ಬೆಂಗಳೂರು: ಕಳೆದ ಆರು ದಿನಗಳಿಂದ ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ವಿಭಿನ್ನ ರೀತಿಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು. ಸರ್ಕಾರಕ್ಕೆ 6 ದಿನಗಳ ಕಾಲ ಗಡುವು ನೀಡಿದ್ದು ಏಪ್ರಿಲ್ 1 ರಿಂದ 6 ರ ವರೆಗೆ ವಿಭಿನ್ನ ರೀತಿಯಲ್ಲಿ ಸಾರಿಗೆ ನೌಕರರು ಪ್ರತಿಭಟಿಸಿದರು.
ಏಪ್ರಿಲ್ 1ರಿಂದ ಪ್ರತಿಭಟನೆ ಆರಂಭಿಸಿದ್ದು, ಮೊದಲ ದಿನ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದರು. ಎರಡನೇ ದಿನ ನಗರದ ಹೃದಯ ಭಾಗವಾದ ಮೆಜೆಸ್ಟಿಕ್ನಲ್ಲಿ ಟೀ, ಬೋಂಡಾ ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಹೀಗೆ ಸತತವಾಗಿ ಪ್ರತಿ ನಿತ್ಯ ಕರ ಪತ್ರ, ಭಿತ್ತಿ ಪತ್ರ ಹಂಚುವುದು, ಧರಣಿ ಕೂರುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಕೊನೆ ದಿನವಾದ ಇಂದು ಅಂದ್ರೆ ಏಪ್ರಿಲ್ 6ಕ್ಕೆ ಎಲ್ಲಾ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹಕ್ಕೆ ನಿರ್ಧರಿಸಿದ್ದರು.
ಆದರೆ ಕೋವಿಡ್ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ರದ್ದು ಮಾಡಲಾಗಿದೆ. ಆದರೆ ಇವತ್ತಿನ ದಿನ ಕಳೆಯೋದ್ರೊಳಗೆ ಇವರ ಬೇಡಿಕೆ ಈಡೇರಿಸದಿದ್ದರೆ ನಾಳೆಯಿಂದ ಸಂಚಾರ ಸ್ಥಗಿತಗೊಳಿಸುತ್ತೇವೆ ಎಂದು ಹೇಳಿದ್ದಾರೆ. ಇನ್ನು ನಾಳೆ ಸಾರಿಗೆ ನೌಕರರ ಮುಷ್ಕರ ಬಹುತೇಕ ಫಿಕ್ಸ್ ಆಗಿದ್ದು, 6 ನೇ ವೇತನ ಆಯೋಗ ಜಾರಿಗೆ ಸರ್ಕಾರ ಹಿಂದೇಟು ಹಾಕಿದೆ. ಮಾತು ತಪ್ಪಿದ ಸರ್ಕಾರದ ವಿರುದ್ಧ ಮುಷ್ಕರದ ಅಸ್ತ್ರ ಪ್ರಯೋಗಕ್ಕೆ ಸಾರಿಗೆ ನೌಕರರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸರ್ಕಾರ ಯಾರಾದರೂ ವಿಸರ್ಜನೆ ಮಾಡ್ತಾರಾ?: ಬೈರತಿ ಬಸವರಾಜ ಪ್ರಶ್ನೆ
ಡಿಸೆಂಬರ್ ತಿಂಗಳಲ್ಲಿ 4 ದಿನ ಮುಷ್ಕರ ಮಾಡಿದ್ದ ಸಾರಿಗೆ ನೌಕರರು, ತಮ್ಮನ್ನ ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆ ಇಟ್ಟು ಮುಷ್ಕರ ನಡೆಸಿದ್ದರು. ಆಗ ಸರ್ಕಾರಿ ನೌಕರರ ಬದಲಿಗೆ 6 ನೇ ವೇತನ ಆಯೋಗ ಜಾರಿ ಮಾಡುವುದಾಗಿ ಸರ್ಕಾರ ಒಪ್ಪಿಕೊಂಡಿತ್ತು. 6ನೇ ವೇತನ ಆಯೋಗ ಜಾರಿ ಬಗ್ಗೆ ಲಿಖಿತ ರೂಪದಲ್ಲಿ ಸರ್ಕಾರ ಭರವಸೆ ನೀಡಿತ್ತು. ಸದ್ಯ ಕೋವಿಡ್ ಕಾರಣದಿಂದ ರಾಜ್ಯದ ಹಣಕಾಸು ಪರಿಸ್ಥಿತಿ ಸರಿ ಇಲ್ಲ. ಈ ಕಾರಣದಿಂದ 6 ನೇ ವೇತನ ಆಯೋಗ ಜಾರಿಗೆ ತರಲು ಆಗುವುದಿಲ್ಲ. ಅಂತ ಸರ್ಕಾರ ಇದೀಗ ಹಿಂದೇಟು ಹಾಕಿದೆ.
