ಬೆಂಗಳೂರು: ಕುಂಚಿಟಿಗರ ಕುಲಶಾಸ್ತ್ರ ಅಧ್ಯಯನ ವರದಿ ಬಿಡುಗಡೆ ಮಾಡುವಂತೆ ಕುಂಚಿಟಿಗ ಮಹಾಸಭಾದಿಂದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಕುಂಚಿಟಿಗರ ಕುಲಶಾಸ್ತ್ರ ಅಧ್ಯಯನ ವರದಿ ಬಿಡುಗಡೆಗೆ ಕುಂಚಿಟಿಗ ಮಹಾಸಭಾದ ಅಧ್ಯಕ್ಷ ಮುರುಳೀಧರ್ ಹಾಲಪ್ಪ ನೇತೃತ್ವದಲ್ಲಿ ಮನವಿ ಮಾಡಿ ಇದರ ಆಧಾರದಲ್ಲಿ ಮೀಸಲಾತಿ ನೀಡುವಂತೆ ಜಯಪ್ರಕಾಶ್ ಹೆಗ್ಡೆ ಅವರಿಗೆ ಮನವಿ ಸಲ್ಲಿಸಲಾಯಿತು.
ಬಳಿಕ ಮಾತನಾಡಿ ಕುಂಚಿಟಿಗ ಮಹಾಸಭಾದ ಅಧ್ಯಕ್ಷ ಮುರುಳೀಧರ್ ಹಾಲಪ್ಪ ಕುಂಚಿಟಿಗ ಸಮಾಜದಿಂದ ರಾಜ್ಯ ಶಾಶ್ವತ ಹಿಂದುಳಿದ ಆಯೋಗಕ್ಕೆ ಮನವಿ ಸಲ್ಲಿಸಲು ಬಂದಿದ್ದೇವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆಯೋಗದ ಅಧ್ಯಕ್ಷರು, ಪ್ರತಿಪಕ್ಷದ ನಾಯಕರು ಹೇಳಿಕೆ ನೀಡಿ ಯಾವುದೇ ಸಮುದಾಯವನ್ನು ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸಲು ಒಂದು ಮಾನದಂಡ ಬೇಕು. ಕುಲಶಾಸ್ತ್ರ ಅಧ್ಯಯನದ ವರದಿ ಅಗತ್ಯ ಎಂದು ಹೇಳಿದ್ದರು. ನಾವು ಇಂದು ಅದನ್ನು ಸಿದ್ಧಪಡಿಸಿ ಆಯೋಗದ ಅಧ್ಯಕ್ಷರಿಗೆ ನೀಡಿದ್ದೇವೆ. ಸಮಾಜ ಕಲ್ಯಾಣ ಇಲಾಖೆ ಮೂಲಕ ಈಗಾಗಲೇ ಮುಖ್ಯಮಂತ್ರಿಗಳಿಗೆ ಈ ವರದಿ ಸಲ್ಲಿಕೆಯಾಗಿದ್ದು, ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಇದನ್ನು ತಲುಪಿಸುತ್ತೇವೆ ಎಂದು ಭರವಸೆ ನೀಡಲಾಗಿದೆ. ನಮ್ಮ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂಬ ಮನವಿಯನ್ನು ನಾವು ಮುಖ್ಯಮಂತ್ರಿಗಳಿಗೂ ಮಾಡಿದ್ದೇವೆ ಎಂದು ತಿಳಿಸಿದರು.
ಶಿರಾ ಉಪಚುನಾವಣೆ ಸಂದರ್ಭ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕುಂಚಿಟಿಗರನ್ನು ಓಬಿಸಿ ಪಟ್ಟಿಗೆ ಸೇರ್ಪಡೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಇದಾದ ಬಳಿಕ ನಾವು ಅವರನ್ನು ಶಿವಮೊಗ್ಗದಲ್ಲಿ ಭೇಟಿಯಾದ ಸಂದರ್ಭದಲ್ಲಿಯೂ ನಮಗೆ ಓಬಿಸಿ ಪಟ್ಟಿಗೆ ಸೇರಿಸುವ ಭರವಸೆ ಸಿಕ್ಕಿತ್ತು. ನಾನು ಯಾವತ್ತೂ ಮಾತು ತಪ್ಪುವುದಿಲ್ಲ, ನಡೆಸಿ ಕೊಡುತ್ತೇನೆ ಎಂದಿದ್ದರು. ಹಾಗಾಗಿ ಆಯೋಗದ ಮೂಲಕ ಸರ್ಕಾರಕ್ಕೆ ನಮ್ಮ ಮನವಿಯನ್ನು ಮತ್ತೊಮ್ಮೆ ಸಲ್ಲಿಕೆ ಮಾಡಿದ್ದೇವೆ ಎಂದರು.
