ಬೆಂಗಳೂರು: ಸೋಶಿಯಲ್ ಮೀಡಿಯಾ ವಾರ್ ಬಗ್ಗೆ ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದು, ಈ ಬಾರಿ ಮೂರು ಕೋತಿಗಳ ಕಥೆ ಹೇಳುವ ಮೂಲಕ ನೆಟ್ಟಿಗರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ.
46ನೇ ವಸಂತಕ್ಕೆ ಕಾಲಿಟ್ಟ ಸುದೀಪ್, ನಗರದ ಪುಟ್ಟೇನಹಳ್ಳಿ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಭರ್ಜರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ಈ ವೇಳೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಏನೋ ಹೇಳಿದ್ರೆ, ಅದು ನಮಗೇ ಹೇಳಿದ್ದು ಅಂತ ನಾವು ಯಾಕೆ ಅಂದ್ಕೊಳ್ಬೇಕು. ಇಲ್ಲ ಸಲ್ಲದ ಕಲ್ಪನೆಗಳು ಬೇಡ, ನಮ್ಮ ಒಳ್ಳೆ ಕೆಲಸಗಳ ಬಗ್ಗೆ ಮಾತಾಡೋಣ. ಕೆಟ್ಟದ್ದನ್ನು ನೋಡ್ಬಾರ್ದು, ಕೇಳ್ಬಾರ್ದು, ಮಾತನಾಡಬಾರದು ಎಂಬಂತೆ ಬೇರೆಯವರಿಗೆ ಮಾದರಿಯಾಗುವಂತ ಉಪಯುಕ್ತ ಕೆಲಸಗಳನ್ನು ಮಾಡೋಣ ಎಂದು ಮೂರು ಕೋತಿಗಳ ಕಥೆ ಹೇಳಿದರು.
ಕೆಲವು ವಿಚಾರಗಳ ಬಗ್ಗೆ ಮಾತನಾಡೋದು ಯಾರಿಗೂ ಒಳ್ಳೆಯದಲ್ಲ. ಯಾರೋ ಎಲ್ಲೋ ಹೇಳಿದ್ರೆ ಅದು ನಮಗೆ ಹೇಳಿದ್ದಾರೆ ಅಂತ ತಿಳ್ಕೋಳ್ಳೋದು ಮೂರ್ಖತನ. ಅದರ ಬಗ್ಗೆ ಯೋಚನೆಯೂ ಮಾಡಬಾರದು. ಯಾರ್ ಏನ್ ಮಾಡ್ತಾರೋ ಮಾಡಿಕೊಳ್ಳಲಿ ಬಿಡಿ, ನಾನು ಕೆಲಸ ಮಾಡ್ತಿನಿ. ನನ್ನ ಕೆಲಸದಲ್ಲೆ ನನ್ನ ಬೆಳವಣಿಗೆ ಇರೋದು. ಸದ್ಯ ಪೈಲ್ವಾನ್ ಸಿನಿಮಾ ರಿಲೀಸ್ಗೆ ರೆಡಿಯಾಗ್ತಿದೆ. ಸದ್ಯಕ್ಕೆ ಅದರ ಬಗ್ಗೆ ಮಾತನಾಡೋಣ ಎಂದು ಹೇಳುವ ಮೂಲಕ ಇತ್ತೀಚಿನ ಟ್ವಿಟರ್ ವಾರ್ ಗೆ ಇತಿಶ್ರೀ ಹಾಡಿದ್ರು.