ಇನ್ನು ಸರ್ಕಾರ ಸಾರಿಗೆ ನೌಕರರಿಗೆ 6 ನೇ ವೇತನ ಆಯೋಗದ ಬದಲಿಗೆ ವೇತನ ಹೆಚ್ಚಳದ ಆಮಿಷ ಒಡ್ಡಿದೆ. ಆದರೆ ಸಾರಿಗೆ ನೌಕರರು ಮಾತ್ರ 6ನೇ ವೇತನ ಆಯೋಗ ಜಾರಿಯಾಗಲೇ ಬೇಕು ಅಂತ ಬಿಗಿಪಟ್ಟು ಹಿಡಿದಿದ್ದಾರೆ. ನಮಗೆ ವೇತನ ಹೆಚ್ಚಳ ಬೇಡ, 6ನೇ ವೇತನ ಆಯೋಗ ಜಾರಿಗೆ ತನ್ನಿ ಅಂತ ಸಾರಿಗೆ ನೌಕರರು ಕೇಳಿದ್ದಾರೆ. ಹೀಗಾಗಿ ನಾಳೆಯಿಂದ ಸಾರಿಗೆ ಮುಷ್ಕರಕ್ಕೆ ನಿರ್ಧರಿಸಿರುವ ನೌಕರರು, ನಾಳೆ ಬಹುತೇಕ ಮುಷ್ಕರ ಫಿಕ್ಸ್ ಆಗಲಿದೆ.
ಸಾರಿಗೆ ನೌಕರರ ಮುಷ್ಕರ ಬೆಂಗಳೂರಿಗೆ ಬಿಸಿ ತಟ್ಟಲಿದ್ದು, ಪ್ರತಿನಿತ್ಯ ಸಂಚಾರಿಸುತ್ತಿದ್ದ ಆರು ಸಾವಿರ ಬಸ್ಸುಗಳ ಸಂಚಾರ ಸ್ತಬ್ಧವಾಗಲಿದೆ. ಇದರಿಂದ ಪ್ರತಿನಿತ್ಯ ಬೆಂಗಳೂರಲ್ಲಿ ಸಂಚಾರಿಸುತ್ತಿದ್ದ ಮೂವತ್ತು ಲಕ್ಷ ಪ್ರಯಾಣಿಕರಿಗೆ ಬಾರಿ ತೊಂದರೆಯಾಗಲಿದೆ. ಕೆಎಸ್ಆರ್ಟಿಸಿ, ಈಶಾನ್ಯ ವಾಯುವ್ಯ ಸಾರಿಗೆಯು ಸಂಪೂರ್ಣ ಅಸ್ತವ್ಯಸ್ತವಾಗಲಿದ್ದು, ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಒಟ್ಟು ಒಂದು ಕೋಟಿ ಮಂದಿ ನಿತ್ಯ ಪ್ರಯಾಣ ಮಾಡುತ್ತಿದ್ದರು. ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಈ ಮುಷ್ಕರದಿಂದಾಗಿ ಒಂದು ಕೋಟಿ ಮಂದಿಗೆ ಇದರ ಬಿಸಿ ತಟ್ಟಲಿದೆ.
ಸಾರಿಗೆ ನೌಕರರಿಗೆ ಸರ್ಕಾರ ಕೊಟ್ಟ ಭರವಸೆಗಳು:
- ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆ
- ಕೋವಿಡ್ 19 ನಿಂದ ಸಾವಿಗೀಡಾದ್ರೆ 30 ಲಕ್ಷ ಪರಿಹಾರ
- ಅಂತರ್ ನಿಗಮ ವರ್ಗಾವಣೆಗೆ ಸೂಕ್ತ ನೀತಿ ರಚನೆ
- ತರಬೇತಿ ನೌಕರರ ಅವಧಿಯನ್ನ 2 ವರ್ಷದಿಂದ 1 ವರ್ಷಕ್ಕೆ ಇಳಿಕೆ
- ನಿಗಮಗಳಲ್ಲಿ ಮಾನವ ಸಂಪನ್ಮೂಲ ವ್ಯವಸ್ಥೆ ಜಾರಿಗೆ ತರುವುದು
- ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ ನೀಡಲು ತೀರ್ಮಾನ
- ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ ಜಾರಿ
- ಎನ್ಐ ಎನ್ ಐಎನ್ಸಿ ಪದ್ದತಿ ಬದಲಾಗಿ ಪರ್ಯಾಯ ವ್ಯವಸ್ಥೆ ಜಾರಿ
- ವೇತನ ಪರಿಷ್ಕರಣೆ ಸಂಬಂಧಿಸಿದಂತೆ 6ನೇ ವೇತನ ಆಯೋಗ ಶಿಫಾರಸು ಪರಿಗಣನೆ (ಸರ್ಕಾರದ ಆರ್ಥಿಕ ಅಂಶ ಪರಿಗಣಿಸಿ ತೀರ್ಮಾನ)