ಅಸಮಾಧಾನಿತ ಸಚಿವರನ್ನು ಕರೆದು ಮಾತನಾಡುತ್ತೇನೆ: ಸಿಎಂ ಬೊಮ್ಮಾಯಿ - ಸಿಎಂ ಬೊಮ್ಮಾಯಿ ಸಂಪುಟ
ಬೊಮ್ಮಾಯಿ ಸಚಿವ ಸಂಪುಟ ರಚನೆಯಾಗಿದ್ದು, ಕೆಲ ಶಾಸಕರು ಹಾಗೂ ಸಚಿವರಲ್ಲೂ ಅಸಮಾಧಾನ ವ್ಯಕ್ತವಾಗಿದೆ. ಕೆಲ ಸಚಿವರಿಗೆ ನಿರೀಕ್ಷಿತ ಖಾತೆ ಸಿಗಲಿಲ್ಲ ಎಂಬ ಬೇಸರವಿದ್ದು, ಕೆಲವರಲ್ಲಿ ಸಚಿವ ಸ್ಥಾನ ಕೈತಪ್ಪಿದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ಬೆಂಗಳೂರು: ಅಸಮಾಧಾನಿತ ಸಚಿವರನ್ನು ಕರೆದು ನಾನು ಮಾತನಾಡುತ್ತೇನೆ. ಎಲ್ಲರೂ ನಮ್ಮ ಸ್ನೇಹಿತರು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಎಲ್ಲಾ ಮಂತ್ರಿಗಳಿಗೂ ಖಾತೆ ಹಂಚಲಾಗಿದೆ. ಮುಂದೆ ಅವರವರ ಖಾತೆಗಳನ್ನು ಉತ್ತಮವಾಗಿ ನಿಭಾಯಿಸ್ತಾರೆ. ಅಸಮಾಧಾನಿತರನ್ನು ಕರೆದು ಮಾತನಾಡುತ್ತೇನೆ. ಎಲ್ಲರೂ ನನ್ನ ಸ್ನೇಹಿತರೇ ಎಂದರು.
ಸಂಘನಿಷ್ಠರಿಗೆ, ಹೊಸಬರಿಗೆ ಮಹತ್ವದ ಖಾತೆ ಕೊಟ್ಟ ವಿಚಾರವಾಗಿ ಮಾತನಾಡಿದ ಅವರು, ಆಡಳಿತದಲ್ಲಿ ಬದಲಾವಣೆ ತರಬೇಕು ಎಂದು ಖಾತೆ ಹಂಚಿಕೆ ಮಾಡಲಾಗಿದೆ. ದೇವೇಗೌಡರ ಮನೆಗೆ ಸಿಎಂ ಹೋಗಿದ್ದರಿಂದ ನನಗೆ ಸಚಿವ ಸ್ಥಾನ ತಪ್ಪಿದೆ ಎಂಬ ಪ್ರೀತಂಗೌಡ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, ಅವರೆಲ್ಲರೂ ನನ್ನ ಸ್ನೇಹಿತರು, ಕರೆದು ಮಾತನಾಡುತ್ತೇನೆ ಎಂದರು.
ಯಾರಿಗೆಲ್ಲ ಅಸಮಾಧಾನ
ಜೊತೆಗೆ ಖಾತೆ ಹಂಚಿಕೆಯಾದ ಬೆನ್ನಲೆ ಕೆಲ ಸಚಿವರು ಅಸಮಾಧಾನಗೊಂಡಿದ್ದು, ತಮಗಿಷ್ಟವಾದ ಖಾತೆ ಸಿಗಲಿಲ್ಲ ಎಂಬ ಬೇಸರ ಹೊರಹಾಕಿದ್ದಾರೆ. ಪ್ರಮುಖವಾಗಿ ನನಗಿಷ್ಟವಾದ ಖಾತೆ ಹಂಚಿಕೆಯಾಗಿಲ್ಲ ಎಂದು ಸಚಿವ ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ ಖಾತೆ ನೀಡಲಾಗಿದೆ, ಜೊತೆಗೆ ಸಮಾಜ ಕಲ್ಯಾಣ ಖಾತೆಯ ಬೇಡಿಕೆಯಲ್ಲಿದ್ದ ಸಚಿವ ಶ್ರೀರಾಮುಲುಗೆ ಸಾರಿಗೆ ಇಲಾಖೆ ನೀಡಲಾಗಿದ್ದು, ಅವರಲ್ಲೂ ಬೇಸರ ಕೇಳಿಬಂದಿದೆ.
ಇತ್ತ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಸಚಿವಸ್ಥಾನದಿಂದ ವಂಚಿತರಾಗಿದ್ದು, ಜಿಲ್ಲೆಯ ಪರವಾಗಿ ಒಂದಾದರೂ ಸಚಿವಸ್ಥಾನ ಸಿಗಬೇಕು ಎಂದಿದ್ದಾರೆ. ಜಿಲ್ಲೆಯಲ್ಲಿ ಐದು ಜನ ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಿ ಎಂದಿದ್ದಾರೆ.
ಹುಬ್ಬಳ್ಳಿಯ ಪ್ರಬಲ ಸಚಿವಾಕಾಂಕ್ಷಿಯಾಗಿದ್ದ ಶಾಸಕ ಅರವಿಂದ್ ಬೆಲ್ಲದ್ಗೆ ಸಚಿವ ಸ್ಥಾನ ಕೈತಪ್ಪಿದ್ದರಿಂದಾಗಿ ಅಸಮಾಧಾನಗೊಂಡಿದ್ದರು. ಇದೀಗ ಶಂಕರ್ ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದು, ಅವರ ಭೇಟಿಗೂ ಬೆಲ್ಲದ್ ಮುಂದಾಗದೇ ಅಸಮಾಧಾನ ಹೊರಹಾಕಿದ್ದಾರೆ.
ಓದಿ: ಆ ವ್ಯಕ್ತಿಯ ಫೋನ್ ಕಾಲ್ನಿಂದ ನನಗೆ ಸಚಿವ ಸ್ಥಾನ ತಪ್ಪಿತು: ಶಾಸಕ ರಾಮದಾಸ್