ಬೆಂಗಳೂರು: ಹಸಿದವರಿಗೆ ಪಡಿತರ ನೀಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿಲ್ಲ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ತಮ್ಮ ಪರಿಶ್ರಮದಿಂದ ಗಳಿಸಿದ ಹಣದಿಂದ ಬಡವರಿಗೆ ನೆರವಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಾರ್ಮಿಕ ವಿಭಾಗ ಪ್ರಧಾನ ಕಾರ್ಯದರ್ಶಿ ಎಸ್. ಬಾಲರಾಜ್ ಗೌಡ್ರು ಮತ್ತು ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಜಂಟಿಯಾಗಿ ಗೋವಿಂದನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಡವರಿಗೆ 25 ಸಾವಿರ ದಿನಸಿ ಸಾಮಾಗ್ರಿಗಳ ಪಡಿತರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ನಾಗರಬಾವಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಿದರು.
ನಂತರ ಮಾತನಾಡಿದ ಡಿಕೆಶಿ, ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ಮುಖಂಡ ರಾಹುಲ್ ಗಾಂಧಿ ಸೂಚನೆ ನೀಡಿದ್ದು, ಅದರಂತೆ ಹೆಚ್ಚಿನ ಜನರಿಗೆ ನಾವು ನೆರವಾಗುತ್ತಿದ್ದೇವೆ. ಇದು ಸರ್ಕಾರದ ದುಡ್ಡಲ್ಲ, ಯಡಿಯೂರಪ್ಪ ಅವರ ದುಡ್ಡೂ ಅಲ್ಲ. ಇದು ಕಾರ್ಯಕರ್ತರ ಹಣ. ಯಡಿಯೂರಪ್ಪ ಅವರು ಇದನ್ನು ಗಮನಿಸಬೇಕು ಎಂದರು.
ಸಂಕಷ್ಟದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಬಡವರಿಗೆ ಸ್ಪಂದಿಸುತ್ತಿದೆ. ಜನಪರ ಕಾರ್ಯಕ್ರಮಗಳು ಪಕ್ಷಕ್ಕೆ ಸದಾ ಶ್ರೀ ರಕ್ಷಣೆ ಆಗಲಿವೆ. ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಜನರ ಸಮಸ್ಯೆ ಬಗೆಹರಿಸುವುದು ನಮ್ಮ ಆದ್ಯತೆ ಆಗಬೇಕು. ಪಕ್ಷಾತೀತವಾಗಿ ಎಲ್ಲರೂ ಲಸಿಕೆ ಪಡೆಯಲು ಮುಂದಾಗಬೇಕು. ಸೋಂಕಿನಿಂದ ಎಲ್ಲರೂ ರಕ್ಷಣೆ ಪಡೆಯಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಾರ್ಮಿಕ ವಿಭಾಗ ಪ್ರಧಾನ ಕಾರ್ಯದರ್ಶಿ ಎಸ್. ಬಾಲರಾಜ್ ಗೌಡ್ರು ಮಾತನಾಡಿ, ಸ್ವಂತ ಹಣದಿಂದ ಬಡವರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ನಾಗರಬಾವಿ ಮತ್ತು ಗಂಗೊಂಡನಹಳ್ಳಿ ವಾರ್ಡ್ಗಳಲ್ಲಿ ಕೋವಿಡ್-19 ಸಂಕಷ್ಟದಲ್ಲಿರುವ ಕೊರೊನಾ ಸೇನಾನಿಗಳು, ಕೂಲಿ ಕಾರ್ಮಿಕರು, ಪೌರಕಾರ್ಮಿಕರು, ನಿರಾಶ್ರಿತರಿಗೆ 25 ಸಾವಿರ ಕಿಟ್ಗಳ ವಿತರಣೆ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರುಗಳಾದ ರಾಮಲಿಂಗಾ ರೆಡ್ಡಿ, ಸಲೀಂ ಅಹಮದ್, ಗೋವೀಂದರಾಜನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಹೆಚ್. ಎಂ. ರೇವಣ್ಣ, ಕೆಪಿಸಿಸಿ ಕಾರ್ಮಿಕ ವಿಭಾಗ ಅಧ್ಯಕ್ಷರಾದ ಕೆ. ಪುಟ್ಟಸ್ವಾಮಿಗೌಡ, ಕಾರ್ಯದರ್ಶಿ ಯೋಗಾನಂದ್, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಆರಾಧ್ಯ, ಕಾಂಗ್ರೆಸ್ ಮುಖಂಡರಾದ ಎಚ್ ಹನುಮಂತರಾಯಪ್ಪ, ಸಮಾಜ ಸೇವಕ ನಿಖಿಲ್ ಗೌಡ ಭಾಗವಹಿಸಿದ್ದರು.
ಇದನ್ನು ಓದಿ: ಮುಗಿಯದ ಕೊರೊನಾ ಸಾವು- ನೋವು: ಆಹಾರ ಕಿಟ್ ವಿತರಣೆ ನೆಪದಲ್ಲಿ ನಿಯಮ ಮರೆತ ಕಾಂಗ್ರೆಸ್!!