ದಾವೋಸ್/ಬೆಂಗಳೂರು: ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕವನ್ನು ವೃದ್ಧಿ ಮತ್ತು ಅಭಿವೃದ್ಧಿಯ ಶಕ್ತಿ ಕೇಂದ್ರವಾಗಿ ರೂಪಿಸಲು ಬದ್ಧರಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.
ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಇನ್ವೆಸ್ಟ್ ಕರ್ನಾಟಕ ಕರ್ಟನ್ ರೈಸರ್ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ನವೆಂಬರ್ ನಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಭಾಗವಹಿಸುವಂತೆ ಉದ್ಯಮಿಗಳು ಹಾಗೂ ಹೂಡಿಕೆದಾರರಲ್ಲಿ ಇದೇ ವೇಳೆ, ಮನವಿ ಮಾಡಿದರು.
ಕರ್ನಾಟಕ ರಾಜ್ಯವು ಇನ್ಫೋಸಿಸ್, ಬಯೋಕಾನ್, ವಿಪ್ರೊ ಮತ್ತು ಡೈನಮ್ಯಾಟಿಕ್ಸ್ ನಂತಹ ಭಾರತೀಯ ಮೂಲದ ಬಹುರಾಷ್ಟ್ರೀಯ ಕಂಪನಿಗಳ ನೆಲೆಯಾಗಿದೆ. ರಾಜ್ಯವು ಉತ್ತಮ ಬೆಳವಣಿಗೆ ದರವನ್ನು ಹಿಂದಿನಿಂದಲೂ ದಾಖಲಿಸುತ್ತ ಬಂದಿದ್ದು, ಇದು ರಾಷ್ಟ್ರೀಯ ಬೆಳವಣಿಗೆ ದರಕ್ಕಿಂದ ಹೆಚ್ಚಾಗಿದೆ. ಜೊತೆಗೆ ರಾಜ್ಯದ ನಿರುದ್ಯೋಗ ಪ್ರಮಾಣವೂ ಅತಿ ಕಡಿಮೆಯಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ನಿಕಟ ಸಂಬಂಧ ಹೊಂದಿದ್ದು, ವಹಿವಾಟು ನಡೆಸಲು ಇರುವ ತೊಡಕುಗಳನ್ನು ನಿವಾರಿಸುವತ್ತ ಹೂಡಿಕೆಗೆ ಉತ್ತಮ ವಾತಾವರಣ ಸೃಷ್ಟಿಸಲು ನೆರವಾಗುತ್ತಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಕೈಗಾರಿಕೆಯ ಅಭಿವೃದ್ಧಿಯ ಮೂಲಕ 21ನೇ ಶತಮಾನದಲ್ಲಿ ನವ ಭಾರತ ನಿರ್ಮಾಣ ಮಾಡಲು ನಮ್ಮನ್ನು ಸದಾ ಹುರಿದುಂಬಿಸುತ್ತಿದ್ದಾರೆ. ಕೈಗಾರಿಕೆಗಳ ಆಶಾದಾಯಕ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಉತ್ಪಾದಕತೆ, ಪ್ರಾದೇಶಿಕ ಅಭಿವೃದ್ಧಿ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿನ ಹೂಡಿಕೆಗೆ ಉತ್ತೇಜನ ನೀಡುವ ಹೊಸ ಕೈಗಾರಿಕಾ ನೀತಿಯನ್ನು ರೂಪಿಸುತ್ತಿದ್ದೇವೆ ಎಂದು ವಿವರಿಸಿದರು.
ನಂತರ ಉದ್ಯಮ ವಲಯದ ದಿಗ್ಗಜರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಬೆಂಗಳೂರಿನಲ್ಲಿ ನಡೆಯುವ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಫೆಬ್ರವರಿಯಲ್ಲಿ ಹುಬ್ಬಳ್ಳಿಯಲ್ಲಿ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸುಸ್ಥಿರ ಉತ್ಪಾದನಾ ವಲಯ ಸೃಷ್ಟಿಸುವ ಮಹತ್ವಾಕಾಂಕ್ಷೆಯೊಂದಿಗೆ ಎರಡು ಹಾಗೂ ಮೂರನೇ ಹಂತದ ನಗರಗಳಿಗೆ ಸಂಪರ್ಕವನ್ನು ಸುಧಾರಿಸಲಾಗಿದೆ; ಭೂ ಬ್ಯಾಂಕ್ ಸೃಷ್ಟಿಸಲಾಗಿದೆ. ಆ ಮೂಲಕ ಕರ್ನಾಟಕದ ಬೆಳವಣಿಯ ವೇಗ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಅವರು ನುಡಿದರು.
ಕೈಗಾರಿಕೆಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯವು ಉತ್ಪನ್ನ ಆಧಾರಿತ ಕೈಗಾರಿಕಾ ಕ್ಲಸ್ಟರ್ಗಳ ಅಭಿವೃದ್ಧಿಗೆ ಕ್ರಮ ವಹಿಸುತ್ತಿದೆ. ಆ ಮೂಲಕ ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯಲ್ ಮಾತನಾಡಿ, ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ, ಆ ಮೂಲಕ ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯಾಗಿ ರೂಪಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸನ್ನು ನನಸಾಗಿಸುವಂತೆ ಉದ್ಯಮಿಗಳಿಗೆ ಮನವಿ ಮಾಡಿದರು. “ನೀವು ನಿಮ್ಮ ಉದ್ಯಮವನ್ನು ಭಾರತದ ಎಲ್ಲ ಭಾಗಗಳಲ್ಲಿ ವಿಸ್ತರಿಸಿ, ವಿಶೇಷವಾಗಿ ಕೈಗಾರಿಕೆಗಳಿಗೆ ಪೂರಕ ವಾತಾವರಣ ಇರುವ ಕರ್ನಾಟಕದಲ್ಲಿ” ಹೂಡಿಕೆ ಮಾಡಿ ಎಂದು ಮನವಿ ಮಾಡಿದರು.
ಸಿಐಐ ಅಧ್ಯಕ್ಷ ಹಾಗೂ ಟೊಯೋಟಾ ಕಿರ್ಲೋಸ್ಕರ್ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಕಿರ್ಲೋಸ್ಕರ್ , ಮಹೀಂದ್ರ ಗ್ರೂಪ್ ನ ಆನಂದ್ ಮಹೀಂದ್ರ, ಭಾರತ್ ಫೋರ್ಜ್ ನ ಬಾಬಾ ಕಲ್ಯಾಣಿ ಮತ್ತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಸಹ ಉಪಸ್ಥಿತರಿದ್ದರು.
ಸಭೆಗೆ ಮುನ್ನ ಕರ್ನಾಟಕದ ಕೈಗಾರಿಕೆಗಳ ಒಟ್ಟಾರೆ ಸ್ಥಿತಿಗತಿ ಮತ್ತು ಕರ್ನಾಟಕದ ಆರ್ಥಿಕತೆ ಹಾಗೂ ಹೆಚ್ಚಿನ ಹೂಡಿಕೆಯ ಹೊಣೆಗಾರಿಕೆಯನ್ನು ನಿಭಾಯಿಸಲು ಸರ್ಕಾರದ ಪೂರ್ವಸಿದ್ಧತೆಯ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.
ಕರ್ನಾಟಕ ರಾಜ್ಯ ಮಾತ್ರ ಹೂಡಿಕೆದಾರರೊಂದಿಗೆ ಪ್ರತ್ಯೇಕ ಚರ್ಚೆ ನಡೆಸುವ ಬದಲು ಹೂಡಿಕೆದಾರರ ಸಮಾವೇಶದ ಕರ್ಟನ್ ರೈಸರ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕರ್ಟನ್ ರೈಸರ್ ಕಾರ್ಯಕ್ರಮದಿಂದಾಗಿ ಹೂಡಿಕೆದಾರರು, ರಾಜ್ಯದಲ್ಲಿ ಹೂಡಿಕೆ ಮಾಡುವ ಕುರಿತು ಸಿದ್ಧತೆ ನಡೆಸಿಕೊಂಡು, ಸಮಾವೇಶದಲ್ಲಿ ಪಾಲ್ಗೊಳ್ಳಲು ಅನುಕೂಲವಾಗಲಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಅಭಿಪ್ರಾಯಪಟ್ಟರು.