ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಜೆಡಿಎಸ್ ತೊರೆದು ಬಂದ ಮುಖಂಡರನ್ನು ಬಿಜೆಪಿಗೆ ಬರಮಾಡಿಕೊಂಡರು.
ದಾಸರಹಳ್ಳಿ ವಿಧಾಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಎಸ್ ಮುನಿರಾಜು ಮಾರ್ಗದರ್ಶನದಲ್ಲಿ ಹಾಗೂ ಮಂಡಲಾಧ್ಯಕ್ಷ ಎನ್ ಲೋಕೇಶ ನೇತೃತ್ವದಲ್ಲಿ ನಿರ್ಮಿಸಲಾದ ಮಂಡಲ ಕಾರ್ಯಾಲಯವನ್ನು ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಉದ್ಘಾಟಿಸಿದರು. ಇದರಲ್ಲಿ ಅಟಲ್ ಜನಸೇವಾ ಕೇಂದ್ರ ಹಾಗೂ ಗ್ರಂಥಾಲಯ ಕೂಡಾ ಇದ್ದು, ಅವುಗಳನ್ನು ವೀಕ್ಷಿಸಿ ರಾಜ್ಯದಲ್ಲಿಯೇ ಇವು ಮಾದರಿಯಾಗಿವೆ ಎಂದು ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಲ್ರಾಮ್ ಮತ್ತವರ ಅನೇಕ ಸಂಗಡಿಗರು, ಗುರುಪ್ರಸಾದ ಮತ್ತವರ ನೂರಾರು ಮಿತ್ರರು ಬಿಜೆಪಿಗೆ ಸೇರ್ಪಡೆಯಾದರು. ಕ್ಷೇತ್ರದಲ್ಲಿ ಸಂಘಟನೆ ಕಾರ್ಯ ಉತ್ತಮವಾಗಿ ಆಗುತ್ತಿದೆ. ಕಾರ್ಯಕರ್ತರ ಅದಮ್ಯ ಉತ್ಸಾಹವನ್ನು ನೋಡಿದರೆ ಪಕ್ಷವು ಮುಂಬರುವ ಎಲ್ಲಾ ಚುನಾವಣೆಗಳನ್ನು ಗೆಲ್ಲುವುದು ನಿಶ್ಚಿತ ಎಂದು ಹೇಳಬಹುದು ಎಂದು ಸದಾನಂದ ಗೌಡ ಅಭಿಪ್ರಾಯಪಟ್ಟರು.
ಮಹಿಳಾ ಮೋರ್ಚಾ ಸಭೆ: ಯಶವಂತಪುರ ಮಂಡಲದ ಮಹಿಳಾ ಮೋರ್ಚಾ ಪದಾಧಿಕಾರಿಗಳ ಜೊತೆ ಕೇಂದ್ರ ಸಚಿವ ಸದಾನಂದ ಗೌಡ ಸಭೆ ನಡೆಸಿದರು. ಪಕ್ಷ ಸಂಘಟನೆ ಬಗ್ಗೆ ಚರ್ಚಿಸಿದರು. ನಿರಂತರ ಜನಸಂಪರ್ಕ ಹೊಂದಬೇಕು. ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.