ಬೆಂಗಳೂರು: ಗಂಡನ ಮೈಬಣ್ಣವನ್ನು ನಿಂದಿಸಿ ಅವಮಾನಿಸುತ್ತಿದ್ದ ಪತ್ನಿಯ ಧೋರಣೆಯನ್ನು ಕ್ರೌರ್ಯವೆಂದು ಪರಿಗಣಿಸಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು, ದಂಪತಿಗೆ ವಿಚ್ಚೇದನ ನೀಡಿ ಆದೇಶಿಸಿದೆ. ವಿಚ್ಛೇದನ ಮಂಜೂರಾತಿಗೆ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ನ ವಿಭಾಗೀಯ ಪೀಠ ಪುರಸ್ಕರಿಸಿ, ತೀರ್ಪು ನೀಡಿತು.
ಪ್ರಕರಣದಲ್ಲಿ ಪತಿಯ ಅಕ್ರಮ ಸಂಬಂಧ ಕುರಿತಂತೆ ಪತ್ನಿ ಆಧಾರರಹಿತ ಆರೋಪ ಮಾಡಿದ್ದಾರೆ. ಇಂತಹ ಆರೋಪ ಮಾಡುವುದರಿಂದ ಅಪರಿಮಿತ ಮಾನಸಿಕ ಹಿಂಸೆ (ಕ್ರೌರ್ಯ) ಉಂಟಾಗಲಿದೆ. ಪತಿ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಮಹಿಳೆ ಹಲವು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಹಲವು ವರ್ಷಗಳಿಂದ ಪತಿಯ ಸಂಪರ್ಕದಲ್ಲಿಲ್ಲದ ಪತ್ನಿ, ಪತಿಯೊಂದಿಗೆ ಸಹಬಾಳ್ವೆ ನಡೆಸಲು ಸಿದ್ಧಳಿದ್ದೇನೆ. ಆದರೆ, ಯಾವ ಕಾರಣಕ್ಕೂ ಅವರ ವಿರುದ್ಧ ದಾಖಲಿಸಿರುವ ದೂರು ಹಿಂಪಡೆಯವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದರಿಂದ ಪತಿಯೊಂದಿಗೆ ಮತ್ತೆ ಬಾಳುವ ಆಸಕ್ತಿ ಪತ್ನಿಗೆ ಇಲ್ಲವಾಗಿದ್ದು, ಅವರ ನಡುವೆ ದೊಡ್ಡ ಬಿರುಕು ಇರುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ಕ್ರೌರ್ಯ ಆಧಾರದ ಮೇಲೆ ಪತಿಗೆ ವಿಚ್ಛೇದನ ಮಾಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಪ್ಪು ಚರ್ಮದವರೆಂದು ಸದಾ ಹೇಳುವ ಮೂಲಕ ಪತಿಗೆ ಪತ್ನಿ ಅವಮಾನ ಮಾಡುತ್ತಿದ್ದರು. ಸಕಾರಣವಿಲ್ಲದಿದ್ದರೂ ಪತಿಯ ಜೊತೆಗಿರದೇ ಪತ್ನಿ ತವರು ಮನೆ ಸೇರಿದ್ದಾರೆ. ಆದರೆ, ಈ ವಿಷಯ ಮರೆಮಾಚಲು ಪತಿ ಮೇಲೆ ಅಕ್ರಮ ಸಂಬಂಧ ಕುರಿತು ಸುಳ್ಳು ಆರೋಪ ಹೊರಿಸಿದ್ದಾರೆ. ಇದು ನಿಸ್ಸಂದೇಹವಾಗಿ ಕ್ರೌರ್ಯವಾಗಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ, ಪತಿಗೆ ವಿಚ್ಛೇದನ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?: ಬೆಂಗಳೂರಿನ ನಿವಾಸಿ ರಾಜೇಶ್ ಮತ್ತು ಅಂಬಿಕಾ (ಇಬ್ಬರ ಹೆಸರು ಬದಲಿಸಲಾಗಿದೆ) 2007ರಲ್ಲಿ ಮದುವೆಯಾಗಿದ್ದರು. 