ಬೆಂಗಳೂರು: ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್ ಬಾಟೆಲ್ ನಿಷೇಧದ ಹಿನ್ನಲೆಯಲ್ಲಿ ಲೋಹದ ನೀರಿನ ಬಾಟೆಲ್ ಅನ್ನು ಪ್ರಯಾಣಿಕರು ಬಳಕೆ ಮಾಡುವಂತೆ ಉತ್ತೇಜಿಸಲು ಕೆಎಸ್ಆರ್ಟಿಸಿ ನಡೆಸಿದ್ದ ನಿಮ್ಮ ನೀರಿನ ಬಾಟೆಲ್ ನೊಂದಿಗೆ ನಿಮ್ಮ ಸೆಲ್ಫಿ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಪರಿಸರ ಕಾಳಜಿ ಭಾಗವಾಗಿ ಹವಾನಿಯಂತ್ರಿತ ಬಸ್ಗಳಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ನೀರಿನ ಬಾಟಲ್ ಪೂರೈಕೆ ಸ್ಥಗಿತಗೊಳಿಸಿ ಲೋಹದ ಬಾಟಲ್ ತರುವಂತೆ ಕೆಎಸ್ಆರ್ಟಿಸಿ ನೀಡಿದ್ದ ಕರೆಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹವಾನಿಯಂತ್ರಿತ ಬಸ್ಗಳಲ್ಲಿ ಬಹುತೇಕ ಪ್ರಯಾಣಿಕರು ತಮ್ಮ ಮನೆಯಿಂದಲೇ ಲೋಹದ ಬಾಟೆಲ್ಗಳಲ್ಲಿ ನೀರನ್ನು ತರುತ್ತಿದ್ದಾರೆ. ಇದಕ್ಕಾಗಿ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಧನ್ಯವಾದ ಅರ್ಪಿಸಿದೆ.
ಇನ್ನು ಮೈ ಓನ್ ವಾಟರ್ ಬಾಟಲ್ ಸ್ಪರ್ಧೆ ಆಯೋಜಿಸಿದ್ದ ಕೆಎಸ್ಆರ್ಟಿಸಿ ಹವಾನಿಯಂತ್ರಿತ ಬಸ್ಗಳಲ್ಲಿ ಲೋಹದ ನೀರಿನ ಬಾಟೆಲ್ ಜೊತೆ ಸೆಲ್ಫಿ ತೆಗೆದು ಕಳಿಸಿ. ಅತ್ಯುತ್ತಮ ಸೆಲ್ಫಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಒಂದು ಬಾರಿಗೆ ಉಚಿತ ಪ್ರಯಾಣ ಮಾಡುವ ಅವಕಾಶ ಗೆಲ್ಲಿ ಎನ್ನುವ ಘೋಷಣೆ ಮಾಡಿತ್ತು. ಅದರಂತೆ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ತಡೆಯುವ ನಿಟ್ಟಿನಲ್ಲಿ ಮಕ್ಕಳು, ವಯಸ್ಕರು, ಹಿರಿಯ ನಾಗರಿಕ ಪ್ರಯಾಣಿಕರು ಪ್ರಯಾಣದ ವೇಳೆ ತಮ್ಮದೇ ನೀರಿನ ಬಾಟಲ್ನೊಂದಿಗೆ ಸಲ್ಫಿ ತೆಗೆದು ಕಳುಹಿಸಿದ್ದಾರೆ. ಅದರಲ್ಲಿ 9 ಪ್ರಯಾಣಿಕರಿಗೆ ಒಮ್ಮೆ ಉಚಿತ ಪ್ರಯಾಣ ಮಾಡುವ ಅವಕಾಶ ಕಲ್ಪಿಸಿದ್ದು ಅವರುಗಳ ಹೆಸರನ್ನು ಕೆಎಸ್ಆರ್ಟಿಸಿ ಪ್ರಕಟಿಸಿದೆ.
ಮಹಾಂತೇಶ್, ಬಾರಿಕ್ಸ್ ಎಸ್, ಸುಧಾಕರನ್ ಎಸ್, ವೈಷ್ಣವಿ ಜೋಷಿ, ಸಾಗರಿಕಾ ಎಸ್.ಘಾಟ್ಗೆ, ಮುರುಳಿ ಎಂ.ಕೆ, ಕಾರ್ತಿಕೇಯನ್ ಕೆ, ಪ್ರಿನ್ಸ್ ನಹಾರ್, ಜಿ ನಾಗರಾಜ್ ವಿಜೇತ ಪ್ರಯಾಣಿಕರಾಗಿದ್ದು, ವಿಜೇತರಿಗೆ ಅಭಿನಂದನೆ ತಿಳಿಸಿರುವ ಕೆಎಸ್ಆರ್ಟಿಸಿ ಸ್ಪರ್ಧಾ ವಿಜೇತರು ಕೆಎಸ್ಆರ್ಟಿಸಿಯ ಪ್ರತಿಷ್ಠಿತ ಬಸ್ನಲ್ಲಿ ತಮ್ಮ ಆಯ್ಕೆಯ ಯಾವುದಾದರೂ ಒಂದು ಸ್ಥಳಕ್ಕೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ತಿಳಿಸಿದೆ