ಬೆಂಗಳೂರು: ಇದೇ ಮೊದಲ ಬಾರಿಗೆ ಯಾವುದೇ ವಾಹನ ಸವಾರರು ನಿಂತ ಜಾಗದಲ್ಲೇ 'ಪಂಚರ್ ಸರ್ವೀಸ್' ಪಡೆಯುವ ವಿನೂತನ ಆ್ಯಪ್ ಒಂದನ್ನು ಸಿಲಿಕಾನ್ ಸಿಟಿಯಲ್ಲಿ ಹೊರ ತರಲಾಗಿದೆ. ರಾಜಧಾನಿ ಬೆಂಗಳೂರಿನ ಬ್ಲಾಕ್ ಪೆನ್ ಕಮ್ಯೂನಿಕೇಶನ್ಸ್ ಕಂಪನಿಯ ಸಹಯೋಗದೊಂದಿಗೆ 'ಲೈವ್ ಪಂಚರ್' ಆ್ಯಪ್ ಬಿಡುಗಡೆ ಮಾಡಲಾಗಿದೆ.
ಇದರ ಬಳಕೆಯೂ ಸಂಪೂರ್ಣ ಉಚಿತವಾಗಿದ್ದು, ಪಂಚರ್ ಕಾರ್ಮಿಕರ ಮತ್ತು ವಾಹನ ಸವಾರರ ನಡುವೆ ಸಂಪರ್ಕ ಬೆಳೆಸುವುದೇ ಈ ಆ್ಯಪ್ನ ಮುಖ್ಯ ಉದ್ದೇಶವಾಗಿದೆ. ಸದ್ಯ ಆಂಡ್ರಾಯ್ಡ್ ಮೊಬೈಲ್ಗಳಲ್ಲಿ ಈ ಆ್ಯಪ್ ಲಭ್ಯವಿದ್ದು, ವಾಹನ ಸವಾರರು ಪ್ಲೇ ಸ್ಟೋರ್ ಅಪ್ಲಿಕೇಶನ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಸಹ ಸಂಸ್ಥಾಪಕ ಸಮೀರ್ ದಳಸನೂರು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ಬಳಕೆ, ಕಾರ್ಯ ಹೇಗೆ?: ಈ ಆ್ಯಪ್ ಅನ್ನು ಡೋನ್ ಲೋಡ್ ಮಾಡಿಕೊಂಡ ಬಳಿಕ ವಾಹನ ಸವಾರರು, ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಾಹನದ ಚಕ್ರಗಳೆಷ್ಟು ಎಂದು ನಮೂದಿಸಿದ ಬಳಿಕ ಆ್ಯಪ್ ಬಳಕೆ ಮಾಡಬಹುದಾಗಿದೆ ಎಂದು ಸಮೀರ್ ಮಾಹಿತಿ ನೀಡಿದ್ದಾರೆ.
ಒಂದು ವೇಳೆ ನೀವು ಕಚೇರಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ನಿಮ್ಮ ವಾಹನದ ಚಕ್ರ ಪಂಚರ್ ಆಗಿ ಸಮಸ್ಯೆ ಉಲ್ಬಣಗೊಂಡಿದೆ ಎಂದುಕೊಳ್ಳಿ. ಆಗ ಈ ಆ್ಯಪ್ ತೆರೆದು ನೀವು ನಿಮ್ಮ ಹತ್ತಿರದಲ್ಲೇ ಯಾವ ಪಂಚರ್ ಅಂಗಡಿ ಇದೆ ಎಂದು ನೋಡಬಹುದು. ಬಳಿಕ ಅವರಿಗೆ ಮೊಬೈಲ್ ಕರೆ ಮಾಡಿ ನಿಮ್ಮ ವಾಹನದ ಬಳಿಯೇ ಕರೆಸಿಕೊಳ್ಳಬಹುದು. ಜೊತೆಗೆ ಎಷ್ಟು ಹೊತ್ತಿಗೆ, ಎಲ್ಲಿ ಬರುತ್ತಿದ್ದಾರೆ ಎಂಬುದನ್ನು ಲೈವ್ ನೋಡಬಹುದಾಗಿದೆ.
ಕಾರ್ಮಿಕರಿಗೆ ಅನುಕೂಲ: ಇದೊಂದು ಆ್ಯಪ್ ಅಸಂಘಟಿತ ವಲಯದ ಪಂಚರ್ ಕಾರ್ಮಿಕರ ಅನುಕೂಲಕ್ಕೆ ಮಾಡಲಾಗಿದ್ದು, ಕಂಪನಿಯು ಯಾವುದೇ ರೀತಿಯ ಶುಲ್ಕ ಅಥವಾ ಕಮಿಷನ್ ಪಡೆಯುತ್ತಿಲ್ಲ. ಬದಲಾಗಿ ನೇರವಾಗಿಯೇ ಗ್ರಾಹಕನೊಂದಿಗೆ ಆ್ಯಪ್ ಮೂಲಕ ಸಂಪರ್ಕ ಇಟ್ಟುಕೊಳ್ಳಬಹುದಾಗಿದೆ.
