ಬೆಂಗಳೂರು : ಬೆಂಗಳೂರಿನ 28 ವಿಧಾನಸಭೆ ಕ್ಷೇತ್ರಗಳ ಪೈಕಿ ಯಶವಂತಪುರದ ವ್ಯಾಪ್ತಿ ದೊಡ್ಡದು. ಇಲ್ಲಿ ಪಕ್ಷಗಳಿಂತ ವ್ಯಕ್ತಿ ವರ್ಚಸ್ಸೇ ಮುಖ್ಯವಾಗುತ್ತಿದೆ. ಕಾಂಗ್ರೆಸ್ ಹಿಡಿತದಲ್ಲಿದ್ದ ಈ ಕ್ಷೇತ್ರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ತೆಕ್ಕೆಗೆ ಬಿದ್ದಿದೆ.
ಕಾಂಗ್ರೆಸ್ ಶಾಸಕರಾಗಿದ್ದ ಎಸ್.ಟಿ.ಸೋಮಶೇಖರ್ ಅವರು 2019 ರಲ್ಲಿ ಬಿಜೆಪಿ ಸೇರ್ಪಡೆಯಾದರು. ನಂತರ ನಡೆದ ಉಪ ಚುನಾವಣೆಯಲ್ಲಿ ಗೆದ್ದು ಸಚಿವರೂ ಆದರು. ಇದೀಗ ಅವರು ಲಾಭ, ನಷ್ಟದ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದು, ಮುಂಬರುವ ಚುನಾವಣೆಯಲ್ಲೂ ಬಿಜೆಪಿಯಿಂದ ಅವರೇ ಅಭ್ಯರ್ಥಿಯಾಗಲಿದ್ದಾರೆ. ಜೆಡಿಎಸ್ನಲ್ಲಿ ಸದ್ಯಕ್ಕೆ ಅಭ್ಯರ್ಥಿಗಾಗಿ ಹುಡುಕಾಟದ ಅವಶ್ಯಕತೆ ಇಲ್ಲ. ಈಗಾಗಲೇ ಟಿ.ಎನ್.ಜವರಾಯಿಗೌಡ ಅವರನ್ನು ಮತ್ತೆ ಕಣಕ್ಕಿಳಿಸಲು 'ದಳಪತಿ'ಗಳು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯಾರು ಅನ್ನೋದು ಇನ್ನಷ್ಟೇ ಕ್ಷೇತ್ರದಲ್ಲಿ ಘೋಷಣೆಯಾಗಬೇಕಿದೆ.
ಸೋಮಶೇಖರ್ ಅವರನ್ನು ಮತ್ತೆ ತಮ್ಮ ಕಡೆ ಸೆಳೆಯುವ ಮೂಲಕ ಯಶವಂತಪುರ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್ ಕಸರತ್ತು ನಡೆಸಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಇದು ಸಾಧ್ಯವಾದರೆ ಬಿಜೆಪಿಗೆ ತಲೆಬಿಸಿಯಾಗಲಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದು ಅಷ್ಟು ಸುಲಭದ ಮಾತಲ್ಲ ಎನಿಸುತ್ತಿದೆ.
ಬಿಜೆಪಿಗೆ ಇಲ್ಲಿ ಮೊದಲ ಗೆಲುವು ತಂದುಕೊಟ್ಟಿದ್ದ ಶೋಭಾ ಕರಂದ್ಲಾಜೆ ಈಗ ಲೋಕಸಭೆಗೆ ಆಯ್ಕೆಯಾಗಿ ಕೇಂದ್ರ ಸಚಿವೆ ಆಗಿದ್ದಾರೆ. 2018 ರ ಚುನಾವಣೆಯಲ್ಲಿ ಸುಮಾರು 60 ಸಾವಿರ ಮತ ಗಳಿಸಿದ್ದ ಜಗ್ಗೇಶ್ ಅವರೂ ರಾಜ್ಯಸಭೆ ಸದಸ್ಯರು. ಈ ದೃಷ್ಠಿಯಿಂದಲೂ ಸೋಮಶೇಖರ್ ಅವರ ಮುಂದಿನ ದಾರಿ ಸುಗಮವಾಗಿದೆ. ಆದರೆ, ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಯೇ ಸವಾಲಾಗಿದ್ದು, ಹಿಂದಿನ ಉಪ ಚುನಾವಣೆಯಲ್ಲಿ ಎದುರಿಸಿದ ಸಮಸ್ಯೆಯನ್ನೇ ಈಗಲೂ ಕಾಂಗ್ರೆಸ್ ಎದುರಿಸುತ್ತಿದೆ.
