ಬೆಂಗಳೂರು: ಮನ್ಸೂರ್ ಯಾರು ಅಂತಾನೇ ನನಗೆ ಗೊತ್ತಿಲ್ಲ. ಅವನನ್ನು ನಾನು ನೋಡಿಯೂ ಇಲ್ಲ, ಮಾತನಾಡಿಯೂ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ ಶರವಣ ಸ್ಪಷ್ಟೀಕರಣ ನೀಡಿದ್ದಾರೆ.
ನಿನ್ನೆ ಐಎಂಎ ಸಂಸ್ಥಾಪಕ ಮನ್ಸೂರ್ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಟಿ.ಎ.ಶರವಣ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದ. ಈ ಸಂಬಂಧ ವಿವಿ ಟವರ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಕರಣ ಸಂಬಂಧ ಎಸ್ಐಟಿ ತನಿಖೆ ನಡಿಯುತ್ತಿದೆ. ತನಿಖೆ ದಾರಿ ತಪ್ಪಿಸಲು ನಮ್ಮ ಹೆಸರು ಹೇಳುತ್ತಿದ್ದಾರೆ. ಐಎಂಎ ವಂಚನೆ ಬಗ್ಗೆ ನಮ್ಮ ಅಸೋಸಿಯೇಶನ್ಗೂ ದೂರು ಬಂದಿತ್ತು ಎಂದು ತಿಳಿಸಿದರು.
ಚಿನ್ನಾಭರಣ ವ್ಯಾಪಾರದಲ್ಲಿ ಗ್ರಾಹಕರಿಗೆ ಮೋಸ ಆದ ಬಗ್ಗೆ ದೂರು ಬಂದರೆ ಧ್ವನಿ ಎತ್ತೋಣ ಎಂದು ನಮ್ಮವರ ಬಳಿ ಹೇಳಿದ್ದೆ. ಅದು ಅವರ ಗಮನಕ್ಕೆ ಹೋಗಿ ಈ ರೀತಿ ಮಾತನಾಡಿರಬಹುದು. ಯಾವುದಾದರೂ ಸಾಕ್ಷಿ ಇದ್ದರೆ ಬಿಡುಗಡೆ ಮಾಡಲಿ. ಆಧಾರರಹಿತ ಆರೋಪ ಮಾಡುವವರ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇನೆ. ತನಿಖೆಗೆ ಸಂಪೂರ್ಣ ಸಹಕಾರ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.