ಬೆಂಗಳೂರು: ನಿತ್ಯ ಅನ್ಯಧರ್ಮಗಳ ಮೇಲೆ ದಾಳಿ ಮಾಡುವ, ಜಾತಿಗಳನ್ನು ಮತಕ್ಕಾಗಿ ಬಳಸಿಕೊಳ್ಳುವ ಬಿಜೆಪಿಯಿಂದ ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
![HDK Tweet against BJP again!](https://etvbharatimages.akamaized.net/etvbharat/prod-images/5852326_hdk.jpg)
ಒಕ್ಕಲಿಗ ಎಂಬ ಹೆಸರನ್ನು ಕುಮಾರಸ್ವಾಮಿ ಬಳಸಬಾರದು. ಸಮಾಜವನ್ನು ಒಡೆಯುವ, ಕೆಲಸವನ್ನು ಹೆಚ್ಡಿಕೆ ಮಾಡುತ್ತಿದ್ದಾರೆ ಎಂಬ ಡಿಸಿಎಂ ಅಶ್ವತ್ಥನಾರಾಯಣ್ ಹೇಳಿಕೆಗೆ ಟ್ವಿಟರ್ ಮೂಲಕ ತಿರುಗೇಟು ನೀಡಿರುವ ಹೆಚ್ಡಿಕೆ, ಒಂದು ಸಮುದಾಯದ ನಾಯಕನನ್ನು ಟೀಕಿಸಲು ಅದೇ ಸಮುದಾಯದ ವ್ಯಕ್ತಿಯನ್ನು ಬಳಸಿಕೊಳ್ಳುವುದು ಬಿಜೆಪಿಯ ಸೋಂಕು. ಬಿಜೆಪಿ ನಾಯಕರೇ, ನಾನು ಒಕ್ಕಲಿಗ ಅಸ್ಮಿತೆಯ ಬಗ್ಗೆ ಮಾತನಾಡಿದ್ದೇನೆ. ಬಿಎಸ್ವೈ ಅವರಂತೆ ಚುನಾವಣಾ ವೇದಿಕೆಯಲ್ಲಿ ನಿಂತು ನನ್ನ ಜಾತಿಯ ಒಂದೂ ವೋಟ್ ಬೇರೆ ಪಕ್ಷಕ್ಕೆ ಹೋಗಬಾರದು ಎಂದು ಆಜ್ಞೆ ಮಾಡಿಲ್ಲವಲ್ಲ? ಮತಕ್ಕಾಗಿ ಜಾತಿಯನ್ನು ದುಡಿಸಿಕೊಂಡವರು ಬಿಎಸ್ವೈ, ಅಧಿಕಾರಕ್ಕಾಗಿ ಧರ್ಮಗಳನ್ನು ಒಡೆದವರು ಮೋದಿ, ನಾನಲ್ಲ ಎಂದು ಕಿಡಿಕಾರಿದ್ದಾರೆ.
![HDK Tweet against BJP again!](https://etvbharatimages.akamaized.net/etvbharat/prod-images/5852326_hdkk.jpg)
ಒಕ್ಕಲಿಗರು ಅಧಿಕಾರಕ್ಕೆ ಬರುವುದನ್ನು, ಹೋರಾಟ ಮಾಡುವುದನ್ನು ಬಿಜೆಪಿ ಸಹಿಸುವುದಿಲ್ಲ. ಒಕ್ಕಲಿಗ ನಾಯಕತ್ವವನ್ನು ಅಭದ್ರಗೊಳಿಸುವ ಪ್ರಯತ್ನ ಮಾಡುವ ಬಿಜೆಪಿ 'ಪಾಕಿಸ್ತಾನಿ' ಎನ್ನುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ಮಾಡಿದ್ದ ಅಪಮಾನವನ್ನು ಉಲ್ಲೇಖಿಸಿದ್ದೆ. ಒಕ್ಕಲಿಗರ ಜೀನ್ ಈ ಮಣ್ಣಿನಲ್ಲಿದೆ ಎಂಬುದನ್ನು ತಿಳಿಸಿದ್ದೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
![HDK Tweet against BJP again!](https://etvbharatimages.akamaized.net/etvbharat/prod-images/5852326_tweet.jpg)
ಒಕ್ಕಲಿಗರ ಜೀನ್ ಕರ್ನಾಟಕದ ಮಣ್ಣಿನಲ್ಲಿದೆ ಎಂದು ಹೇಳಿದರೆ, ಅಶ್ವತ್ಥ ನಾರಾಯಣ ಮತ್ತು ಬಿಜೆಪಿಗೆ ಏಕೆ ಕಣ್ಣು ಉರಿ? ನಿಮ್ಮ ಜೀನ್ ಪಾಕಿಸ್ತಾನದಲ್ಲಿದೆ ಎಂಬ ಮರುಕವೇ? ನಿಮ್ಮ ಸಿದ್ಧಾಂತ ಪ್ರತಿಪಾದಕರ ಜೀನ್ 'ನಾಜಿ' ಮೂಲದ್ದು ಎಂಬ ಬೇಸರವೇ? ಈ ಮಣ್ಣಿನವರಾದ 'ನಾವು' ನಮ್ಮ ಅಸ್ಮಿತೆ ಬಗ್ಗೆ ಮಾತಾಡುತ್ತೇವೆ. ತಡೆಯಲು ಬಿಜೆಪಿಗೆ ಸಾಧ್ಯವೇ? ಎಂದು ಸವಾಲು ಹಾಕಿದ್ದಾರೆ.
![HDK Tweet against BJP again!](https://etvbharatimages.akamaized.net/etvbharat/prod-images/5852326_tee.jpg)
ತನ್ನ ಧರ್ಮ, ಸಮಾಜದ ಬಗ್ಗೆ ಅಪಾರ ಗೌರವ ಇಟ್ಟುಕೊಂಡು ಇತರ ಧರ್ಮ, ಸಮಾಜಗಳ ಮೇಲೆ ಅಷ್ಟೇ ಗೌರವ ಹೊಂದುವುದು ನಾನು ನಂಬಿದ ಜಾತ್ಯತೀತತೆ. ಇದರಲ್ಲಿ ಒಕ್ಕಲಿಗ ಅಸ್ಮಿತೆಯೂ ಇದೆ, ಇತರ ಸಮಾಜದ ಮೇಲಿನ ಗೌರವವೂ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.