ಬೆಂಗಳೂರು: ಸರ್ಕಾರಗಳು ನ್ಯಾಯಾಂಗಕ್ಕೆ ಅಂಜುತ್ತವೆ. ಆದ್ದರಿಂದ ಕನ್ನಡ ಶಾಲೆ ಉಳಿಸಿ ಬೆಳೆಸಲು ಅರ್ಜಿ ಸಲ್ಲಿಸಿ. ಪರವಾಗಿ ನಿರ್ಣಯ ಬರುವಂತೆ ವಕೀಲರ ಜೊತೆ ಚರ್ಚಿಸಬೇಕಿದೆ. ಹಕ್ಕೆಂದು ಇದರ ಬಗ್ಗೆ ಕೇಳಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಕನ್ನಡ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಮೂಲಕ ಸಮರ್ಥ ವಾದ ಮಂಡಿಸಬೇಕಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಹೇಳಿದರು.
ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾತಾನಾಡಿದ ಅವರು, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸಮಾನ ಅವಕಾಶ ಸಿಗುವಂತೆ ನೋಡಿಕೊಳ್ಳಲು ನಾವು ಸರ್ಕಾರಕ್ಕೆ ವಿನಂತಿಸಬೇಕು. ಪೋಷಕರಲ್ಲಿ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೆ ಕಳಿಸುವಂತೆ ಮನವಿ ಮಾಡಬೇಕು. ನಾನು ಕೂಡ ಕನ್ನಡ ಮಾಧ್ಯಮದಲ್ಲಿ ಓದಿಯೇ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶನಾಗಿ ಕಾರ್ಯನಿರ್ವಹಿಸಿದೆ. ಅದೇ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಇಷ್ಟು ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು.
ಸಾಹಿತಿ ಹಂಪಾ ನಾಗರಾಜಯ್ಯ ಮಾತನಾಡಿ ಯಾವ ಸರ್ಕಾರಕ್ಕೂ ಭಾಷೆ, ಕನ್ನಡ, ಶಿಕ್ಷಣ ಆದ್ಯತೆಯಾಗಿ ಇಲ್ಲ. ಎಲ್ಲ ಖಾತೆಗಳನ್ನು ಹಂಚಿದ ಮೇಲೆ ಕೊನೆಗೆ ಶಿಕ್ಷಣ ಇಲಾಖೆಗೆ ಸಚಿವರನ್ನು ಆಯ್ಕೆ ಮಾಡಲಾಗುತ್ತದೆ. ಇನ್ನೊಂದೆಡೆ ಸರ್ಕಾರ ಮರಳಿ ಶಾಲೆಗೆ ಯೋಜನೆಯಲ್ಲಿ ಸೈಕಲ್, ಸಮವಸ್ತ್ರವನ್ನು ಕೊಟ್ಟರೂ ಪೋಷಕರೂ ಸಹ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಸಹ ಕನ್ನಡ ಶಾಲೆಗಳನ್ನು ಉಳಿಸಲು ಸಾಕಷ್ಟು ಪ್ರಯತ್ನ ಮಾಡಿದೆ. ಕನ್ನಡ ಮಾಧ್ಯಮದಲ್ಲಿ ಓದಬೇಕು ಎನ್ನುವುದು ಭಾಷಣಕ್ಕೆ ಮಾತ್ರ ಸೀಮಿತವಾಗಿರುವುದು ಸತ್ಯ. ಸಮಾನ ಅವಕಾಶ ಕಲ್ಪಿಸಿ, ವಸ್ತು ಸ್ಥಿತಿಗೆ ಒಗ್ಗಿಕೊಳ್ಳುವಂತೆ ಮಾಡಿದಾಗ ಮಾತ್ರ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ವಾಗ್ಮಿ ಗುರುರಾಜ್ ಕರ್ಜಗಿ ಮಾತನಾಡಿ, ಸದ್ಯಕ್ಕೆ ಜಿಲ್ಲೆಗೊಂದು ಕನ್ನಡ ಮಾಧ್ಯಮದ ಉತ್ತಮ ಶಾಲೆಯಾದರೆ ಸಾಕು. ಅದನ್ನೇ ಮಾದರಿ ಶಾಲೆಯಾಗಿ ಹೊರಹೊಮ್ಮುವಂತೆ ಮಾಡಬೇಕು. ಅದರಲ್ಲಿ ಕಲಿತ ಮಕ್ಕಳಿಗೆ ಸಾಕಷ್ಟು ಅವಕಾಶಗಳು ಸಿಗುವಂತೆ ಮಾಡಬೇಕು. ಆಗ ಮಾತ್ರ ಮಕ್ಕಳನ್ನು ಪೋಷಕರು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಾರೆ ಎಂದು ನುಡಿದರು.
ಬೇಲಿಮಠದ ಶಿವರುದ್ರ ಮಹಾಸ್ವಾಮೀಜಿ ಮಾತನಾಡಿ, ಮೆಕಾಲೆ ಶಿಕ್ಷಣ ಪದ್ಧತಿಯನ್ನು ಬ್ರಿಟಿಷರ ಆಳ್ವಿಕೆಯಲ್ಲಿ ಸ್ವಾಭಿಮಾನಿ ಭಾರತೀಯರು, ಕನ್ನಡಿಗರು ವಿರೋಧಿಸಿದ್ದರು. ಆದರೆ ಸ್ವಾತಂತ್ರ್ಯ ನಂತರ ಅದನ್ನು ತುಷ್ಟೀಕರಿಸಲಾಯಿತು. ನಮ್ಮಲ್ಲಿ ಕನ್ನಡದ ಬಗೆಗಿನ ತುಡಿತ ಕಡಿಮೆಯಾಗಿದೆ. ವಿದೇಶಗಳಲ್ಲಿ ಕನ್ನಡ ಜನಪ್ರಿಯಗೊಳ್ಳುತ್ತಿದ್ದರೆ ನಮ್ಮ ರಾಜ್ಯದಲ್ಲಿ ಅಸಡ್ಡೆ ತೋರಲಾಗುತ್ತಿದೆ. ಆದ್ದರಿಂದ ಕನ್ನಡ ಶಾಲೆಗಳ ಬಗ್ಗೆ ಜನಾಂದೋಲನ ಒಂದೇ ಪರಿಹಾರ. ಇದರ ಸಂಕಲ್ಪ ಇಲ್ಲಿಯೇ ಅರಭವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.