ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಶ್ರಮ ಬಹಳ ಇದೆ : ಗೃಹ ಸಚಿವ ಆರಗ ಜ್ಞಾನೇಂದ್ರ - home minister araga jnanendra thanked to police personals
ಎಲ್ಲಕ್ಕಿಂತ ಪ್ರಮುಖವಾಗಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ಅಧಿಕಾರಿಗಳಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದರು. ಪುನೀತ್ ಅಭಿಮಾನಿಗಳು ಶಾಂತಿಯಿಂದ, ಶಿಸ್ತಿನಿಂದ ಸರ್ಕಾರಕ್ಕೆ ಸಹಕಾರ ನೀಡಿದ್ದಾರೆ. ರಾಜ್ ಕುಟುಂಬ ಸರ್ಕಾರಕ್ಕೆ ಸಹಕಾರ ಕೊಟ್ಟಿದ್ದಾರೆ..

ಬೆಂಗಳೂರು : ಖ್ಯಾತ ನಟ ಪುನೀತ್ ರಾಜ್ಕುಮಾರ್ ನಿಧನದ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡಿದ ಎಲ್ಲಾ ಪೊಲೀಸರಿಗೂ ಗೃಹ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.
ಸುಮಾರು 20 ಲಕ್ಷ ಜನರು ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಇದೆಲ್ಲವನ್ನೂ ನಿಯಂತ್ರಣ ಮಾಡುವುದರಲ್ಲಿ ಪೊಲೀಸರ ಶ್ರಮ ಬಹಳ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರಲ್ಲಿ 20 ಸಾವಿರ ಪೊಲೀಸರು, ಜಿಲ್ಲೆಗಳಿಂದ ಒಂದೂವರೆ ಸಾವಿರ ಪೊಲೀಸರು, ಸೆಂಟ್ರಲ್ ಫೋರ್ಸ್ ಜೊತೆಗೆ 50 ಕೆಎಸ್ಆರ್ಪಿ ತುಕಡಿ ಸೇರಿದಂತೆ ಎಲ್ಲರೂ ನಿದ್ದೆ ಬಿಟ್ಟು ಶ್ರಮಪಟ್ಟಿದ್ದಾರೆ. ಎಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ.
ಎಲ್ಲಕ್ಕಿಂತ ಪ್ರಮುಖವಾಗಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ಅಧಿಕಾರಿಗಳಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದರು. ಪುನೀತ್ ಅಭಿಮಾನಿಗಳು ಶಾಂತಿಯಿಂದ, ಶಿಸ್ತಿನಿಂದ ಸರ್ಕಾರಕ್ಕೆ ಸಹಕಾರ ನೀಡಿದ್ದಾರೆ. ರಾಜ್ ಕುಟುಂಬ ಸರ್ಕಾರಕ್ಕೆ ಸಹಕಾರ ಕೊಟ್ಟಿದ್ದಾರೆ.
ರಾಜ್ ಕುಟುಂಬ ಸರ್ಕಾರಕ್ಕೆ ಧನ್ಯವಾದ ತಿಳಸಿರುವುದು ಅದು ಅವರ ಸೌಜನ್ಯ ಎಂದ ಸಚಿವರು, ಮಾಧ್ಯಮಗಳು ಕೂಡ ಉತ್ತಮ ಕೆಲಸ ಮಾಡಿವೆ. ಕೋಟ್ಯಂತರ ಜನ ಮಾಧ್ಯಮಗಳಲ್ಲಿ ವೀಕ್ಷಿಸಿದ್ದಾರೆ,ಮಾಧ್ಯಮಗಳಿಗೂ ಧನ್ಯವಾದಗಳು ಎಂದರು.
ಇದನ್ನೂ ಓದಿ:ಪುನೀತ್ 'ಹೃದಯದ ಸ್ಟಾರ್'.. ಕಣ್ಣೀರಿಡುತ್ತಾ ಪುನೀತ್ ಸರಳತೆ, ಸಮಾಜ ಸೇವೆ ನೆನೆದ ಡಿಕೆಶಿ
ಅಭಿಮಾನಿಗಳಿಗೆ ನಳಿನ್ಕುಮಾರ್ ಕಟೀಲ್ ಕೃತಜ್ಞತೆ : ಕನ್ನಡದ ಕಣ್ಮಣಿ, ಯುವನಟ ಪುನೀತ್ ರಾಜ್ಕುಮಾರ್ ಅವರ ನಿಧನದ ಬಳಿಕ ನಡೆದ ಪಾರ್ಥಿವ ಶರೀರಕ್ಕೆ ಗೌರವಾರ್ಪಣೆ, ಅಂತಿಮ ವಿಧಿ-ವಿಧಾನದ ಸಂದರ್ಭದಲ್ಲಿ ಅತ್ಯಂತ ಸಂಯಮದಿಂದ ವರ್ತಿಸಿದ ಕನ್ನಡದ ಮೇರುನಟರಾದ ಡಾ.ರಾಜ್ಕುಮಾರ್ ಅವರ ಕುಟುಂಬವರ್ಗದವರಿಗೆ ಮತ್ತು ಶಿಸ್ತಿನಿಂದ ವರ್ತಿಸಿ ಗೌರವ ಸಮರ್ಪಿಸಿದ ಅಭಿಮಾನಿಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಕೃತಜ್ಞತೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕಠಿಣ ಸಂದರ್ಭದಲ್ಲಿ ಆಸ್ಪತ್ರೆಗೆ ತಕ್ಷಣ ಭೇಟಿ ನೀಡಿ, ನಿರಂತರವಾಗಿ ಸ್ಥಳದಲ್ಲಿ ಹಾಜರಿದ್ದು, ಅತ್ಯಂತ ಸಮರ್ಥವಾಗಿ ಪರಿಸ್ಥಿತಿಯನ್ನು ನಿಭಾಯಿಸಿ, ಸಮಸ್ತ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ, ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನಗಳನ್ನು ನೀಡಿ ಶಾಂತಿ ಕಾಪಾಡಲು ಕಾರಣಕರ್ತರಾಗಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸನ್ನಿವೇಶವನ್ನು ನಿಭಾಯಿಸಿದ ರೀತಿಯೂ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದು ನಳಿನ್ಕುಮಾರ್ ಕಟೀಲ್ ತಿಳಿಸಿದ್ದಾರೆ.