2012ರಲ್ಲಿ ವಿಚ್ಛೇದನ ಕೋರಿ ರಾಜೇಶ್ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸುವ ಮೂಲಕ ವಿಚ್ಛೇದನ ನಿರಾಕರಿಸಿ ಬೆಂಗಳೂರಿನ 2ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯ 2017ರ ಜ.13ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ರಾಜೇಶ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ವಿವಾಹ ನಂತರ ಪತ್ನಿ ಸದಾ ನನ್ನನ್ನು ಕಪ್ಪು ಚರ್ಮದವರೆಂದು ಅವಮಾನಿಸುತ್ತಿದ್ದರು. ಮಗಳಿಗಾಗಿ ನಾನು ಆ ಅವಮಾನ ಸಹಿಕೊಳ್ಳುತ್ತಿದ್ದೆ. ಪತ್ನಿ 2011ರ ಅ.29ರಂದು ನನ್ನ ಹಾಗೂ ವೃದ್ಧ ತಾಯಿ ಸೇರಿ ಕುಟುಂಬ ಸದಸ್ಯರೆಲ್ಲರ ವಿರುದ್ಧ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಇದೇ ಸಂಬಂಧ ಹಲವು ದಿನಗಳ ಕಾಲ ಪೊಲೀಸ್ ಠಾಣೆ ಮತ್ತು ಕೋರ್ಟ್ಗೆ ಅಲೆದಾಡುವಂತಾಯಿತು. ಬಳಿಕ ನನ್ನ ತೊರೆದು ತವರು ಮನೆ ಸೇರಿದ ಪತ್ನಿ ಹಲವು ದಿನಗಳಾದರೂ ಹಿಂದಿರುಗಲಿಲ್ಲ. ನನ್ನೊಂದಿಗೆ ದಾಂಪತ್ಯ ಜೀವನ ಮುಂದುವರಿಸಲು ಆಕೆ ಆಸಕ್ತಿ ಹೊಂದಿಲ್ಲ. ಪತ್ನಿಯ ನಡೆಯಿಂದ ಮಾನಸಿಕ ಯಾತನೆ ಅನುಭವಿದ್ದೇನೆ. ಅದರಿಂದ ನಾನು ಖಿನ್ನತೆಗೂಳಗಾದೆ. ಪತ್ನಿ ಎಸಗಿರುವ ಕ್ರೌರ್ಯ ಪರಿಗಣಿಸಿ ವಿಚ್ಛೇದನ ಮಂಜೂರು ಮಾಡಬೇಕು ಎಂದು ಮೇಲ್ಮನವಿಯಲ್ಲಿ ಅರ್ಜಿದಾರರು ಕೋರಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪತ್ನಿ, "ಪತಿ ಬೇರೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಅವರಿಗೆ ಮಗು ಸಹ ಜನಿಸಿದೆ. ಮೊದಲಿಗೆ ಗಂಡನ ಮನೆಯಲ್ಲಿಯೇ ಅತ್ತೆ, ನಾದಿನಿ ಮತ್ತು ಮೈದುನನ ಜೊತೆಗೆ ವಾಸವಾಗಿದ್ದೆ. 2011ರ ಏ.7ರಂದು ಪ್ರತ್ಯೇಕ ಮನೆ ಮಾಡಿದಾಗಲೂ ಗಂಡನ ಕುಟುಂಬ ಸದಸ್ಯರು ಮನೆಗೆ ಬರುತ್ತಿದ್ದರು. ಪತಿ ನನ್ನ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಠೋರವಾಗಿ ವರ್ತಿಸುತ್ತಿದ್ದರು. ನಿತ್ಯ ಮನೆಗೆ ತಡರಾತ್ರಿ ಬರುತ್ತಿದ್ದರು. ಮನೆಯಿಂದ ಹೊರ ಹೋಗಲು ಬಿಡುತ್ತಿರಲಿಲ್ಲ" ಎಂದು ಪ್ರತ್ಯಾರೋಪ ಮಾಡಿದ್ದರು.
ಇದನ್ನೂ ಓದಿ: PSI: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: ಸರ್ಕಾರ ಮರುಪರೀಕ್ಷೆ ನಡೆಸಬಹುದು- ಹೈಕೋರ್ಟ್