಿವೃದ್ಧಿ ಇಲಾಖೆ -14886,
ಕಾರ್ಮಿಕ ಇಲಾಖೆ -13,900,
ಒಳಾಡಳಿತ ಇಲಾಖೆ- 3000,
ಗ್ರಾಮೀಣಾಭಿವೃದ್ಧಿ ಇಲಾಖೆ -1776
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ- 1516,
ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆ- 726,
ಇಂಧನ ಇಲಾಖೆ- 659,
ಅರಣ್ಯ ಇಲಾಖೆ -510,
ಒಟ್ಟು ಬಾಕಿ ಉಳಿದುಕೊಂಡಿರುವ ಕಡತ- 72,425.
ಸಚಿವಾಲಯದಲ್ಲಿನ ಬಾಕಿ ಕಡತ:
ಸಚಿವಾಲಯಗಳಲ್ಲೂ ಸಾಕಷ್ಟು ಕಡತಗಳ ವಿಲೇವಾರಿಗೂ ಬ್ರೇಕ್ ಬಿದ್ದಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ವ್ಯಾಪ್ತಿಗೆ ಬರುವ ಕಚೇರಿಗಳಲ್ಲಿ ಸುಮಾರು 129 ಕಡತ ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿವೆ. ಉಳಿದಂತೆ ವಿವಿಧ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ 4,488 ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದುಕೊಂಡಿವೆ.
ಇನ್ನು ಮುಖ್ಯಮಂತ್ರಿ ಸಚಿವಾಯದಲ್ಲಿ ಸುಮಾರು 88 ಕಡತಗಳು ಬಾಕಿ ಉಳಿದುಕೊಂಡಿದೆ. ಅದೇ ರೀತಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುಮಾರು 1,718 ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿವೆ. ವಿಧಾನಸಭೆ ಕಾರ್ಯದರ್ಶಿಗಳ ಕಚೇರಿಯಲ್ಲಿ 65 ಕಡತಗಳು ಬಾಕಿ ಉಳಿದುಕೊಂಡಿವೆ.