ಬೆಂಗಳೂರು: ಕುವೆಂಪು ತವರಿನಲ್ಲಿಯೇ ಕನ್ನಡಕ್ಕೆ ಅವಮಾನವಾಗಿದೆ ಎಂದು ರಾಜ್ಯಸಭೆ ಸದಸ್ಯ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಜ.16 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಹೊರವಲಯದಲ್ಲಿರುವ ಮಿಲಿಟರಿ ಕ್ಯಾಂಪ್ನಲ್ಲಿ ಕ್ಷಿಪ್ರ ಕಾರ್ಯಪಡೆ ಘಟಕಕ್ಕೆ ಅಡಿಪಾಯ ಹಾಕಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದ್ದಾರೆ. ಆದರೆ, ಇಲ್ಲಿ ಹಿಂದಿ ಫ್ಲೆಕ್ಸ್ ಗಳನ್ನು ಬಳಸುವ ಮೂಲಕ ಕನ್ನಡಕ್ಕೆ ಅವಮಾನ ಮಾಡಲಾಗಿದೆ ಎಂದಿದ್ದಾರೆ.
ಈ ಹಿಂದೆ ಗೃಹ ಸಚಿವರು ತಮಿಳುನಾಡಿಗೆ ಭೇಟಿ ಕೊಟ್ಟಿದ್ದಾಗ ತಮಿಳು ಭಾಷೆಯ ಫಲಕಗಳು, ಫ್ಲೆಕ್ಸ್ ಬೋರ್ಡ್ಗಳು, ಹಾಗೆಯೇ ಮಧ್ಯಪ್ರದೇಶ ಭೇಟಿಯ ಸಮಯದಲ್ಲಿ ಹಿಂದಿ ಭಾಷೆಯ ಫಲಕಗಳು ರಾರಾಜಿಸಿ ಅವರ ಮಾತೃಭಾಷೆಯ ಮಹತ್ವವನ್ನು ಮೆರೆದರು. ಆದರೆ, ಕನ್ನಡದ ಮುಕುಟಮಣಿಗೆ ಮೊದಲ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಕುವೆಂಪುರವರ ತವರು ಜಿಲ್ಲೆಯಾದ ಶಿವಮೊಗ್ಗಕ್ಕೆ ಭೇಟಿ ಕೊಟ್ಟಾಗ ಭಾಷೆ ಸೂಕ್ಷ್ಮ ವಿಚಾರವಾಗಿದ್ದರೂ ಈಗಾಗಲೇ ರಾಜ್ಯ ಪಾಲಿಸುತ್ತಿರುವ ತ್ರಿಭಾಷಾ ಸೂತ್ರವನ್ನೇ ಮರೆತು ಕೇಂದ್ರಗಳ ವಲಯಗಳಲ್ಲಿ ರಾಜ್ಯ 3ನೇ ಸಾಲಿನಲ್ಲಿ ಸೇರುತ್ತವೆ ಎಂಬುದನ್ನು ಮರೆತು, ಒಂದು ರಾಜಕೀಯ ಪಕ್ಷದ ಖಾಸಗಿ ಕಾರ್ಯಕ್ರಮದಂತೆ ಕೇಂದ್ರ ನಾಯಕರನ್ನು ಮೆಚ್ಚಿಸಲು ಹೊರಟು ಕನ್ನಡವನ್ನು ಕಡೆಗಣಿಸಿದ್ದಾರೆ ಎಂದರು.
ಕೇವಲ ಹಿಂದಿ ಭಾಷೆಯ ಫಲಕಗಳನ್ನು ಮೆರೆಸಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದೀರಿ, ಈಗಾಗಲೇ ಎಷ್ಟೋ ವಿಚಾರಗಳಾದ ನಾಡು, ನುಡಿ, ಗಡಿ ವಿಚಾರಗಳಿಗೆ ಸಂಬಂಧಿಸಿದಂತೆ ಕನ್ನಡ ಹೋರಾಟಗಾರರ ಪರ ಸರ್ಕಾರ ನಿಲ್ಲದೆ ಇರುವುದು ದುರ್ದೈವದ ಸಂಗತಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದೆ ರೀತಿ ಆನೆ ನಡೆದದ್ದೇ ದಾರಿ ಎಂಬ ಧೋರಣೆ ಪ್ರಜಾಪ್ರಭುತ್ವದಲ್ಲಿ ಸಲ್ಲದು, ಇದಕ್ಕೆ ಕಾರಣಕರ್ತರಾದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ ಹಾಗೂ ತಮ್ಮ ಸರ್ಕಾರ ಅಧಿಕಾರ ನಡೆಸುತ್ತಿರುವುದು ಪ್ರಜ್ಞಾವಂತ, ಸ್ವಾಭಿಮಾನಿ ಕನ್ನಡ ಮತಬಾಂಧವರಿಂದಲೇ ಎಂಬುದನ್ನು ಮರೆಯಬಾರದು ಎಂದಿದ್ದಾರೆ.
ಈಗಾಗಲೇ ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ವಿಚಾರ ವಿಕೋಪಕ್ಕೆ ಹೋಗುತ್ತಿದ್ದು, ಇದು ಗಾಯದ ಮೇಲೆ ಬರೆ ಎಳೆದಂತೆ ಆಗುವುದಿಲ್ಲವೇ, ಇದು 7.5 ಕೋಟಿ ಕನ್ನಡಿಗರ ಸರ್ಕಾರವೇ ಹೊರತು, ಹಿಂದಿ ಭಾಷಿಗರ ಸರ್ಕಾರವಲ್ಲ. ಆದುದರಿಂದ ನಾಡು, ನುಡಿ, ಗಡಿಯನ್ನು ಕಾಪಾಡಬೇಕಾದ ಸರ್ಕಾರಗಳೇ ಈ ರೀತಿ ವರ್ತಿಸುವುದನ್ನು ಬಿಟ್ಟು ಮುಂದಿನ ದಿನಗಳಲ್ಲಿ ಈ ರೀತಿಯ ಅಚಾತುರ್ಯ ನಡೆಯದಂತೆ ಕನ್ನಡಿಗರ ಹಿತ ಕಾಯಬೇಕೆಂದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಈ ವಿಚಾರದ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಓದಿ: ಕನ್ನಡಿಗರು ವಿಶಾಲ ಹೃದಯಿಗಳು, ವಿಶಾಲತೆ ದೌರ್ಬಲ್ಯ ಅಂದ್ಕೊಳ್ಬೇಡಿ: ಟಿ. ಎಸ್. ನಾಗಾಭರಣ