ಬೆಂಗಳೂರು: ನಾಳೆ ಸದನಲ್ಲಿ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಮುಂಬೈನಲ್ಲಿ ಬೀಡುಬಿಟ್ಟಿದ್ದ ಪಕ್ಷೇತರ ಶಾಸಕರು ಇಂದು ರಾತ್ರಿ ವೇಳೆಗೆ ಬೆಂಗಳೂರಿಗೆ ಬಂದು ತಲುಪಲಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷೇತರ ಶಾಸಕರಾದ ನಾಗೇಶ್, ಆರ್.ಶಂಕರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮುಂಬೈಗೆ ಹಾರಿದ್ದರು. ನಾಳೆ ಬೆಳಗ್ಗೆ ಸದನದಲ್ಲಿ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಸದನಕ್ಕೆ ಹಾಜರಾಗಲು ಬೆಂಗಳೂರಿಗೆ ಬರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂಬೈನಿಂದ ಹೈದರಾಬಾದ್ ಮೂಲಕ ಬೆಂಗಳೂರಿಗೆ ಬರಲು ಪಕ್ಷೇತರ ಶಾಸಕರು ನಿರ್ಧಾರ ಮಾಡಿದ್ದು, ತಡರಾತ್ರಿ ವೇಳೆಗೆ ಯಲಹಂಕದ ರಮಡಾ ರೆಸಾರ್ಟ್ಗೆ ಬರುವ ಸಾಧ್ಯತೆ ಇದೆ. ನಾಳೆ ಬೆಳಗ್ಗೆ ಬಿಜೆಪಿ ಶಾಸಕರ ಜೊತೆ ಪಕ್ಷೇತರರು ಕೂಡ ನೇರವಾಗಿ ವಿಧಾನಸೌಧಕ್ಕೆ ತೆರಳಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.