ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಹೊನ್ನಾವರ ನಡುವಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಎಷ್ಟು ಮರಗಳನ್ನು ತೆರವು ಮಾಡಬೇಕು ಹಾಗೂ ಅದಕ್ಕೆ ಪರಿಹಾರವಾಗಿ ಎಷ್ಟು ಗಿಡ ನೆಡುತ್ತೀರಿ ಎಂಬ ಬಗ್ಗೆ ಸ್ಪಷ್ಪ ಮಾಹಿತಿ ನೀಡುವಂತೆ ಹೈಕೋರ್ಟ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್ಎಐ) ನಿರ್ದೇಶಿಸಿದೆ.
ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಮರಗಳನ್ನು ಕತ್ತರಿಸಲು ಮುಂದಾಗಿರುವ ಎನ್ಎಚ್ಎಐ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಹೆದ್ದಾರಿ ಪ್ರಾಧಿಕಾರದ ವಕೀಲರನ್ನು ಪ್ರಶ್ನಿಸಿದ ಪೀಠ, ರಾಜ್ಯ ಸರ್ಕಾರ ಅನುಮತಿ ನೀಡುವ ಸಂದರ್ಭದಲ್ಲೇ ಮರಗಳನ್ನು ಕತ್ತರಿಸುವುದಕ್ಕೆ ಪರಿಹಾರವಾಗಿ ಗಿಡಗಳನ್ನು ನೆಡಬೇಕೆಂದು ಷರತ್ತು ವಿಧಿಸಿದೆ. ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ 2020ರ ಏಪ್ರಿಲ್ 9ರಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಬರೆದ ಪತ್ರದಲ್ಲಿ 169 ಮರ ಕತ್ತರಿಸಿರುವ ಮಾಹಿತಿ ನೀಡಿದ್ದಾರೆ. ಈ 169 ಮರಗಳಿಗೆ ಪರಿಹಾರವಾಗಿ ಗಿಡಗಳನ್ನು ನೆಟ್ಟಿದ್ದೀರಾ? ಎಂದು ಪ್ರಶ್ನಿಸಿತು.
ಪ್ರಾಧಿಕಾರದ ಪರ ವಕೀಲರು ಸೂಕ್ತ ಉತ್ತರ ನೀಡದ ಹಿನ್ನೆಲೆ ಬೇಸರ ವ್ಯಕ್ತಪಡಿಸಿದ ಪೀಠ, ಕತ್ತರಿಸಿದ ಮರಗಳಿಗೆ ಪರಿಹಾರವಾಗಿ ಗಿಡಗಳನ್ನು ನೆಡಲೇಬೇಕು. ಈ ಷರತ್ತು ಪೂರೈಸಿದರೆ ಮಾತ್ರ ಕಡಿಯಲು ಗುರುತಿಸಿರುವ ಮರಗಳನ್ನು ತೆರವು ಮಾಡಲು ನ್ಯಾಯಾಲಯ ಅನುಮತಿಸುತ್ತದೆ. ಹೀಗಾಗಿ, ಎಷ್ಟು ಮರ ತೆರವು ಮಾಡಲು ಉದ್ದೇಶಿಸಿದ್ದೀರಿ ಮತ್ತು ಅದಕ್ಕೆ ಪ್ರತಿಯಾಗಿ ಎಷ್ಟು ಗಿಡ ನೆಡುತ್ತೀರಿ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಬೇಕು ಎಂದು ಸೂಚಿಸಿತು.
ಹಾಗೆಯೇ, ಈಗಾಗಲೇ ಕತ್ತರಿಸಿರುವ 169 ಮರಗಳಿಗೆ ಪ್ರತಿಯಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಷ್ಟು ಗಿಡಗಳನ್ನು ನೆಟ್ಟಿದೆ ಎಂಬ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ಹಾಸನದಲ್ಲಿ ಹೊಸ ಪ್ರಯತ್ನ : ಮನೆಯ ಕೈತೋಟದಲ್ಲಿ ಕಾಶ್ಮೀರಿ ಆ್ಯಪಲ್ ಬೆಳೆದ ಇಂಜಿನಿಯರ್