ರಾಜ್ಯದಲ್ಲಿ ಕುಂಚಿಟಿಗ ಸಮುದಾಯವನ್ನು ವರ್ಗ 1ಕ್ಕೆ ಸೇರಿಸುವಂತೆ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅಷ್ಟು ಪ್ರಮಾಣದಲ್ಲಿ ಈ ಸಮುದಾಯದವರು ಹಿಂದುಳಿದಿದ್ದಾರೆ ಎಂದು ವಿವರಿಸಲಾಗಿದೆ. ಇಂದು ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರಿಗೆ ಇದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಈ ಹಿಂದೆ ಅಂದರೆ 1918, 21, 22 ರಲ್ಲಿ ಸಲ್ಲಿಕೆಯಾದ ಆದೇಶಗಳ ಉಲ್ಲೇಖದ ಪ್ರತಿಯನ್ನು ನೀಡಿದ್ದೇವೆ.
ಕರ್ನಾಟಕ ರಾಜ್ಯದಲ್ಲಿ 24 ಲಕ್ಷದಷ್ಟು ನಮ್ಮವರ ಜನಸಂಖ್ಯೆ ಇದೆ. ತಮಿಳುನಾಡಿನಲ್ಲಿ 30 ಲಕ್ಷ ಹಾಗೂ ಆಂಧ್ರಪ್ರದೇಶದಲ್ಲಿ 12 ಲಕ್ಷದಷ್ಟು ಜನಸಂಖ್ಯೆ ಹೊಂದಿದ್ದೇವೆ. ರಾಜ್ಯದ 27 ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಸ್ಪಷ್ಟವಾಗಿ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಮರ್ಥ್ಯವುಳ್ಳ ಮತದಾರರನ್ನು ಹೊಂದಿದೆ. ಇದುವರೆಗೂ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅಷ್ಟೊಂದು ಮುಂದುವರಿದಿರಲಿಲ್ಲ. ಈಗ ನಮ್ಮಲ್ಲಿ ಒಂದಿಷ್ಟು ಒಗ್ಗಟ್ಟು ಹಾಗೂ ಐಕ್ಯತೆ ಮೂಡಿದೆ. ಪರಿಸ್ಥಿತಿ ಏನು ಎಂಬ ಅರಿವು ನಮಗೂ ಮೂಡಿದೆ ಎಂದು ವಿವರಿಸಿದರು.
ಇನ್ನೊಬ್ಬರ ಶೋಷಣೆ ನಮಗೂ ಸಹ ಸಾಕಾಗಿದೆ. ನಮ್ಮ ಅಸ್ತಿತ್ವವೂ ಕೆಲವೆಡೆ ಇರಲಿ ಎಂದು ಬಯಸುತ್ತಿದ್ದೇವೆ. ಇದರಿಂದಾಗಿ ಎಲ್ಲಾ ಕಡೆ ತೆರಳಿ ನಮ್ಮ ಹಕ್ಕೊತ್ತಾಯಗಳನ್ನು ಮಂಡಿ ಸುತ್ತಿದ್ದೇವೆ. ನಾವು ಈಗ ಮನವಿ ಹಂತದಲ್ಲಿದ್ದು, ಹಿಂದಿನ ಸರ್ಕಾರಗಳು ನೀಡಿದ ಭರವಸೆಗಳು ಸಹ ಹಿಂದಿನ ಸರ್ಕಾರದ ಮೂಲಕ ಈಡೇರಿಕೆ ಆಗುವ ನಿರೀಕ್ಷೆ ಇದೆ ಎಂದರು.