ಸದ್ಯಕ್ಕೆ ಆಕಾಂಕ್ಷಿಗಳ ಪಟ್ಟಿಯಲ್ಲಿ ನಟಿ ಭಾವನಾ ಅವರ ಹೆಸರು ಇಲ್ಲಿ ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಎರಡು ಕಾರಣಗಳಿವೆ. ಒಂದು ಭಾವನಾ ಕ್ಷೇತ್ರದ ನಿವಾಸಿ. ಮತ್ತೊಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೆನ್ನಿಗಿದ್ದಾರೆ ಎಂಬ ಮಾತುಗಳಿವೆ. ಇವರ ಜೊತೆಗೆ ಬೆಂಗಳೂರು ಉತ್ತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಕುಮಾರ್ ಅವರ ಪುತ್ರ ಕೃಷ್ಣಂರಾಜು, ಮುಖಂಡ ಬಾಲರಾಜುಗೌಡ ಕೂಡ ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇವರು ಸೋಮಶೇಖರ್ ಅವರಿಗೆ ಪ್ರಬಲ ಪೈಪೋಟಿ ನೀಡಬಹುದೇ ಎಂಬುದು ಸ್ವತಃ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ.
ಇದರ ಮಧ್ಯೆ ಮೂರು ಬಾರಿ ಪೈಪೋಟಿ ನೀಡಿ ಸೋಲು ಕಂಡಿರುವ ಜೆಡಿಎಸ್ ಅಭ್ಯರ್ಥಿ ಈ ಸಲವಾದರೂ ಗೆಲ್ಲಲೇ ಬೇಕೆಂಬ ತವಕದಲ್ಲಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಮೂರು ಬಾರಿ ಸೋತಿರುವ ಬಗ್ಗೆ ಸ್ಥಳೀಯವಾಗಿ ಅನುಕಂಪ ಇದೆ. ಇದರಿಂದ ಮತದಾರರು ಈ ಸಲ ಜೆಡಿಎಸ್ ಪರ ಒಲವು ತೋರುವ ಲೆಕ್ಕಾಚಾರವಿದೆ.
ಯಶವಂತಪುರ ಕ್ಷೇತ್ರದ ಇತಿಹಾಸ: ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದೊಳಗಿದ್ದ ಯಶವಂತಪುರ 2008ರಲ್ಲಿ ಮರುವಿಂಗಡಣೆಯಾಗಿ ನಂತರ ಯಶವಂತಪುರ ವಿಧಾನಸಭಾ ಕ್ಷೇತ್ರವಾಯಿತು. ಹೀಗೆ ಕ್ಷೇತ್ರ ರಚನೆಯಾದ ಬಳಿಕ ಇಲ್ಲಿ ಮೊದಲು ಅರಳಿದ್ದು ಕಮಲ. 2008ರ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಬಿಜೆಪಿಯಿಂದ ಗೆಲುವು ಕಂಡಿದ್ದರು. ನಂತರ ನಡೆದ ಎರಡು ಚುನಾವಣೆಗಳಲ್ಲಿ ಈ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಜಾರಿತು. ಎರಡೂ ಬಾರಿ ಎಸ್.ಟಿ.ಸೋಮಶೇಖರ್ ಗೆದ್ದಿದ್ದರು.
