ಬೆಂಗಳೂರು : ರಾಜ್ಯದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆಯಲ್ಲಿ ಲೋಪದೋಷಗಳು ಕಂಡುಬಂದಿರುವುದರಿಂದ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಇಲಾಖೆಗಳ ಸಂಬಂಧಪಟ್ಟ ಕಾರ್ಯದರ್ಶಿಗಳ ಸಭೆ ನಡೆಸಿ ಲೋಪದೋಷಗಳಿಗೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಂಟಿ ಸದನ ಸಮಿತಿ ಆಗ್ರಹಿಸಿದೆ.
ಅಧಿಕಾರಿ, ಸಿಬ್ಬಂದಿಯಿಂದಲೇ ನಷ್ಟ ವಸೂಲಿ: ರಾಜ್ಯದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆ ಮತ್ತು ನಿರ್ವಹಣೆ ವಿಚಾರದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತಂತೆ ವಿಚಾರಣೆಯನ್ನು ನಡೆಸಿ ವರದಿಯನ್ನು ನೀಡಲು ರಚಿಸಲಾದ ಜಂಟಿ ಸದನ ಸಮಿತಿ ಅಧ್ಯಕ್ಷ ಅಭಯ್ ಪಾಟೀಲ್ ಅವರು ನಿನ್ನೆ ವಿಧಾನಸಭೆಯಲ್ಲಿ ಮಂಡಿಸಿದರು. ಲೋಪದೋಷದಿಂದಾಗಿ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಅಧಿಕಾರಿ/ಸಿಬ್ಬಂದಿಯಿಂದಲೇ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಒತ್ತಾಯಿಸಲಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸುವ ನಿಟ್ಟಿನಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅತಿ ಹೆಚ್ಚು ಘಟಕಗಳನ್ನು ಅಳವಡಿಸಿ, ನಿರ್ವಹಣೆಯನ್ನು ಉತ್ತಮ ಮಾಡುತ್ತಿದೆ. ಹಾಗಾಗಿ, ಈ ಇಲಾಖೆಯನ್ನು ನೋಡಲ್ ಇಲಾಖೆಯನ್ನಾಗಿ ಮಾಡಬೇಕು ಮತ್ತು ಎಲ್ಲಾ ಇಲಾಖೆಗಳು ಈ ಇಲಾಖೆಯ ಸೂಚನೆಯ ಮೇರೆಗೆ ಘಟಕಗಳನ್ನು ಅಳವಡಿಕೆ ಮಾಡಿ ನಿರ್ವಹಣೆ ಮಾಡಬೇಕು. ಘಟಕಗಳ ಸ್ಥಾಪನೆ ಮತ್ತು ಉತ್ತಮ ನಿರ್ವಹಣೆಗೆ ಸಂಬಂಧಿಸಿದಂತೆ ಗುತ್ತಿಗೆದಾರರನ್ನು ಆಯ್ಕೆ ಮಾಡುವಾಗ ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಬೇಕು ಎಂದು ಒತ್ತಾಯಿಸಲಾಗಿದೆ.
ಇದನ್ನೂ ಓದಿ:ಇಬ್ಬರು ಮಹಿಳಾ ಅಧಿಕಾರಿಗಳಿಗೆ ಕಾನೂನು ಪಾಲಿಸಲು ಸೂಚನೆ: ಸಿಎಂ
ಪ್ರಕರಣದ ತನಿಖೆ ಸಿಐಡಿಗೆ ಒಪ್ಪಿಸಬೇಕು: ಹಾಲಿ ನಿರ್ವಹಿಸಿರುವ ಕಾಮಗಾರಿಗಳಲ್ಲಿ ಲೋಪವೆಸಗಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಘಟಕಗಳ ಅಳವಡಿಕೆ ಮತ್ತು ನಿರ್ವಹಣೆ ವಿಚಾರದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತಂತೆ ಕೇವಲ ಶೇ. 10 ರಷ್ಟು ಪರಿಶೀಲನೆ ಮಾಡಿದಾಗ ಇಷ್ಟೊಂದು ಲೋಪದೋಷಗಳು ಕಂಡುಬಂದಿದೆ. ಪೂರ್ಣ ಪ್ರಮಾಣದಲ್ಲಿ ಪರಿಶೀಲನೆ ನಡೆಸಿದರೆ ಇನ್ನೂ ಹೆಚ್ಚಿನ ಲೋಪದೋಷಗಳು ಉಂಟಾಗಿರುವುದು ಕಂಡುಬರಬಹುದು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದು ಅವಶ್ಯಕತೆ ಇದೆ. ಹೀಗಾಗಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು ಎಂದು ತಿಳಿಸಿದೆ.
ಏಜೆನ್ಸಿಯವರೇ ಐದು ವರ್ಷಗಳ ಕಾಲ ಘಟಕಗಳ ನಿರ್ವಹಣೆಗೆ ಷರತ್ತು: ರಸ್ತೆ ಅಗಲೀಕರಣಕ್ಕಾಗಿ 11 ಘಟಕಗಳನ್ನು ಕೆಡವಿ ಹಾಕಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಹಿತಿ ನೀಡಿದೆ. ಈ ಬಗ್ಗೆ ಪರಿಶೀಲನೆ ನಡೆಸದೆ ಘಟಕಗಳನ್ನು ನಿರ್ಮಿಸಿದಂತೆ ಕೆಡವಿ ಹಾಕಿರುವುದಕ್ಕೆ ಸಮಂಜಸವಲ್ಲ. ತೆರಿಗೆದಾರರ ಹಣ ವ್ಯರ್ಥವಾಗಿರುವುದರಿಂದ ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಂಡು, ಸರ್ಕಾರಕ್ಕೆ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಬೇಕು. ಘಟಕಗಳ ಅಳವಡಿಕೆಯ ಕಾರ್ಯವನ್ನು ವಹಿಸಿಕೊಂಡ ಏಜೆನ್ಸಿಯವರೇ ಐದು ವರ್ಷಗಳ ಕಾಲ ಘಟಕಗಳ ನಿರ್ವಹಣೆಯನ್ನು ಸಹ ಮಾಡುವಂತೆ ಷರತ್ತು ವಿಧಿಸಬೇಕೆಂದು ಸಮಿತಿ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರಿನ ಕೃಷಿಕ್ ಸಮಾಜದ ಕಟ್ಟಡ ಬಳಕೆಗೆ ಹೈಕೋರ್ಟ್ ಅನುಮತಿ