ಹಣದ ಚಿಂತೆ ಇಲ್ಲ: ಈಗಾಗಲೇ ಮಾರುಕಟ್ಟೆಗಳಲ್ಲಿ ಹಲವು ವಾಹನ ಸರ್ವೀಸ್ಗಳ ಆ್ಯಪ್ಗಳು ಚಾಲ್ತಿಯಲ್ಲಿವೆ. ಬಹುತೇಕರು ಗ್ರಾಹಕ ಮತ್ತು ಸರ್ವೀಸ್ ನೀಡುವವರಿಂದ ಹಣ, ಕಮಿಷನ್ ಪಡೆಯುತ್ತಾರೆ. ಆದರೆ ಬ್ಲಾಕ್ ಪೆನ್ ಕಮ್ಯೂನಿಕೇಶನ್ಸ್ ಕಂಪನಿಯೂ ಅಸಂಘಟಿತ ವಲಯದ ಪಂಚರ್ ಕಾರ್ಮಿಕರ ಅನುಕೂಲಕ್ಕೆ ಈ ಆ್ಯಪ್ ಉಚಿತವಾಗಿ ಹೊರತಂದಿದೆ.
ಡೌನ್ಲೋಡ್ ಹೇಗೆ? ಯಾವುದೇ ರೀತಿಯ ವಾಹನ ಸವಾರರು ಈ ಆ್ಯಪ್ ಅನ್ನು ಪ್ಲೇ ಸ್ಟೋರ್ನಲ್ಲಿ LIVE PUNCHER ಎಂದು ಟೈಮ್ ಮಾಡಿ ಈ ಲಭ್ಯ ಪಡೆಯಬಹುದು ಅಥವಾ https://play.google.com/store/apps/details?id=com.livepuncherappಈ ಲಿಂಕ್ ನೋಡಬಹುದು.
ಪಂಚರ್ ಅಂಗಡಿಗೆ ನೋಂದಾಯಿಸಿ: ಯಾವುದೇ ಪ್ರದೇಶದಲ್ಲಿ ಪಂಚರ್ ಅಂಗಡಿಯನ್ನು ಇಟ್ಟುಕೊಂಡಿರುವ ಮಾಲೀಕರು ಈ ಆ್ಯಪ್ನಲ್ಲಿ ಪ್ರವೇಶಿಸಿ ತಮ್ಮ ವಿವರ ನೋಂದಾಯಿಸಿಕೊಳ್ಳಬಹುದು. ಆನಂತರ ಹತ್ತಿರದ ಗ್ರಾಹಕರನ್ನು ಸಂಪರ್ಕಿಸಬಹುದು.
ಸಮಯ ಉಳಿಸಬಹುದು: ವಾಹನಗಳ ಪಂಚರ್ನಿಂದ ಬಹಳಷ್ಟು ಸಮಯ ವ್ಯರ್ಥ ಆಗುತ್ತದೆ. ಜೊತೆಗೆ ಅದನ್ನು ತಳ್ಳಿಕೊಂಡು ಹೋಗುವುದು ಕಷ್ಟಕರ. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಚಲಾನೆ ಸಂದರ್ಭದಲ್ಲಿ ಪಂಚರ್ ಸಮಸ್ಯೆ ನಾನೇ ಸ್ವತಃ ಎದುರಿಸಿದ್ದೇನೆ. ಹೀಗಾಗಿಯೇ ವಾಹನ ಸವಾರರ ಹಾಗೂ ಪಂಚರ್ ಕಾರ್ಮಿಕರ ಅನುಕೂಲಕ್ಕಾಗಿ ಈ ಆ್ಯಪ್ ಹೊರತರಲಾಗಿದೆ ಎಂದು ಸಹ ಸಂಸ್ಥಾಪಕ ಕಾಳಜಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಷ್ಯಾದ ಪರಮಾಣು ಬೆದರಿಕೆಗೆ ಬೆಚ್ಚಿತಾ ಉಕ್ರೇನ್ : ಕೊನೆಗೂ ಶಾಂತಿ ಮಾತುಕತೆಗೆ ಒಪ್ಪಿದ ಝೆಲೆನ್ಸ್ಕಿ