ಕ್ಷೇತ್ರ ವ್ಯಾಪ್ತಿ: ತುಮಕೂರು ರಸ್ತೆಯ ಚಿಕ್ಕಬಿದರಕಲ್ಲಿನಿಂದ ಆರಂಭವಾಗಿ ಮೈಸೂರು ರಸ್ತೆ ದಾಟಿ ಕನಕಪುರ ರಸ್ತೆ ಕಗ್ಗಲಿಪುರವರೆಗೆ, ಇತ್ತ ಮೈಸೂರು ರಸ್ತೆಯಲ್ಲಿ ಬಿಡದಿವರೆಗೆ, ಮಾಗಡಿ ರಸ್ತೆಯಲ್ಲಿ ತಿಪ್ಪಗೊಂಡನಹಳ್ಳಿ ಹತ್ತಿರಕ್ಕೆ ಈ ಕ್ಷೇತ್ರ ವ್ಯಾಪಿಸಿದೆ. ಯಶವಂತಪುರ ಬಿಬಿಎಂಪಿ ವಾರ್ಡ್ಗಳು, ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಿಕೊಂಡಿರುವ ದೊಡ್ಡ ಕ್ಷೇತ್ರ. ಈ ಅವಧಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸ್ಥಳೀಯವಾಗಿರುವ ಅಪಸ್ವರಗಳನ್ನು ಶಮನಗೊಳಿಸುವ ಕೆಲಸ ಈಗಿನಿಂದಲೇ ನಡೆದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸ್ಥಳೀಯ ಕಾರ್ಯಕರ್ತರ ಪಕ್ಷಾಂತರ ಕಾರ್ಯಕ್ರಮಗಳು ಮಾತ್ರ ನಿರಂತರವಾಗಿ ಮುಂದುವರಿದಿವೆ.
2008 ರಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋತಿದ್ದ ಸೋಮಶೇಖರ್ 2013 ರಲ್ಲಿ ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ವಿರುದ್ಧ 29,100 ಮತಗಳ ಅಂತರದಿಂದ ಗೆದ್ದರು. 2018ರ ವಿಧಾನಸಭಾ ಚುನಾವಣೆಯಲ್ಲೂ ಜವರಾಯಿಗೌಡ ವಿರುದ್ಧ 10,711ಮತಗಳ ಅಂತರದಿಂದ ಸೋಮಶೇಖರ್ ಗೆಲುವು ಸಾಧಿಸಿದ್ದರು. ಇದೀಗ ಮತ್ತೊಮ್ಮೆ ಬಿಜೆಪಿಯಿಂದ ಅಭ್ಯರ್ಥಿಯಾಗಿ ಜೆಡಿಎಸ್ನ ಜವರಾಯಿಗೌಡರಿಗೆ ಸವಾಲು ಒಡ್ಡಲು ನಿಂತಿದ್ದಾರೆ ಎಸ್ಟಿ ಸೋಮಶೇಖರ್.
ಒಕ್ಕಲಿಗರೇ ನಿರ್ಣಾಯಕರು: ಇಲ್ಲಿ ಒಕ್ಕಲಿಗರು - 1,03,230, ಲಿಂಗಾಯತರು- 52,800, ಪರಿಶಿಷ್ಟ ಜಾತಿ - 54,480, ಮುಸ್ಲಿಮರು - 24,048, ಕುರುಬರು - 24,655..
ಕ್ಷೇತ್ರದ ಮತದಾರರೆಷ್ಟು? : ಯಶವಂತಪುರದ ಒಟ್ಟು ಮತದಾರರ ಸಂಖ್ಯೆ 4,80,953 ಇದ್ದು, ಇದರಲ್ಲಿ ಪುರುಷರು 2,48,842, ಮಹಿಳಾ ಮತದಾರರು 2,32,066 ಮಂದಿ ಇದ್ದಾರೆ. ಇತರೆ 45 ಮತದಾರರು ಇದ್ದಾರೆ.
ಇದನ್ನೂ ಓದಿ: ವಿಧಾನಸಭಾ ಚುನಾವಣೆ 2023: ತ್ರಿವೇಣಿ ಸಂಗಮದಲ್ಲಿ ಕೈ-ತೆನೆ ನಡುವೆ ನೇರ ಪೈಪೋಟಿ